ಭಾನುವಾರ, ಫೆಬ್ರವರಿ 5, 2023

 

ಸರ್ವಜ್ಞನ ತ್ರಿಪದಿಗಳು : ಕೆಲವು ಟಿಪ್ಪಣಿಗಳು

                ಡಾ.ಸಿ.ನಾಗಭೂಷಣ

 

         ಸರ್ವಜ್ಞ  ಎಂಬುದು ಒಬ್ಬ ವ್ಯಕ್ತಿಯ ಹೆಸರಲ್ಲ, ಅದೊಂದು ಕಾವ್ಯ ಪದ್ಧತಿಗೆ ಇಟ್ಟ ಹೆಸರು. ಎಂದರೆ ಸರ್ವಜ್ಞವೆಂದು ನಾವು ಒಪ್ಪಿಕೊಂಡಿರುವ ಈ ತ್ರಿಪದಿಗಳಲ್ಲಿ ಎಷ್ಟನ್ನೋ ವಾಸ್ತವಾಗಿ ರಚಿಸಿದ ಕವಿಯೊಬ್ಬ ಈ ಪದ್ಧತಿಯು ಮೂಲದಲ್ಲಿ ಇದ್ದಿರಲೆ ಇಲ್ಲವೆಂದು ಈ ಮಾತಿನ ಅರ್ಥವಲ್ಲ. ಖಂಡಿತ ಇದನ್ನು ಬರೆದ ವ್ಯಕ್ತಿಯೊಬ್ಬ ಇದ್ದಿರಬೇಕು. ಅವನ ಹೆಸರೇನೋ ತಿಳಿಯದು. ಸರ್ವಜ್ಞ ಎಂಬುದೇ ಈ ತ್ರಿಪದಿಗಳಲ್ಲಿ ಎಷ್ಟನ್ನೊ ಬರೆದ ಕವಿಯ ಹೆಸರಿದ್ದಿರಬೇಕು. ಪ್ರಭು ಪ್ರಭುದೇವ ಎಂಬ ಹೆಸರಿನಂತೆ, ಸರ್ವಜ್ಞ ಎಂಬುದೂ ಒಬ್ಬ ವ್ಯಕ್ತಿಯ ಹೆಸರಾಗಿದ್ದಿರಬೇಕು ಎಂಬ ಅನಿಸಿಕೆಯನ್ನು ಸರ್ವಜ್ಞನ ಬಗೆಗೆ ಸಂಶೋಧನೆ ಕೈಗೊಂಡ ವಿದ್ವಾಂಸರಲ್ಲಿ  ಕೆಲವರು ವ್ಯಕ್ತಪಡಿಸಿದ್ದಾರೆ. ಸರ್ವಜ್ಞ ಎಂಬುದು ಕವಿಯ ಹೆಸರೋ ಅಥವಾ ಅಂಕಿತವೋ ಅಥವಾ ಎರಡು ಆಗಿದೆಯೋ ಎಂಬುದು ಇಂದಿಗೂ ಸಮಸ್ಯೆಯಾಗಿ ಉಳಿದಿದೆ. ಕೆಲವು ವಿದ್ವಾಂಸರು ಸರ್ವಜ್ಞ ಎಂದು ಯಾರಾದರೂ ಹೆಸರಿಟ್ಟು ಕೊಂಡಾರೆಯೇ, ಬಹುತೇಕ ಅದು ಒಂದು ಬಿರುದು ಅಥವಾ ಆತನ ಇಷ್ಟದೈವದ ಅಂಕಿತವಾಗಿರ ಬೇಕು ಎನ್ನುವ ಸಂದೇಹವನ್ನು ವ್ಯಕ್ತಪಡಿಸಿದ್ದಾರೆ.  ತನ್ನ ಹೆಸರು ಇತ್ಯಾದಿಗಳ ಹಂಗನ್ನು ಹರಿದುಕೊಂಡು, ಅತ್ಯಂತ ವ್ಯಕ್ತಿನಿರಸನದ ಸಂತೋಷದಲ್ಲಿ ಬದುಕಿದಂತೆ ತೋರುವ ಈ ವ್ಯಕ್ತಿಗೆ ಕೊಟ್ಟುದ್ದೇ ಹೆಸರು! ಇಂಥ ಕವಿಯ ಕಾಲದೇಶಾದಿ ಸಂಗತಿಗಳನ್ನು ನಾವು ನಿರ್ದಿಷ್ಟವಾಗಿ ಚೌಕಟ್ಟಿಗೆ ಒಳಪಡಿಸಿ ಹೇಳಲು ಸಾಧ್ಯವಿಲ್ಲ. ಸರ್ವಜ್ಞನು ಹುಟ್ಟಿ ಇಂದಿಗೆ ನಾಲ್ಕು ನೂರು ವರ್ಷಗಳ ಮೇಲಾದುವೆಂಬುದೂ ನಮ್ಮ ಕಲ್ಪನೆಯೇ.  ಸರ್ವಜ್ಞ ಎಂಬುದು ತಂದೆ ತಾಯಿಗಳು ಇಟ್ಟ ಹೆಸರಲ್ಲ. ವಯಸ್ಸು ಬಂದ ಮೇಲೆ ಈ ಹೆಸರನ್ನು ತಾನೇ ಇಟ್ಟು ಕೊಂಡಿರ ಬಹುದು. ಇದು  ಬಹುಮಟ್ಟಿಗೆ ಸಂಭವನೀಯವು ಹೌದು.

  ಸರ್ವಜ್ಞ ನೆಂಬುವನು ಗರ್ವದಿಂದಾವನೆ?

  ಸರ್ವರೊಳೊಂದು ನುಡಿಗಲಿತು ವಿದ್ಯೆಯ ಪರ್ವತವೇ ಆದ ಸರ್ವಜ್ಞ ಇದು ಸಹ ಆತನಿಗೆ ಇತರರು ಕೊಟ್ಟ ಬಿರುದು ಎಂದು ಕೆಲವರು ಊಹಿಸುತ್ತಾರೆ. ಒಟ್ಟಾರೆ ಸಂಶೋಧಕರ ಪ್ರಕಾರ ಸರ್ವಜ್ಞ ಎಂಬುದು ಎಲ್ಲವನ್ನೂ ತಿಳಿದ ಜ್ಞಾನಸ್ವರೂಪನಾದ ಭಗವಂತನನ್ನು ಮನಸ್ಸಿನಲ್ಲಿಟ್ಟುಕೊಂಡು ಉಪಯೋಗಿಸಿರುವ ಅಂಕಿತವಾಗಿ ತೋರುತ್ತದೆ. ಒಬ್ಬ ಸರ್ವಜ್ಞಕರ್ತನು ಜಗಕ್ಕೆಲ್ಲಾ ಒಬ್ಬನೇ ದೈವ. ಏನಿದ್ದರೂ ಜನಮಾನಸದಲ್ಲಿ ಬಳಕೆಯಲ್ಲಿ ಸರ್ವಜ್ಞ ಎಂಬುದು ಕವಿನಾಮವಾಗಿಯೂ ಅಚ್ಚಳಿಯದೇ ಉಳಿದಿರುವುದನ್ನೂ ಅಲ್ಲಗೆಳೆಯುವಂತಿಲ್ಲ. ಆದರೆ ಇಷ್ಟು ಮಾತ್ರ ನಿಜ: ವಚನಕಾರರ ಕಾಲದಿಂದ ಈಚೆಗೆ ಹದಿನಾರನೆಯ ಶತಮಾದ ಒಳಗಿನ ಅವಧಿಯಲ್ಲಿ ಇದ್ದಂಥ ವ್ಯಕ್ತಿತ್ವ ಇದು. ಈ ವ್ಯಕ್ತಿತ್ವದ ಕೆಲವು ಗೆರೆಗಳನ್ನು ಸರ್ವಜ್ಞನವೆಂದು ಹೇಳಲಾದ ತ್ರಿಪದಿಗಳಲ್ಲಿ ಗುರುತಿಸುವುದು ಸಾಧ್ಯವಾಗಿದೆ.

    `ಪಂಡಿತರುಂ ವಿವಿಧಕಳಾಮಂಡಿತರುಂ ಕೇಳುತಕ್ಕ ಕೃತಿ’ಗಳ ಪರಂಪರೆಯು ಕನ್ನಡ ಸಾಹಿತ್ಯದಲ್ಲಿ ಪ್ರಾರಂಭದಲ್ಲಿ ಕಂಡು ಬರುತ್ತದೆ. ಅಂಥ ಪರಂಪರೆಯಲ್ಲಿಯೂ ಕನ್ನಡದ ದೇಸಿಯನ್ನು ಮರೆಯದೆ, ಮಾರ್ಗ ದೇಸಿಗಳ ಒಡಂಬಡಿಕೆಯನ್ನು ಪಂಪನಂಥ ಉದ್ಧಾಮ ಕವಿಗಳು ಮಾಡಿದರು. ಮುಂದೆ ವಚನಕಾರರು ಜನಸಾಮಾನ್ಯರನ್ನೇ ಹೆಚ್ಚಾಗಿ ಉದ್ದೇಶಿಸಿ ಬೋಧನೆ ಮಾಡಲು ನಿರತರಾದ್ದರಿಂದ ಕನ್ನಡ ಸಾಹಿತ್ಯದಲ್ಲಿ ದೇಸಿಗೆ ಆಗ ಅಗ್ರಪಟ್ಟ ದೊರೆಯಿತು. ಮುಂದೆ ಹರಿಹರ-ರಾಘವಾಂಕರಂಥ ಕವಿಗಳ ಮೇಲೆಯೂ ಇದರ ಪ್ರಭಾವವಾಗದೆ ಹೋಗಲಿಲ್ಲ. ನಂತರ ಉದಯಿಸಿದ ಸರ್ವಜ್ಞನು ಜನತೆಯ ಕವಿಯಾಗಿ, ದೇಸಿಕಾವ್ಯ ಪದ್ಧತಿಗೆ ಗೌರವವನ್ನು ತಂದು ಕೊಟ್ಟನು. `ಕನ್ನಡ ಸಾಹಿತ್ಯದ ದೇಸಿತತ್ವವು ಸರ್ವಜ್ಞನಲ್ಲಿ ಸಾರ್ಥಕ್ಯವನ್ನು ಪಡೆದಿದೆ’.

ಜನನ-ಕಾಲ: 

     ಜನತೆಯು ಸರ್ವಜ್ಞನನ್ನು ಮಹಾತ್ಮರ ಸಾಲಿಗೆ ಸೇರಿಸಿ ಬಿಟ್ಟ ಪರಿಣಾಮವಾಗಿ ಅವನು ಕೈಲಾಸದಲ್ಲಿ ಶಿವನ ಹತ್ತಿರ ಇದ್ದ ಪುಷ್ಪದತ್ತನೆಂಬ ಗಣನಾಥನ ಅವತಾರವೆಂಬ ಭಾವನೆಯು ಬೆಳೆದು ಬಂದಿದೆ. ಸರ್ವಜ್ಞನ ಜನನದ ಬಗೆಗೆ ಎರಡು ವದಂತಿಗಳು ಜೀವಂತವಾಗಿದೆ. ಮೊದಲನೆಯದು-ಸರ್ವಜ್ಞ ಆರಾಧ್ಯ ಬ್ರಾಹ್ಮಣನಿಗೆ ಹುಟ್ಟಿದವನೆಂಬುದು. ಮಾಸೂರು ಗ್ರಾಮದ ಬಸವರಸನೆಂಬ ಆರಾಧ್ಯ ಬ್ರಾಹ್ಮಣನು ತನ್ನ ಸತಿಯ ಬಯಕೆಯಂತೆ ಮಕ್ಕಳನ್ನು ಪಡೆಯಬೇಕೆಂಬ ಹಂಬಲದಿಂದ ಕಾಶಿಗೆ ಹೋಗಿ ವಿಶ್ವನಾಥನ ಪ್ರಸಾದ ಪಡೆದು, ಮರಳುವಾಗ ದಾರಿಯಲ್ಲಿ ಅಂಬಲೂರು ಗ್ರಾಮದ ಕುಂಬಾರಸಾಲೆಯಲ್ಲಿ ಉಳಿದನು. ಹೀಗೆ ಕುಂಬಾರ ಮಾಳಿ ಮತ್ತು ಬಸವರಸರ ಆಕಸ್ಮಿಕವಾದ ಮೋಹದ ಮಗುವಾಗಿ ಸರ್ವಜ್ಞ ಜನಿಸಿದನು. ಸರ್ವಜ್ಞನ ಒಂದು ವಚನವೇ ಈ ಮಾತಿಗೆ ಪುಷ್ಠಿಯನ್ನು ಕೊಡುತ್ತದೆ.

ಅಂಬಲೂರೊಳಗೆಸೆವ ಕುಂಬಾರಸಾಲೆಯಲಿ

ಇಂಬಿನಾಕಳೆಯ ಮಾಳಿಯೊಳು ಬಸವರಸ-

ನಿಂಬಿಟ್ಟನೆನ್ನ ಸರ್ವಜ್ಞ.

ಎರಡನೆಯದಾಗಿ, `ಸರ್ವಜ್ಞನು ಪುರಾತನ ಶಿವಶರಣ ಕುಂಬಾರ ಗುಂಡಯ್ಯನ ಕುಲದವನಾಗಿದ್ದಿರಬಹುದು ಎಂದು ಊಹಿಸಲು ಬರುವಂತಿದೆ. ಇದಕ್ಕೆ ಆಧಾರವಾಗಿ ಮೈಸೂರು ಪ್ರಾಚ್ಯ ವಿದ್ಯಾಸಂಶೋಧನಾಲಯದ ಕೈಬರಹದ ಹೊತ್ತಿಗೆಯೊಂದರಲ್ಲಿರುವ -

ತಂದೆ ಕುಂಬಾರಮಲ್ಲ, ತಾಯಿ ಮಳಲಾದೇವಿ

ಇಂದು ಶೇಖರನ ವರಪುತ್ರ ಧರಣಿಗೆ

ಬಂದು ಜನಿಸಿದ ಸರ್ವಜ್ಞ

ಎಂಬ ವಚನವನ್ನು ನೋಡಬಹುದಾಗಿದೆ. ಸರ್ವಜ್ಞನು ಉಳಿದೆಲ್ಲ ವೃತ್ತಿಯ ಗುಣ-ದೋಷಗಳನ್ನು ಹೇಳಿ, ಕುಂಬಾರರ ಬಗೆಗೆ ಮಾತ್ರ ವಿಶೇಷ ಅಭಿಮಾನವನ್ನು ವ್ಯಕ್ತಪಡಿಸಿದ್ದು ಮೇಲಿನ ಅಭಿಪ್ರಾಯಕ್ಕೆ ಪೋಷಕವಾಗಿದೆ. ಆದರೆ ಇಷ್ಟರಿಂದಲೇ ಸರ್ವಜ್ಞನ ಜನನದ ವಿಷಯವಾಗಿ ಖಚಿತವಾದ ನಿರ್ಣಯಕ್ಕೆ ಬರಲು ಯಾವ ಸಬಲ ಆಧಾರವೂ ದೊರೆಯುವುದಿಲ್ಲ. ಇಂಥ ಸಂದರ್ಭದಲ್ಲಿ ರಂ.ಶ್ರೀ.ಮುಗಳಿ-ಯವರು ಹೇಳಿದಂತೆ-ಅವನ ಜನನ  ಅಸಾಂಪ್ರದಾಯಿಕವಾಗಿರಬಹುದೆಂದು ತೋರುತ್ತದೆ ಎಂದು ಮಾತ್ರ ಸೂಚಿಸಬಹುದು.

  ಈ ವ್ಯಕ್ತಿತ್ವ ಅನಿಕೇತನವಾದದ್ದು. ನಿಂತಲ್ಲಿ ನಿಲ್ಲದೆ ಗಾಳಿಯಂತೆ ಅಲೆದವನು ಇವನು. ‘ಮಂಡೆ ಬೋಳಿಸಿಕೊಂಡು ತುಂಡುಗಂಬಳಿ ಹೊದೆದು ಹಿಂಡನಗಲಿದ ಗಜದಂತೆ ಸುತ್ತಿದವನು ಕೈಯಲ್ಲೊಂದು ಕಪ್ಪರವನ್ನು ಹಿಡಿದು, ಹಿರಿದಾದ ನಾಡು ಎದುರಿಗಿರುವಾಗ ಪರಮೇಶನೆಂಬ ನಾಮವನ್ನು ನೆಚ್ಚಿ, ತಿರಿಯುತ್ತಲೇ ಊರಾರು ಸುತ್ತಿದ ಚಾರಣ ಕವಿ ಈತ. ಅಲ್ಲಮಪ್ರಭುವನ್ನು ಬಹುಮಟ್ಟಿಗೆ ನೆನಪಿಗೆ ತರುವ ಈ ಜಂಗಮನಿಗೆ ನೆಲವೇ ಹಾಸಿಗೆ, ಆಕಾವೇ ಹೊದಿಕೆ. ತನ್ನ ಪೂರ್ವತ್ತೋರಗಳನ್ನು ಕಳಚಿ ಎಸೆದು ಬಹುಮಟ್ಟಗೆ ದಿಗಂಬರನಾದ ಇಂಥವನ ತಂದೆ-ತಾಯಿ ಹಾಗೂ ಹುಟ್ಟಿನ ಗುಟ್ಟುಗಳನ್ನು ಇವನ ಕೆಲವು ತ್ರಿಪದಿಗಳಲ್ಲಿ ಗುರುತಿಸಬಹುದು ಎನ್ನುತ್ತಾರೆ ಕೆಲವರು ವಿದ್ವಾಂಸರು. ವಾಸ್ತವವಾಗಿ ಅವನ ತಂದೆ ತಾಯಿ ಹಾಗೂ ಸರ್ವಜ್ಞ ಹುಟ್ಟದ್ದು ಹೇಗೆ ಎಂಬುದನ್ನು ಹೇಳುವ ತ್ರಿಪದಿಗಳೂ ಯಾರೋ ಕಟ್ಟಿ ಸೇರಿಸಿದವುಗಳೆಂದೇ ನಮ್ಮ ಅಭಿಪ್ರಾಯ. ಕುಂಬಾರ ಮಾಳಿಯಲ್ಲಿ ದ್ವಿಜೋತ್ತಮನೊಬ್ಬನಿಗೆ ಹುಟ್ಟಿದವನು ಸರ್ವಜ್ಞ ಎಂಬ ಕತೆಯಲ್ಲಿ, ಈ ದೇಶದ ಪ್ರತಿಭೆಯೆಲ್ಲವೂ ಪ್ರತಿಷ್ಠಿತ  ವರ್ಗದ ಬೀಜದ ಬೆಳೆಸು ಎಂಬ ಪರಂಪರಾಗತವಾದ  ವರ್ಣಪ್ರತಿಷ್ಠೆಯ ಪ್ರಕ್ಷೇಪ ಇದು ಯಾಕಾಗಿರಬಾರದು ಎಂಬ ಪ್ರಬಲವಾದ ಸಂದೇಹ ನಮಗೆ ಉಂಟಾಗದೇ ಇರದು. ಇನ್ನು ಒಂದೆರಡು ತ್ರಿಪದಿಗಳು ಆತನನ್ನು ಕೈಲಾಸದ ಪನ್ನಗಧರನ ಗಣಗಳಲ್ಲಿ ಒಬ್ಬನಾದ ಪುಷ್ಪದತ್ತನೇ ಈತ ಎಂದು ಅಲೌಕಿಕ ಸ್ತರದವರೆಗೂ ಈತನ ಭವವನ್ನು  ಎತ್ತಿ ಹಿಡಿದಿವೆ. ಈ ಪೀಠಿಕಾ ಪ್ರಕರಣಗಳನ್ನು, ಸರ್ವಜ್ಞನೆಂದು ನಾವು ಕರೆಯುವ ಕವಿ ಖಂಡಿತ ಬರೆದಿರಲಾರ, ಸರ್ವಜ್ಞನ ಬದುಕಿನ ಬಗೆಗೆ ಉಳಿದದ್ದೇನೂ ತಿಳಿಯದೆ ಹೋಗಿರುವಾಗ, ಅವನ ಜನನ, ತಂದೆ ತಾಯಂದಿರ ವಿಚಾರವನ್ನು ಕುರಿತ ತ್ರಿಪದಿಗಳು ಮಾತ್ರ ಸಾಚಾ ಎಂದು ನಂಬುವುದು ಕಷ್ಟ ಎಂದೆನಿಸುತ್ತದೆ.

   ಸರ್ವಜ್ಞ ಹುಟ್ಟಿದ ಊರು `ಅಂಬಲೂರು’ ಎಂದು ತ್ರಿಪದಿಗಳಿಂದ ತಿಳಿದು ಬರುತ್ತದೆ. ಅಬ್ಬಲೂರು ಎಂಬುದು ಈಗಿನ ಹಾವೇರಿ  ಜಿಲ್ಲೆಯ ಹಿರೇಕೆರೂರಿಗೆ ಸಮೀಪದಲ್ಲಿರುವ ಒಂದು ಗ್ರಾಮ. ಮಾಸೂರಿಗೂ ಅಬ್ಬಲೂರಿಗೂ ಸುಮಾರು ಆರು ಮೈಲುಗಳ ಅಂತರವಿದೆ. ಅಬ್ಬಲೂರು ಐತಿಹಾಸಿಕ ಸ್ಥಳ. ಪ್ರಾಚೀನ ಕಾಲದಲ್ಲಿ ಅದು ಜೈನರಿಗೂ, ಶೈವರಿಗೂ ಪ್ರಸಿದ್ಧ ಕ್ಷೇತ್ರವಾಗಿದ್ದಿತು. ಹನ್ನೆರಡನೆಯ ಶತಮಾನದ ಶಿವಶರಣರಲ್ಲಿ ಅಗ್ರಗಣ್ಯನಾದ ಏಕಾಂತರಾಮಯ್ಯನು ಅಬ್ಬಲೂರಿನಲ್ಲಿ ಧಾರ್ಮಿಕ ಕ್ರಾಂತಿಯನ್ನು ಮಾಡಿರುವುದು ಶಾಸನಗಳಿಂದ ತಿಳಿದು ಬರುತ್ತದೆ. ಅಬ್ಬಲೂರು ಸಹಜ ಕವಿಗಳ, ವಾಗ್ಮಿಗಳ ಮತ್ತು ಸಿದ್ದತಪಸ್ವಿಗಳ ಬೀಡಾಗಿದ್ದುದರಿಂದ, ಅಲ್ಲಿಯೇ ಹುಟ್ಟಿಬೆಳೆದ ಈ ಸರ್ವಜ್ಞ ಕವಿಯಲ್ಲಿಯೂ ಮಣ್ಣಿನ ಗುಣಗಳು ತಾವಾಗಿಯೇ ಮೈತಳೆದಂತಿವೆ. ಸರ್ವಜ್ಞ ವಚನಗಳಲ್ಲಿ ಬರುವ ವರಸೆ, ಬಮ್ಮಿಗೆ, ದಾಯ, ಕಮ್ಮ, ಬೆರಣಿ, ಬಾಟೆ ಮೊದಲಾದ ಶಬ್ದಗಳು ಸರ್ವಜ್ಞನು ಈ ಪ್ರದೇಶದವನೇ ಎಂಬುದನ್ನು ಸೂಚಿಸುತ್ತವೆ. ಆದರೆ ಅವನು ಹುಟ್ಟಿಬೆಳೆದ ಊರು ಯಾವುದೇ ಇದ್ದರೂ, ಸಮಗ್ರ ಕನ್ನಡನಾಡನ್ನು ಪ್ರೀತಿಸುವ ವಿಶಾಲ ಹೃದಯ ಅವನದಾಗಿತ್ತು ಎಂಬುದನ್ನು ಮರೆಯುವಂತಿಲ್ಲ.

      ಸರ್ವಜ್ಞನ ಕಾಲನಿರ್ಣಯವು ಒಂದು ಜಟಿಲ ಪ್ರಶ್ನೆಯೇ ಸರಿ. ಆದರೆ, ಅವನು ಬಸವಣ್ಣನವರನ್ನು ಸ್ಮರಿಸಿರುವನು; ಅಲ್ಲದೆ ಶಿವಶರಣರ ಆಳಾಗಿ ನುಡಿದಿರುವೆನೆಂದು ವಿನೀತವಾಗಿ ಹೇಳಿದ್ದಾನೆ. ಆದ್ದರಿಂದ ಅವನು 12ನೆಯ ಶತಮಾನಕ್ಕೆ ಈಚಿನವನೆಂದು ಊಹಿಸಬಹುದಾಗಿದೆ. ಸರ್ವಜ್ಞನು 16ನೆಯ ಶತಮಾನಕ್ಕೂ ಹಿಂದಿನವನು ಎಂಬ ಮಾತನ್ನು ಇ.ಪಿ.ರೈಸ್ ಅವರು ಒಪ್ಪಿರುವರಲ್ಲದೆ, ಉತ್ತಂಗಿ ಚೆನ್ನಪ್ಪನವರೂ ಸಮರ್ಥಿಸಿರುವರು. ಕೆಲವರು ಸರ್ವಜ್ಞನು ತೆಲುಗುಕವಿ ವೇಮನನ (ಕ್ರಿ.ಶ.1450) ಸಮಕಾಲೀನನೆಂದು ಹೇಳುತ್ತಾರೆ. ಬಿ.ಶಿವಮೂರ್ತಿಶಾಸ್ತ್ರಿಗಳು ನಾಲ್ಕು ಜನ ಸರ್ವಜ್ಞರಿರಬೇಕೆಂದು ಊಹಿಸಿ, ತ್ರಿಪದಿಗಳನ್ನು ರಚಿಸಿದ ಸರ್ವಜ್ಞ ಮೂರ್ತಿಯು ಸಂಪಾದನೆಯ ಸಿದ್ಧವೀರಣಾರ್ಯರಿಗೆ (ಸು.1600) ಹಿಂದಿನವನಾಗಿರಬೇಕೆಂಬ ವಾದಕ್ಕೆ ಮನ್ನಣೆ ನೀಡಿರುವರು. ಸರ್ವಜ್ಞನ ಹೆಸರಿನಲ್ಲಿ ಬಳಕೆಯಲ್ಲಿರುವ `ಕಾಲಜ್ಞಾನ’ದಲ್ಲಿ ವಿಜಯನಗರದ ನಾಶ (1565), ಶ್ರೀರಂಗಪಟ್ಟಣವು ಆಂಗ್ಲರ ಕೈಸೇರಿದುದು (ಕ್ರಿ.ಶ.1799) ಮೊದಲಾದ ಐತಿಹಾಸಿಕ ಸಂಗತಿಗಳ ಉಲ್ಲೇಖವಿರುವುದರಿಂದ ಎಫ್.ಕಿಟೆಲ್ ಅವರು ಸರ್ವಜ್ಞನ ಕಾಲವು ಕ್ರಿ.ಶ.1800 ಎಂದು ಹೇಳಿದ್ದಾರೆ. ಆದರೆ ಕಾಲಜ್ಞಾನದ ವಚನಗಳು ಪ್ರಕ್ಷಿಪ್ತವಾಗಿರುವ ಸಂಭವವೇ ಹೆಚ್ಚು ಎಂದು ಅನೇಕರ ಅಭಿಪ್ರಾಯವಾಗಿದೆ.  ಸರ್ವಜ್ಞನ ವಚನಗಳನ್ನು ಕುರಿತು ಪ್ರತಿ ಮಾಡಿದ್ದ    ವೆಂಕನ ಓಲೆಯ ಪ್ರತಿಯನ್ನು ಮಾತ್ರವೇ ಆಧರಿಸಿ ಪರಮಾರ್ಥ ಹೆಸರಿನಲ್ಲಿ ಸಂಪಾದಿಸಿದ ಎಲ್.ಬಸವರಾಜು ಅವರು ಸರ್ವಜ್ಞನ ಕಾಲದ ಬಗೆಗೆ ನೂತನ ಅಂಶವನ್ನು ಬೆಳಕಿಗೆ ತಂದಿದ್ದಾರೆ. ಸರ್ವಜ್ಞನ ತ್ರಿಪದಿಗಳ ಪ್ರಭಾವಕ್ಕೆ ಒಳಗಾಗಿರುವ ಮತ್ತು ಸರ್ವಜ್ಞನ ಏಕಮೇವ ಶಿಷ್ಯನಾಗಿರುವ ವಿರತ ಮಹಲಿಂಗ ತನ್ನ ಗುರು ಬೋಧಮೃತದಲ್ಲಿ ಪ್ರಸ್ತಾಪಿಸಿರುವ ಬಿಟ್ಟಮಂಡೆಯ ಪ್ರಭುವಿನ ಕಾಲ ಕ್ರಿ.ಶ.1530 ಆಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.  ವಿರತ ಮಹಲಿಂಗನ ಕಾಲ ಕ್ರಿ.ಶ. 1504 ಎಂದು  ಸಂಶೋಧಕರು ಭಾವಿಸಿದ್ದಾರೆ. ಆದರೆ  ಇತ್ತೀಚಿನ ಸಂಶೋಧನೆಯ ಪ್ರಕಾರ, ಕ್ರಿ.ಶ. 1554 ಕಾಲಕ್ಕೆ ಸೇರಿದ  ಮೋಕ್ಷದರ್ಶನ ಮಹಾಸಂಗ್ರಹ ಸಂಕಲಿತ ಕೃತಿಯಲ್ಲಿ ಪರಮಾರ್ಥ ಅಂಕಿತದ ಸರ್ವಜ್ಞನ ತ್ರಿಪದಿ ಉಲ್ಲೇಖ ಕಂಡುಬಂದಿರುವುದನ್ನು ದಿ.ಎಸ್.ಶಿವಣ್ಣನವರು ಶೋಧಿಸಿದ್ದು ಈ ಉಲ್ಲೇಖ ಸರ್ವಜ್ಞನ ಕಾಲ ನಿರ್ಣಯಕ್ಕೆ ದಾಖಲೆಯಾಗಿದೆ. ಅದೇರೀತಿ ಪ್ಲವ ಸಂವತ್ಸರ ಮಾಘಶುದ್ಧ 15ರಲ್ಲು ಚಿಗನಾಯಕನಹಳ್ಳಿ ಲಿಂಗಪ್ಪನು ಮಹಾರಾಜೇಶ್ರೀ ಚೆನ್ನಾಜಮ್ಮನವರಿಗೆ ಪಾರಮಾರ್ಥಿಕದ ಪುಸ್ತಕ ಬರೆದು ಒಪ್ಪಿಸಿದಂಥಾ ಉಲ್ಲೇಖವು   ಚಿಗನಾಯಕನಹಳ್ಳಿ ಲಿಂಗಪ್ಪನು ಕ್ರಿ.ಶ.1607ರಲ್ಲಿ ಪಾರಮಾರ್ಥಿಕ ಪುಸ್ತಕವನ್ನು ಪ್ರತಿಮಾಡಿ ಮಹಾರಾಜೇ ಶ್ರೀಚೆನ್ನಮ್ಮಾಜಿಯವರಿಗೆ ಒಪ್ಪಿಸಿರುವ ವಿವರವು ಹಸ್ತಪ್ರತಿ ಪುಷ್ಪಿಕೆಯಿಂದ ತಿಳಿದು ಬರುತ್ತದೆ. ಪಾರಮಾರ್ಥಿಕದ ಪುಸ್ತಕ ಸರ್ವಜ್ಞನ ವಚನ ಸಂಕಲನ ವಾಗಿದ್ದು ಇದರಲ್ಲಿ 77ಪದ್ಧತಿಗಳಿದ್ದು 937 ತ್ರಿಪದಿಗಳಿವೆ. ಈ ಹಿನ್ನೆಲೆಯಲ್ಲಿ  ಹಸ್ತಪ್ರತಿ ತಜ್ಞರಾದ ದಿ. ಎಸ್.ಶಿವಣ್ಣನವರ ಪ್ರಕಾರ ಈ ಪುಷ್ಟಿಕೆಯಲ್ಲಿಯ ಉಲ್ಲೇಖವು ಕಾಲೋಲ್ಲೇಖವಿರುವ ಸರ್ವಜ್ಞನ ಕೃತಿಯ ಪ್ರತಿಗಳಲ್ಲಿ ಅತ್ಯಂತ ಪ್ರಾಚೀನವಾದ ಕೃತಿಯಾಗಿದ್ದು, ಈ ಪ್ರತಿಯಲ್ಲಿಯ ಕಾಲದ ಉಲ್ಲೇಖವು ಸರ್ವಜ್ಞನ ಕಾಲನಿರ್ಣಯಕ್ಕೆ ಒಂದು ಮೈಲುಗಲ್ಲಾಗಿದೆ.

` ಎಲ್ಲಾ ಆಕರಗಳ ಹಿನ್ನೆಲೆಯಲ್ಲಿ, ಸರ್ವಜ್ಞನ ಕಾಲವನ್ನು ಈಗಿನ ಮಟ್ಟಿಗೆ ಕ್ರಿ,,1500ರ  ಎಂದು ಇಟ್ಟುಕೊಳ್ಳ ಬಹುದಾಗಿದೆ. ಆದರೆ ಇಷ್ಟು ಮಾತ್ರ ನಿಜ ಈ ತ್ರಿಪದಿಗಳನ್ನು ಬರೆದವನು ಅಚ್ಚ ಕನ್ನಡಿಗ. ಅವನು ಬದುಕಿದ್ದು ವಚನಕಾರರ ನಂತರ, ಬಹುಶಃ ಹದಿನಾರನೆಯ ಶತಮಾನದ ಒಳಗಿನ ಅವಧಿಯಲ್ಲಿ ಅವನೊಬ್ಬ ಚಾರಣ ಕವಿ.ಅತ್ಯಂತ ನಿರ್ಲಿಪ್ತನಾಗಿ ನಿಂತರೂ ಜೀವನ ಪ್ರೀತಿಯನ್ನು ಕಳೆದುಕೊಳ್ಳದ ವಿಲಕ್ಷಣ ಮನೋಧರ್ಮದವನು. ಯಾರ ಹಂಗಿಗೂ ಒಳಗಾಗದ, ವಿಮರ್ಶಕನ ಕಣ್ಣಿನಿಂದ ಲೋಕವನ್ನು ನೋಡಿದವನು. ಮನಸ್ಸಿನಲ್ಲಿ ಮಾತಿನಲ್ಲಿ ಅಂಬಿಗರ ಚೌಡಯ್ಯನ ತಮ್ಮನಾಗಿದ್ದಾನೆ.

ಸರ್ವಜ್ಞ ಹೆಸರಿನ ಜಿಜ್ಞಾಸೆ ಮತ್ತು ವ್ಯಕ್ತಿತ್ವ:

       ಸರ್ವಜ್ಞ ಎಂದು ಜನಜನಿತವಾಗಿರುವ ಈ ವ್ಯಕ್ತಿ ಒಬ್ಬ ಕವಿ. ಕಂಡದ್ದನ್ನು ಕಂಡೊಡನೆಯ ಪದ್ಯರೂಪದಲ್ಲಿ ಕಟ್ಟಿ ನಿಲ್ಲಿಸುವ ಕೌಶಲವಿರುವ ಕಾರಣ ಈತ ಒಬ್ಬ ಕವಿ ಎನ್ನಬಹುದು. ಈ ಕವಿಯ ಕಾವ್ಯ ವಚನ ರೂಪದ್ದು.  ವಚನ ಎಂದರೆ ಕೂತು ಬರೆದದ್ದು ಎನ್ನುವುದಕ್ಕಿಂತ, ಸುಮ್ಮನೆ ಹೇಳಿದ್ದು ಮಾತಾಡಿದ್ದು ಎಂದು ಅರ್ಥವಾಗುತ್ತದೆ. ‘ಸರ್ವಜ್ಞನ ತ್ರಿಪದಿಗಳಿಗೆ ‘ಸರ್ವಜ್ಞನ ವಚನ’  ಎಂದು ಹೆಸರಿಸುವುದು ಈ ಕಾರಣದಿಂದಲೇ ಇರಬೇಕು. ಇದು ವಚನ ಅಥವಾ ಅನಿಸಿದ್ದನ್ನು ಅಂದಂದೇ ಹೇಳಿದ್ದು. ಅದರ ಜತೆಗೆ ಇವುಗಳನ್ನು ವಿಂಗಡಿಸಿ ಪದ್ಧತಿ ಎಂದೂ ಕರೆಯಾಲಾಗಿದೆ. ‘ದಾನಪದ್ಧತಿ’ ‘ರಾಜನೀತಿ’ ‘ಪದ್ಧತಿ’ ಸ್ತ್ರೀ ಪದ್ಧತಿ ಹೀಗೆ ಈತನ ತ್ರಿಪದಿಗಳನ್ನು ವಿಷಯಾನುಸಾರಿಯಾಗಿ ವಿಂಗಡಿಸಿ ಪ್ರಕಟಿಸಿದ್ದಾರೆ ಉತ್ತಂಗಿಯವರು.  ಕ್ರಿ.ಶ.1636 ರಲ್ಲಿ ಪ್ರತಿಯಾದ ಸರ್ವಜ್ಞನ ಅತ್ಯಂತ ಪ್ರಾಚೀನತಮ ಪ್ರತಿಯಲ್ಲಿಯೂ ಹೀಗೆಯೇ ಇದೆ ಎಂಬುದು ಎಲ್.ಬಸವರಾಜು ರವರು ಸಂಪಾದಿಸಿರುವ ಪರಮಾರ್ಥ ಕೃತಿಯಲ್ಲಿಯೂ ಕಂಡು ಬರುತ್ತದೆ. ಸರ್ವಜ್ಞನು  ಜನಸಾಮಾನ್ಯರೂ ಬಹುಕಾಲ ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯವಾಗ ಬಹುದಾದ ಹಾಡಿನ ಮಟ್ಟು ತ್ರಿಪದಿಯನ್ನು ತನ್ನ ಅನಿಸಿಕೆಯ ಅಭಿವ್ಯಕ್ತಿಯನ್ನಾಗಿಸಿಕೊಂಡವನು. ನರಲ್ಲಿ ಇರುವ ತಪ್ಪು ತಿಳಿವಳಿಕೆಯನ್ನು ಹೋಗಲಾಡಿಸಲು ತ್ರಿಪದಿಯೇ ಮಾಧ್ಯಮವೆಂದು ತಿಳಿದವನು. ತನ್ನ ಜನತಾ ಕಾವ್ಯಕ್ಕೆ ವಸ್ತುವನ್ನಾಗಿಸಿ  ಕೊಳ್ಳುವುದರಲ್ಲೂ ಹಿಂದಿನವರಿಗಿಂತ ಸರ್ವಜ್ಞ ಪ್ರತ್ಯೇಕವಾಗಿ ಉಳಿದಿದ್ದಾನೆ.  ಈತ ವ್ಯವಸ್ಥೆಯ ಮತ್ತು ಅಸಮಾನತೆಯ ವಿರುದ್ಧ ಪ್ರತಿಭಟಿಸುವ ಸಾಹಸಕ್ಕೂ ಧುಮುಕಿ ಬಂಡಾಯ ಮನೋಧರ್ಮದ ಕವಿ ಎನಿಸಿಕೊಂಡ.

        ಸರ್ವಜ್ಞನ ತ್ರಿಪದಿಗಳನ್ನು ಅಥವಾ ವಚನಗಳನ್ನು ಹೀಗೆ `ಪದ್ಧತಿ’ ಗಳೆಂದು ಕರೆದದ್ದು ಸ್ವಾರಸ್ಯವಾದ ಸಂಗತಿಯಾಗಿದೆ. ಸರ್ವಜ್ಞನ `ವಚನ’ವಾದ ಈ ಅಭಿವ್ಯಕ್ತಿ ವಾಸ್ತವವಾಗಿ ಒಂದು ಪದ್ಧತಿ ಅಥವಾ ಬರವಣಿಗೆಯ ಕ್ರಮವಾಯಿತೆಂಬುದು ಇದರಿಂದ ಸ್ಪಷ್ಟವಾಗಿದೆ. ಸರ್ವಜ್ಞನ ಈ  ಪದ್ಧತಿ ಇಂಥ ಎಷ್ಟೋ ರಚನೆಗೆ ಸಲೀಸಾದ ದಾರಿಯಾಗಿ ಅನೇಕರು ಈ ಪದ್ಧತಿಯೊಳಗೆ ತಮ್ಮ ಹೆಜ್ಜೆಯನ್ನೂರಿ, ನಿಜವಾದ ಕವಿಯ (ಪದಹತಿ)`ಪದ್ಧತಿ’ ಅಥವಾ ಹೆಜ್ಜೆ ಗುರುತುಗಳು ಯಾವುವು ಎಂಬುದು ತಿಳಿಯದಂತಾಗಿದೆ. ಆದ್ದರಿಂದಲೇ ನಾವು ಮೊದಲು ಹೇಳಿದ್ದು `ಸರ್ವಜ್ಞ’ ಎನ್ನುವುದು ಒಬ್ಬ ವ್ಯಕ್ತಿಯ ಹೆಸರಲ್ಲ. ಅದೊಂದು ಕಾವ್ಯಪದ್ಧತಿಗೆ ಇಟ್ಟ ಹೆಸರು ಎಂಬ ಸಂಶೋಧಕರ ಅನಿಸಿಕೆ ಯೋಚಿಸುವಂತಹದ್ದಾಗಿದೆ.

      ಕೆಳಕಂಡ ತ್ರಿಪದಿಯಲ್ಲಿಯ

        ಮಂಡೆ ಬೋಳಿಸಿಕೊಂಡು ತುಂಡುಗಂಬಳಿ ಹೊದೆದು

        ಹಿಂಡನಗಲಿದ ಗಜದಂತೆ ಇಪ್ಪವನ

        ಕಂಡು ನಂಬುವುದು ಸರ್ವಜ್ಞ.

ಎಂಬ ಹೇಳಿಕೆಯಲ್ಲಿ ಕವಿ,ತನ್ನ ವ್ಯಕ್ತಿತ್ವವನ್ನು ಕುರಿತು ಹೇಳಿಕೊಂಡಿದ್ದಾನೆ. ಎಲ್ಲದರಿಂದ ಕಳಚಿಕೊಂಡು, ನಿರ್ಭಯ ಏಕಾಕಿತನವನ್ನು ಸಾಧಿಸಿದವನೊಬ್ಬನ ಚಿತ್ರವೊಂದು ಈ ಪದ್ಯದಲ್ಲಿದೆ. ಈ ಬಗೆಯ ಏಕಾಕಿತನವನ್ನು ಸಾಧಿಸಿಕೊಳ್ಳಲಾರದವ ಕವಿಯಾಗಲಾರ, ಇದರ ಜೊತೆಗೆ,

        ಕರದಿ ಕಪ್ಪರವುಂಟು, ಹಿರಿದೊಂದು ನಾಡುಂಟು

        ಹರನೆಂಬ  ದೈವ ನಮಗುಂಟು, ತಿರಿವರಿಂ

        ಸಿರಿವಂತರಾರು ಸರ್ವಜ್ಞ.

   ಎಂಬ ಸಾಲಿನಲ್ಲಿ ಈ ವಿಸ್ತಾರವಾದ ಜಗತ್ತು ಮತ್ತು ಅದರ ಉದಾರತೆಯ ಬಗ್ಗೆ ಭರವಸೆ ಈ ಎಲ್ಲವನ್ನೂ, ನಡೆಯಿಸುವ, ಯಾವುದೋ ಒಂದು ದೈವ, ಇವು ಸಾಕು ತನ್ನನ್ನು ನಡೆಸಲು ಎಂಬ ಧೈರ್ಯವೆ ಈ ವ್ಯಕ್ತಿತ್ವದ ಮೂಲದ್ರವ್ಯದಂಬಂತೆ ಹೇಳಿಕೊಳ್ಳಲಾಗಿದೆ. ಇಂಥ  ಕವಿ ತನ್ನ ಕಾವ್ಯ ಪ್ರೇರಣೆಯ ಬಗ್ಗೆ `ಎನ್ನ ಮನಸ್ಸಿಗೆ ನೆನಹು ಪನ್ನಗಧರ ಕೊಟ್ಟ ಕೊಟ್ಟ’ ಎಂದು ಹಿಂದಿನ ಎಲ್ಲ ಕವಿಗಳಂತೆಯೇ ಹೇಳಿಕೊಂಡಿದ್ದಾನೆ. ಈ ನೆನಹು ಅಥವಾ ಕಾವ್ಯ ನಿರ್ಮಾಣ ಶಕ್ತಿಯಾದ ಪ್ರತಿಭೆ, ಅನುಭವದ ಉಗ್ರಾಣದಿಂದ ನೆನಹುಗಳನ್ನು ಆಯ್ದು ಕಟ್ಟುವ ಕಲೆಗಾರಿಕೆ, ತನಗೆ ದೈವೀಕೃಪೆಯಿಂದ ಬಂದುದು ಎನ್ನುತ್ತಾನೆ. ಎಂದರೆ, ಅನಿಸಿದ್ದಕ್ಕೆ ಆಕಾರ ಕೊಡುವ ಈ ಪ್ರವೃತ್ತಿ ಸರ್ವಜ್ಞನಿಗೆ ಸಹಜವಾಗಿಯೇ ಬಂದಿತೆಂದು ಈ ಮಾತಿನ ಅರ್ಥ. ಜತೆಗೆ ಮುಚ್ಚಿ ಇನ್ನಷ್ಟು ಹೇಳು ಎಂದು ಕೇಳಿರಬೇಕು.ಆದ್ದರಿಂದಲೆ `ಹೇಳಲರಿಯೆನು ನಾನು, ಹೇಳೆನಲು’ ಎನ್ನುತ್ತಾನೆ. ಸರ್ವಜ್ಞನ ಪದಗಳು ಹುಟ್ಟಿಕೊಂಡಿದ್ದೆ ಹೀಗೆ, ಅವರಿವರು`ಹೇಳೆನೆಲು’ ಈತ ಹೇಳುತ್ತಾ ಹೋಗಿರಬೇಕು. ಈ ಹೇಳಿದ ಕಾವ್ಯ ಗಮನಿಸಬೇಕು. ಒಂದೆಡೆ ಕೂತು ಬರೆದ ಕಾವ್ಯ ಅಲ್ಲ ಸರ್ವಜ್ಞನದು. ಇವುಗಳಿಗೆ `ವಚನ’ ಅಥವಾ ಹೇಳಿದ್ದು ಎಂಬ ಹೆಸರು ಬಂದದ್ದು ತೀರ ಸಹಜವಾಗಿದೆ. ಇಂಥ ಕವಿ ಹೇಳಿದ್ದನ್ನು ಕೇಳಿದ ಜನ ಅವನ ಉಕ್ತಿಯ ವಿಷಯದ ಬಾಹುಳ್ಯವನ್ನು ಕಂಡು ಬೆರಗಾಗಿ ಅವನನ್ನು `ಸರ್ವಜ್ಞ’ ಎಂದು ಕರೆದಿದ್ದಿರಬಹುದು. ಆದರೆ ಈ ಕವಿ ಅದನ್ನು ನಿರಾಕರಿಸಿ `ಎಲ್ಲ ಬಲ್ಲವರಿಲ್ಲ ಬಲ್ಲವರು ಬಹಳಿಲ್ಲ’

            ಸರ್ವಜ್ಞ ನೆಂಬುವನು ಗರ್ವದಿಂದಾದವನೆ

            ಸರ್ವರೊಳಗೊದು ನುಡಿಗಲಿತು ವಿದ್ಯೆಯಾ

            ಪರ್ವತವೇ ಆದ ಸರ್ವಜ್ಞ.

ಎಂದು ಹೇಳುವುದರ ಮೂಲಕ ಉತ್ತರ ಕೊಟ್ಟು ತನ್ನ ವಿನಯವನ್ನು ಎತ್ತಿ ಹಿಡಿದಿದ್ದಾನೆ.   ಅನೇಕ ವಿಷಯಗಳಲ್ಲಿ ಅವನದು ಕ್ರಾಂತಿಕಾರಕ ದೃಷ್ಟಿ ಎಂಬುದು ನಿಜ. ಪೂರ್ವದಿಂದ ನಡೆದುಬಂದ ಅನೇಕ ರೂಢಿ ಸಂಪ್ರದಾಯಗಳನ್ನು ಅವನು ಪ್ರಶ್ನಿಸುತ್ತಾನೆ. ಸಮಾಜದ ಹಾಗೂ ವ್ಯಕ್ತಿಯ ಬೆಳವಣಿಗೆಗೆ ಉಪಯುಕ್ತವಾಗಿದ್ದರೆ ಅವುಗಳನ್ನು ಉಳಿಸಿಕೊಳ್ಳಲು ಅವನು ಹಿಂಜರಿಯುವುದಿಲ್ಲ; ಆದರೆ ಅವು ನಿರರ್ಥಕ ನಿಷ್ಪ್ರಯೋಜಕವಾಗಿದ್ದರೆ ಅವನ್ನು ಕಿತ್ತೆಸೆಯಲು ಅವನಿಗೆ ಯಾವ ಭಯವೂ ಇಲ್ಲ. ಅದರಂತೆ ಹೊಸ ವಿಚಾರಗಳನ್ನು ಅವನು ಸ್ವಾಗತಿಸುತ್ತಾನೆ. ಉದಾಹರಣೆಗೆ, ಗುರುವಿನ ಮಹತ್ವವನ್ನು ವಿವರಿಸುವಲ್ಲಿ ಅವನ ಸತ್‍ಸಂಪ್ರದಾಯದ ಪ್ರೀತಿಯೂ ಕೇವಲ ಅಂಧಶ್ರದ್ಧೆಯಿಂದ ಮಾಡುವ ಮೂರ್ತಿ ಪೂಜೆಯನ್ನು ತೆಗಳುವುದರಲ್ಲಿ ಅವನ ಸ್ವತಂತ್ರ ರೀತಿಯೂ ವ್ಯಕ್ತವಾಗಿದೆ.

     ಸರ್ವಜ್ಞನದು ಪೂರ್ವಗ್ರಹ ರಹಿತದೃಷ್ಟಿ. ಇಂಥದೊಂದು ಜಾತಿ-ವೃತ್ತಿಯ ಶ್ರೇಷ್ಠವೆಂದಾಗಲಿ, ಇದನೆಂದು ಕೀಳು ಎಂದಾಗಲಿ ಭಾವಿಸುವ ಸಂಕುಚಿತ ಪ್ರವೃತ್ತಿ ಅವನದಲ್ಲ. ಅವನ ದೃಷ್ಟಿಯಲ್ಲಿ ಎಲ್ಲ ವೃತ್ತಿಗಳೂ ಸಮಾನ, ಗೌರವಾರ್ಹ. ಆದರೆ ಎಲ್ಲ ವೃತ್ತಿಗಳಲ್ಲಿಯೂ ಹಲಕೆಲವು ಲೋಪದೋಷಗಳಿದ್ದೇ ಇವೆ. ವಿಶಾಲ ದೃಷ್ಟಿಯಿಂದ ಹಾಗೂ ನಿಷ್ಪಕ್ಷಪಾತ ರೀತಿಯಿಂದ ಅವುಗಳನ್ನು ತಿದ್ದುವುದೇ ಅವನ ಸ್ವಭಾವವಾಗಿತ್ತು. ಅಂತೆಯೇ `ಕಳ್ಳನೂ ಒಳ್ಳಿದನೂ ಎಲ್ಲ ಜಾತಿಯೊಳಿಹರು’ ಎಂದವನು ಸಾರಿದ್ದಾನೆ.

 ಕನ್ನಡ ಸಾಹಿತ್ಯ ಪರಂಪರೆ ಮತ್ತು ಸರ್ವಜ್ಞ:

   ಸಾಹಿತ್ಯ ಪರಂಪರೆಯ ದೃಷ್ಟಿಯಿಂದಲೂ ಸರ್ವಜ್ಞ ಏಕಾಂಗಿಯಾಗಿಯೇ ತೋರುತ್ತಾನೆ. ಯಾಕೆಂದರೆ ಅವನು ತನ್ನನ್ನು ತನಗಿಂತ ಹಿಂದಿನ ಕನ್ನಡ ಸಾಹಿತ್ಯದೊಂದಿಗೆ ಬೆಸೆದುಕೊಳ್ಳುವುದೇ ಇಲ್ಲ. ವಚನಕಾರರ ಮನೋಧರ್ಮದೊಂದಿಗೆ ಮಾತ್ರ ಬೆರತು ಕೊಂಡಿದ್ದಾನೆ. ತನಗಿಂತ ಒಂದು  ಸಾಹಿತ್ಯಿಕ ಪರಂಪರೆಯಿದೆ. ತಾನು ಅದರದೊಂದು ಭಾಗ, ತಾನು ಬರೆಯುತ್ತಿರುವುದೂ ಸಾಹಿತ್ಯವೇ ಎಂಬ ಯಾವ ಅರಿವಿನಿಂದಲೂ ಈತ ಬದ್ಧನಾದವನಲ್ಲ. ಹೀಗಾಗಿ ಸರ್ವಜ್ಞನೆಂದು ಹೇಳಲಾದ ಈ ತ್ರಿಪದಿಗಳು ಕಾವ್ಯ ಎನ್ನಲು ಏನೇನಿರಬೇಕು ಎಂದುಕೊಂಡಿದ್ದೇವೆಯೋ ಅದೆಲ್ಲವನ್ನೂ ಗಾಳಿಗೆ ತೂರುತ್ತವೆ. ಹೀಗಾಗಿ ಸರ್ವಜ್ಞನ ಕಾವ್ಯಕ್ಕೆ ಇಂಥದೇ ವಸ್ತು ಇಲ್ಲ. ಅದಕ್ಕೊಂದು ನಿಶ್ಚಿತವಾದ ಬೆಳವಣಿಗೆ ಆದಿ ಮಧ್ಯ ಅಂತ್ಯ ಇಲ್ಲ. ಇದನ್ನು ಇಂಲ್ಲಿಂದ ಓದಬೇಕೆಂಬ ಹಂಗಿಗೆ ಓದುಗರನ್ನು ಒಳಪಡಿಸುವುದಿಲ್ಲ. ಎಲ್ಲಿಂದಾದರೂ ಓದಬಹುದು, ಎಲ್ಲಿಬೇಕಾದರೂ ಓದಬಹುದು. ಎಲ್ಲಿ ಬೇಕಾದರೂ ನಿಲ್ಲಿಸಬಹುದು. ಇದು ಯಾವ ಪಂಡಿತ ಮಂಡಲಿಯ ಪ್ರೀತಿಗೆ ಬರೆದದ್ದಾಗಲೀ, ಯಾವನೊಬ್ಬನ ಕಥನವಾಗಲಿ ಅಲ್ಲ. ಹೀಗಾಗಿ ಇದನ್ನು ನಮಗೆ ಪರಿಚಯವಾದ `ಕಾವ್ಯ’ಗಳ ಮಾದರಿಯಿಂದ ನೋಡಲೂ ಬಾರದು. ಹಾಗಾದರೆ ಇದನ್ನು `ಕಾವ್ಯ’ವೆಂದೂ ಕರೆಯುವುದಾದರೂ ಹೇಗೆ? ಒಂದೊಂದು ಬಿಡಿ ಬಿಡಿ ಪದ್ಯಕ್ಕೂ ತನ್ನದೇ ಅಸ್ತಿತ್ವವಿದೆ. ಒಟ್ಟಾಗಿ ನೋಡಿದರೆ ಒಂದು ಧೋರಣೆಯಿದೆ. ಆ ಧೋರಣೆ ಮೂಲತಃ ಜೀವನ ಪರವಾಗಿದೆ. ಜೀವನ ವಿಮರ್ಶೆಯಾಗಿದೆ. `ಸಾಹಿತ್ಯ ಜೀವನದ ವಿಮರ್ಶೆ’ ಎಂಬ ಪಾಶ್ಚಾತ್ಯ ಚಿಂತಕರ ಮಾತು ಸರ್ವಜ್ಞನಿಗೆ ಅನ್ವಯಿಸುತ್ತದೆ. ಅಂದಂದು ಅನ್ನಿಸಿದ್ದಕ್ಕೆ ಅಂದಂದೇ ಮಾತು ಕೊಟ್ಟು ನಿಲ್ಲಿಸಿದ `ಪದ್ಧತಿ’ ಇದು. ಈ ಬಗೆಯ ಅಭಿವ್ಯಕ್ತಿಗೆ ಹಿಂದಿನ ಸಾಹಿತ್ಯದಲ್ಲಿ ನಿದರ್ಶನಗಳಿಲ್ಲದಿಲ್ಲ. ಸಂಸ್ಕೃತದಲ್ಲಿ ಸುಭಾಷಿತಗಳನ್ನು ಬಿಟ್ಟರೆ ಎಲ್ಲಾ ಕವಿಗಳಲ್ಲೂ ಈ ಬಗೆಯ ಲೋಕೋಕ್ತಿ, ಸೂಕ್ತಿ, ಚಾಟೂಕ್ತಿಗಳು ಕಾಣಿಸಿಕೊಳ್ಳುತ್ತವೆ. ಅವುಗಳನ್ನು ಹೇಳಿಕೆ ಎಂದು ಕರೆಯಬಹುದು. ಆದರೆ ಇಂಥ ಹೇಳಿಕೆಗಳು ಮಾರ್ಗಕವಿಗಳಲ್ಲಿ ಕಾವ್ಯದ ಸಂದರ್ಭದ ಒಳಗೆ ಬರುತ್ತಿದ್ದವು. `ಹರಿ ಕರಿಯನಲ್ಲದಿರಿವುದೆ ನರಿಯಂ? `ಕುಲಮೆಂಬುದುಂಟೆ ಬೀರಮೆ ಕುಲಮಲ್ಲದೆ?’ `ನಿಡಿಯರ್ಗಂ ನಿಡಿಯರೊಳರ್’ ಸೆಟ್ಟಿಯ ಬಳ್ಳಂ ಕಿರಿದು’ `ಮಾನವ ಜಾತಿ ತಾನೊಂದೆವಲಂ; `ಬೆಂದ ಬಿದಿಗೆ ಕಣ್ಣಿಲ್ಲಕ್ಕುಂ’, ಇಂಥ ಮಾತುಗಳು ಕಾವ್ಯದ ಸಂದರ್ಭದೊಳಗೆ ಯಥೋಚಿವಾಗಿ ಬರುತ್ತವೆ. ಹಾಗೆಯೇ ವಿವೇಕದ ತತ್ವದ, ನೀತಿಯ, ಧರ್ಮಕ್ಕೆ ಸಂಬಂಧಿಸಿದ ಹೇಳಿಕೆಗಳೂ ಕಾಣಿಸುತ್ತವೆ. ಆದರೆ ಸರ್ವಜ್ಞನಲ್ಲಿ ಇಂಥ ಹೇಳಿಕೆಗಳೇ ಪ್ರಧಾನವಾಗಿ, ಹಿಂದಿನ ಕವಿಗಳಿಗಿದ್ದಂಥ ಯಾವ ಕಥಾ ಸಂದರ್ಭದ ನೆರವನ್ನೂ ಕೋರದೆ ನೇರವಾಗಿ ಅಂದಂದಿನ ಅನುಭವದ ಸಂದರ್ಭದಲ್ಲಿ ಕಾಣಿಸಿಕೊಳ್ಳುತ್ತದೆ ಎನ್ನುವುದೇ ವಿಶೇಷವಾದ ಸಂಗತಿಯಾಗಿದೆ. ಗಾದೆಯ ಮಾತುಗಳು ಈತನಲ್ಲಿ ಹಾಸುಹೊಕ್ಕಾಗಿ ತುಂಬಿಕೊಂಡು ಅಭಿವ್ಯಕ್ತಿಗೆ ಒಂದು ಮಿಂಚನ್ನೂ ಮೊನಚನ್ನು ಒದಗಿಸಿವೆ.ಇವುಗಳಲ್ಲಿ ಜನವಾಣಿಯಿಂದ ನೇರವಾಗಿ ಎತ್ತಿಕೊಂಡು ಪರಿಷ್ಕೃತವಾದವು ಕೆಲವು ಇದ್ದಿರ ಬಹುದಾಗಿದ್ದು, ಅವು ಸ್ವತಂತ್ರವಾಗಿ ಸರ್ವಜ್ಞನಿಂದಲೇ ಟಂಕಿತವಾಗಿ ನಡೆವ ನಾಣ್ಯವಾದವುಗಳಲ್ಲಿ ಗುರುತಿಸಿಲು ಬಾರದಂತೆ ಬೆರತು ಹೋಗಿವೆ. ಈ ಅರ್ಥದಲ್ಲಿ ಸರ್ವಜ್ಞನ ಕವಿತೆ ಹೇಳಿಕೆಗಳ ಕಾವ್ಯ ಎನ್ನಬಹುದು. ನಿದರ್ಶನಕ್ಕೆ

         `ಊರಿಂಗೆ ದಾರಿಯನು ಆರು ತೋರಿದರೇನು?’

          ಹಂಗಿನ ಹಾಲಿನಿಂದಂಬಲಿಯ ತಿಳಿ ಲೇಸು

         ತನ್ನಂತೆ ಪರರ ಬಗೆದಡೆ ಕೈಲಾಸ ಬಿನ್ನಾಣವಕ್ಕು

         ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ.

         ಆಡದೆ ಕೊಡುವವನು ರೂಢಿಯೊಳಗೆ ಉತ್ತಮನು

         ಅಡಿಯ ಮುಂದಿಡೆ ಸ್ವರ್ಗ, ಅಡಿಯ ಹಿಂದಿಡೆ ನರಕ

         ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ

         ಹಂಗಿನರಮನೆಯಿಂದ ವಿಂಗಡದ ಗುಡಿಲೇಸು

         ಅನುಭವಿಯ ವೇದವೇ ವೇದ

          ಹೊಲಬನರಿಯದ ಮಾತು ತಲೆ ಬೇನೆಯಿದ್ದಂತೆ.

          ರಸಿಕನಾಡಿದ ಮಾತು ಶಶಿಯುದಿಸಿ ಬಂದಂತೆ

          ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು

          ಆಳಾಗಬಲ್ಲವನು ಆಳುವನು ಅರಸನಾಗಿ

           ಜ್ವರ ಬಂದ ಮನುಜಂಗೆ ನೊರೆವಾಲು ಕಹಿಯಕ್ಕು

         ಅನ್ನ ದೇವರ ಮುಂದೆ ಇನ್ನು ದೇವರುಂಟೆ

         `ತುಪ್ಪವಾದಾಬಳಿಕ ಹೆಪ್ಪನೆರೆದವರುಂಟೆ?’

         `ಶ್ವಾನ ತೆಂಗಿನಕಾಯ ತಾನು ಮೆಲಬಲ್ಲುದೆ?’

         `ಬೆಟ್ಟ ಕರ್ಪುರ ಉರಿದು ಬೊಟ್ಟಿಡಲು ಬೂದಿಲ್ಲ’

         `ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ?’

         `ಕುರಿ ಕಬ್ಬಿನೊಳು ಹೊಕ್ಕು ಅರಿವುದೇ ತನಿರಸವ?’

         `ಆನೆ ನೀರಾಟದಲಿ ಮೀನ ಕಂಡಂಜುವುದೇ?’

         `ಉಣ್ಣೆ ಕೆಚ್ಚಲೊಳಿರ್ದು ಉಣ್ಣದದು ನೊರೆವಾಲ’

         `ಸೊಡರೆಣ್ಣೆ ತೀರಿದರೆ ಕೊಡನೆತ್ತಿ ಹೊಯ್ಯುವರೆ?’

ಈ ಹಲವು ಹೇಳಿಕೆಗಳನ್ನು ನೋಡಬಹುದು. ಇವು ಗಾದೆಯ ಮಾತಾಗಿ ಪರಿಣಮಿಸಿದ ಮಾತಾಗಿದ್ದು ಸರ್ವಜ್ಞನ ಶಕ್ತಿಯುತ ಭಾಷೆಯ ಸಂಪನ್ಮೂಲವಾಗಿವೆ. ಇವು ಆತನ ಅನುಭವದ ವೈವಿಧ್ಯ-ಶ್ರೀಮಂತಿಕೆಗೆ ಸಾಕ್ಷೀ ಭೂತವೂ ಆಗಿವೆ. ಈ ಹೇಳಿಕೆಗಳು, ಹಿಂದಿನ ಕಾವ್ಯಗಳಲ್ಲಾಗಿದ್ದರೆ, ಯಾವುದೋ ಒಂದು ಸಂದರ್ಭದ ಒಳಗೆ ಬಂದು, ಆ ಸಂದರ್ಭದ ಅರ್ಥವಂತಿಕೆಗೆ ಪೂರಕವಾಗಬಹುದಾದವು. ಆದರೆ ಇಲ್ಲಿ ಅಂಥ ಕಥಾಸಂದರ್ಭ ಇಲ್ಲ; ಆದರೆ ಇಂಥ ಮಾತಾಡಿದ ಅನುಭವದ ಸಂದರ್ಭ ಯಾವುದೆಂದು ಊಹಿಸಬಹುದು. ಈ ಹೇಳಿಕೆಗಳು, ಕೇವಲ ಶುಷ್ಕವಾಗದೆ, ದೃಷ್ಟಾಂತ ರೂಪವನ್ನು ತಾಳುತ್ತದೆ. ಆದರೆ ಈ ದೃಷ್ಟಾಂತಗಳ ಉದ್ದೇಶ ರಸಾನುಭವವಲ್ಲ; ಅಂದರೆ ಅವುಗಳಲ್ಲಿ ಅಂಥ `ರಸ’ ಇಲ್ಲವೆಂದು ಅರ್ಥವಲ್ಲ. ಒಂದೆರಡು ಕ್ಷಣ ಅವುಗಳು ಕಟ್ಟುವ ಚಿತ್ರ ಕೊಂಚ ರಸಾನುಭವವನ್ನು ಕೊಟ್ಟರೂ, ಅವುಗಳ ಮುಖ್ಯ ಉದ್ದೇಶ, ನೀತಿಯನ್ನು, ವಿವೇಕವನ್ನು, ಹೇಳುವುದು. ನಮ್ಮ ಅಲಂಕಾರಿಕರು  ವಾಙ್ಮಯವನ್ನು, ಪ್ರಭುಸಮ್ಮಿತ, ಮಿತ್ರಸಮ್ಮಿತ ಹಾಗೂ ಕಾಂತಾಸಮ್ಮಿತ ಎಂದು ವಿಭಾಗಿಸಿದರು. ಸರ್ವಜ್ಞನ ವಚನಗಳು ಬಹುಮಟ್ಟಿಗೆ ಮಿತ್ರಸಮ್ಮಿತವೆಂಬ ವರ್ಗಕ್ಕೆ ಸೇರುತ್ತವೆ. ಹಿತೈಷಿಯಾದ ಗೆಳೆಯನೊಬ್ಬನು, ಈ ಲೋಕದಲ್ಲಿ ನಡೆದುಕೊಳ್ಳಬೇಕಾದ ನಿರ್ದೇಶನವನ್ನು ನಯವಾಗಿ, ಆದರೆ ಕೆಲವು ಸಲ ಕಟುವಾಗಿ ಹೇಳಿದ ಹಾಗಿದೆ ಸರ್ವಜ್ಞನ ಈ ಧಾಟಿ. ಕಾವ್ಯ ಪ್ರಯೋಜನವನ್ನು ಹೇಳುವಲ್ಲಿ ನಮ್ಮ ಅಲಂಕಾರಿಕರು ಕಾವ್ಯ ವ್ಯವಹಾರವನ್ನು ಬೋಧಿಸುತ್ತದೆ ಎನ್ನುತ್ತಾರೆ. ಸರ್ವಜ್ಞನ ಕಾವ್ಯ ನಿಜವಾದ ಅರ್ಥದಲ್ಲಿ ವ್ಯವಹಾರಕಾವ್ಯವಾಗಿದೆ. ಮನುಷ್ಯ ಸ್ವಭಾವವನ್ನು ಲೋಕದ ನಡವಳಿಕೆಗಳನ್ನು ಚೆನ್ನಾಗಿ ಕಂಡ ಅನುಭವಿಯೊಬ್ಬನು, ಸುತ್ತಣ ಜನರನ್ನು ತಿದ್ದುವ, ಸುಧಾರಕತನದ ಕಳಕಳಿಯಿಂದ ನುಡಿದ ಅಭಿವ್ಯಕ್ತಿಗಳಿವು ಎಂಬ ವಿದ್ವಾಂಸರ ಮಾತು ಸ್ವೀಕಾರಾರ್ಹವಾಗಿದೆ. ಇವುಗಳಲ್ಲಿ ಶಸ್ತ್ರಚಿಕಿತ್ಸಕನ ದೃಷ್ಟಿ ಇದೆ. ಶಾಸ್ತ್ರದ ನಿಷ್ಕೃಷ್ಟತೆಯೂ ಇದೆ. ಕಾವ್ಯದ ಸ್ವಾರಸ್ಯವೂ ಇದೆ. ಹೀಗಿರುವುದರಿಂದಲೇ ಈ ಉಕ್ತಿಮಾರ್ಗ ಸಲೀಸಾಗಿ ಸುತ್ತಣ ಜನಮನವನ್ನು ಮುಟ್ಟಿರುವುದು ಮತ್ತು ತಟ್ಟಿರುವುದು.

     ಸರ್ವಜ್ಞನ ಈ ಉದ್ದೇಶವೇ, ಅವನನ್ನು ಇತರ ಕವಿಗಳಿಂದ ಬೇರ್ಪಡಿಸುತ್ತದೆ. ಅವನದು, ಮನಸ್ಸನ್ನು ರಂಜಿಸುವ, ಅಥವಾ ಅರ್ಥ ರಮ್ಯತೆಯನ್ನು ವ್ಯಂಜಿಸುವ ಉಕ್ತಿವಿಧಾನವಲ್ಲ. ಮನಸ್ಸನ್ನು ಕೆದಕುವ ಹೊಡೆದೆಬ್ಬಿಸುವ ಉಕ್ತಿ ವಿಧಾನ, ಪ್ರಶ್ನಿಸುವ ವಿಧಾನ-

   ದಂಡಿಸದೆ ದೇಹವನು, ಖಂಡಿಸದೆ ಕರಣವನು

  ಉಂಡುಂಡು ಸ್ವರ್ಗವೇರಲಿಕೆ ಅದನೇನು

  ರಂಡೆಯಾಳುವಳೆ ಸರ್ವಜ್ಞ

  ಉಣ್ಣದೊಡವೆಯ ಗಳಿಸಿ ಮಣ್ಣಿನೊಳು ಬಚ್ಚಿಟ್ಟು

  ಚೆನ್ನಾಗಿ ನೆಲನ ಸಾರಿಸಿದವನ ಬಾಯೊಳಗೆ

  ಮಣ್ಣು ಕಾಣಯ್ಯ ಸರ್ವಜ್ಞ

 ಎಂಬಂಥ ಉಕ್ತಿಗಳನ್ನು ಗಮನಿಸಬಹುದು.

 ಸರ್ವಜ್ಞ ತ್ರಿಪದಿಯ ಸ್ವರೂಪ:

   ಸರ್ವಜ್ಞನ ಒಂದೊಂದೂ ತ್ರಿಪದಿಯೂ ಒಂದೊಂದು ಮುಕ್ತ ಪ್ರಪಂಚ. ಸರ್ವ ಸ್ವತಂತ್ರವಾಗಿ ಉಸಿರಾಡುತ್ತ ತನ್ನಕಾಲ ಮೇಲೆ ತಾನು ನಿಂತಿರುವ ಸಜೀವ ಕಲಾಕೃತಿ. ಕನ್ನಡ ಜಾನಪದ ಸಾಹಿತ್ಯದ ಜೀವನಾಡಿ ಎನಿಸಿಕೊಂಡಿರುವ ತ್ರಿಪದಿಗಳಲ್ಲಿ ಮುಕ್ತ ಸ್ವರೂಪದ ಅಸ್ತಿತ್ವವಿದೆ.  ಸರ್ವಜ್ಞನ ತ್ರಿಪದಿಯ ಕಾವ್ಯ ಸ್ವರೂಪವನ್ನು ಈ ರೀತಿಯಾಗಿ ಗುರುತಿಸ ಬಹುದಾಗಿದೆ. ಸರ್ವಜ್ಞನ ತ್ರಿಪದಿಯಲ್ಲಿ ಸರ್ವಸಾಮಾನ್ಯವಾಗಿ ಬೀಜ ಸ್ವರೂಪದ ಒಂದು ಮಾತು ಪ್ರಶ್ನೆಯಾಗಿಯೋ ಉದ್ಗಾರವಾಗಿಯೋ, ಉಪಮೆ ದೃಷ್ಟಾಂತವಾಗಿಯೋ ಮೊದಲ ಸಾಲಿನಲ್ಲಿ ಮೈದಾಳಿರುತ್ತದೆ. ಈ ಉಕ್ತಿಯಲ್ಲಿ ಕೇಳಿದವರ ಇಲ್ಲವೇ ಓದಿದವರ ಮನಸ್ಸನ್ನು ಗಕ್ಕನೆ ತನ್ನಡೆಗೆ ಸೆಳೆದುಕೊಂಡು, ಕೆರಳಿದ ಕುತೂಹಲದಿಂದ ಅದು ತನ್ನಲ್ಲಿ ಕೇಂದ್ರಿಕೃತವಾಗುವಂತೆ ಮಾಡಬಲ್ಲ ಗಾರುಡಿಗನ ಗತ್ತು ಇರುತ್ತದೆ. ಪದ್ಯದ ಕೇಂದ್ರಕೋಶವೂ ಜೀವಾಳ ಸ್ಥಾನವೂ ಆದ ಎರಡನೆ ಚರಣದಲ್ಲಿ ಆಶಯದ ಆವಿಷ್ಕಾರದ ಅಂಗಭೂತ ಬೆಳವಣಿಗೆ ಮಾತ್ರವಲ್ಲದೆ ಅಭಿವ್ಯಕ್ತಿಯ ಅರ್ಥಪೂರ್ಣ ಮುಕ್ತಾಯದೆಡೆಗೆ ಕೊಂಡೊಯ್ಯುವ ಒಂದು ತಿರುವು ಇರುತ್ತದೆ. ಕೊನೆಯ ಪಾದದಲ್ಲಿ ಅನಿರೀಕ್ಷಿತವೂ ತೃಪ್ತಿದಾಯಕವೂ ಆದ ಅಭಿವ್ಯಕ್ತಿಗೆ ಮಂಗಲ ಹಾಡುವ ಮುಕ್ತಾಯವಿರುತ್ತದೆ.

   ತ್ರಿಪದಿಯು ಸರ್ವಜ್ಞನ ಕೈಯಲ್ಲಿ ಸಾರ್ಥಕ್ಯವನ್ನು ಪಡೆಯಿತು. ತ್ರಿಪದಿ ಪ್ರಾಚೀನವಾದ ಅಚ್ಚಕನ್ನಡ ಛಂದಸ್ಸು  ಆರಿಸಿಕೊಂಡು ಸರ್ವಜ್ಞ, ದೇಸಿತತ್ವಕ್ಕೆ ಮನ್ನಣೆ ಕೊಟ್ಟಿದ್ದಾನೆ. ಜನಪದ ಸಾಹಿತ್ಯದಲ್ಲಿ ಮಾತ್ರವಲ್ಲದೆ ತ್ರಿಪದಿಯು ಬಾದಾಮಿಯ ಶಾಸನದಲ್ಲಿಯೂ ಕಂಡುಬರುತ್ತದೆ. ವಚನಕಾರರಲ್ಲಿಯೂ ಹಲವಾರು ಇದನ್ನು ಉಪಯೋಗಿಸಿಕೊಂಡದ್ದುಂಟು. ಆದರೆ ಸರ್ವಜ್ಞನು ತನ್ನ ಸ್ವಭಾವಕ್ಕೆ ತಕ್ಕಂಥ ಛಂದಸ್ಸನ್ನು ಆಯ್ಕೆ ಮಾಡಿಕೊಂಡಿದ್ದಾನೆ. ಉಳಿದ ಕವಿಗಳಂತೆ ಅವನಲ್ಲಿ ಕಾವ್ಯ ಪ್ರವಾಹವು ಸತತವಾಗಿ ಹರಿಯುವುದಿಲ್ಲ. ಅವನಲ್ಲಿ ಕಾವ್ಯ ಶಕ್ತಿಯು ಕ್ಷಣ ಹೊತ್ತು ಮಿಂಚಿ ಮಾಯವಾಗುತ್ತದೆ. ಅಂಥ ಅಮೃತಗಳಿಗೆಯಲ್ಲಿ ಬಿಡಿ ಬಿಡಿಯಾದ ರತ್ನಗಳಂತೆ ತ್ರಿಪದಿಗಳು  ಉದಯಿಸುತ್ತವೆ. ಅವನ ತ್ರಿಪದಿ,  ತ್ರಿವಿಕ್ರಮನ ತ್ರಿಪಾದದಂತೆ ಇಡಿಯ ವಿಶ್ವವನ್ನೇ ವ್ಯಾಪಿಸುತ್ತದೆ. `ಕಿರಿದರೊಳ್ ಪಿರಿದರ್ಥಮಂ’ ಪೇಳುವ ಕೌಶಲ್ಯ ಸರ್ವಜ್ಞನಲ್ಲಿ ಅತಿಶಯವಾಗಿದೆ.

 ಸರ್ವಜ್ಞ ಮತ್ತು ವಚನಕಾರರು:

   ಸರ್ವಜ್ಞ ಮುಖ್ಯವಾಗಿ ವಚನಗಳನ್ನು ತ್ರಿಪದಿಗೆ ತಿರುಗಿಸಿ ಪ್ರಸಾರ ಮಾಡಿದವನು. ಆದರೆ ಒಂದು ವ್ಯತ್ಯಾಸ; ವಚನಕಾರರು ಒಂದು ಧಾರ್ಮಿಕ ಸಾಮಾಜಿಕ ಆಂದೋಳನದ ಸಂದರ್ಭದಲ್ಲಿ, ಸಾಂಘಿಕವಾಗಿ ಕೆಲಸ ಮಾಡಿದವರು; ಸರ್ವಜ್ಞ ಅಂಥ ಯಾವ ಉದ್ದೇಶದಿಂದಲೂ ಬದ್ಧವಾಗದೆ, ಏಕಾಂಗಿಯಾಗಿ ಊರೂರು ಅಲೆದವನು. ಆದರೆ ಒಂದು ಧಾರ್ಮಿಕ ಉದ್ದೇಶದಿಂದ ಬದ್ಧವಾದ ವಚನಕಾರರ, ಅದರಲ್ಲೂ ಪ್ರಮುಖ ವಚನಕಾರರ, ವಚನಗಳಲ್ಲಿರುವ ಕಾವ್ಯಗುಣ ಸರ್ವಜ್ಞನಲ್ಲಿಲ್ಲ. ವಚನಕಾರರಲ್ಲಿಲ್ಲದ ಒಂದು ಉದಾರ ಧೋರಣೆ ಸರ್ವಜ್ಞನಲ್ಲಿದೆ. ವಚನಕಾರರು ಮೂಲತಃ ಒಂದು ನೂತನ ಮತಧರ್ಮ ಪ್ರವರ್ತನೆಯ ಉದ್ದೇಶದಿಂದ ಬದ್ಧರಾಗಿದ್ದರೆ, ಸರ್ವಜ್ಞ ತಾನು ಅಂಥ ಯಾವ ಧರ್ಮಪ್ರಸಾರದ ಉದ್ದೇಶಕ್ಕೂ ಬದ್ಧನಾದವನಲ್ಲ. ಎಲ್ಲ ಬಗೆಯ ಹಂಗನ್ನೂ ಹರಿದುಕೊಂಡು ಹಿಂಡನಗಲಿದ ಗಜದಂತೆ ತಿರುಗಿದ ಈತ ಯಾವ ಒಂದು ಮತಧರ್ಮವನ್ನೂ ಎತ್ತಿಹಿಡಿಯುವ ಸ್ವಭಾವದವನಲ್ಲ. ಅವನ ತ್ರಿಪದಿಗಳಿಂದ ಆತ ವೀರಶೈವ ಧರ್ಮದವನೆಂದು ಊಹಿಸಲು ಸಾಧ್ಯವಿದ್ದರೂ, ಆತ ವಾಸ್ತವವಾಗಿ ಅದನ್ನೂ ಮೀರಿ ಸಂಚರಿಸಿದನು. ದೇವರು ಧರ್ಮ ಇತ್ಯಾದಿ ವಿಚಾರಗಳಲ್ಲಿ ಆತನ ಕಲ್ಪನೆ ತಕ್ಕಮಟ್ಟಿಗೆ ಜಾತ್ಯಾತೀತವಾದದ್ದು. ಹೀಗಾಗಿ ಸರ್ವಜ್ಞನ ತ್ರಿಪದಿಗಳು ಎಲ್ಲರಿಗೂ ಪ್ರಿಯವಾಗಿವೆ.

   ವಚನಕಾರರ ಪ್ರಭಾವ ಸರ್ವಜ್ಞನ ಮೇಲೆ ತುಂಬಾ ಆಗಿದೆ. ಈ ವಿಷಯವನ್ನು ಮಾರ್ಮಿಕವಾಗಿ ವಿವರಿಸುತ್ತ ಆರ್.ಸಿ.ಹಿರೇಮಠ ಅವರು ಹೀಗೆ ಹೇಳಿದ್ದಾರೆ. `ವಚನಕಾರರಂತೆ ಸರ್ವಜ್ಞ ವಿಚಾರವಾದಿ, ಅನುಭಾವಿ: ಸಮಾಜ-ವಿಮರ್ಶಕ ಮತ್ತು ಕ್ರಾಂತಿಕಾರಕ, ಜನಸಮಾನ್ಯರ ಜೀವನವನ್ನು ತಿದ್ದಿ ತೀಡುವುದೇ ಅವನ ಉದ್ದೇಶವಾಗಿದ್ದಿತು. ದಯೆ ಆತನ ಧರ್ಮವಾಯಿತು. ಕಾಯಕ ವೃತ್ತಿಯಾಯಿತು. ಸಮಾಜದಲ್ಲಿದ್ದ ಜಾತಿ-ಮತಗಳ ವೈಷಮ್ಯ ಕಿತ್ತು ಬಿಸುಟಲು ಆತನ ನಿರಂತರ ಹೋರಾಡಿದನು. ಸದಾಚಾರ ಸನ್ಮಾರ್ಗಗಳೇ ಜೀವನದ ಮೌಲ್ಯಗಳೆಂದು ಸ್ಪಷ್ಟಪಡಿಸಿದನು. ಶಿವಶರಣರ ಷಟ್‍ಸ್ಥಲ, ಅಷ್ಟಾವರಣ ಪಂಚಾಚಾರಗಳನ್ನು ಸರ್ವಜ್ಞನು ತನ್ನ ವಚನಗಳಲ್ಲಿ ಪ್ರತಿಪಾದಿಸಿದಂತೆ ಅವರ ಜೀವನ ಮೌಲ್ಯಗಳನ್ನು ಧಾರಾಳವಾಗಿ ಪ್ರತಿಪಾದಿಸಿದ್ದಾನೆ.

  ಸರ್ವಜ್ಞನ ತ್ರಿಪದಿಗಳಲ್ಲಿಯ ಸಮಾಜ ವಿಮರ್ಶೆ ಕಾವ್ಯ ತತ್ವ:

  ಅವನದು ಮುಖ್ಯವಾಗಿ ಜೀವನ ಪ್ರೀತಿಯಿಂದ ಹುಟ್ಟಿದ ಮಾನವ ಧರ್ಮ, ಸುತ್ತಣ ಬದುಕನ್ನು ಹಸನುಮಾಡುವ ಸುಧಾರಕತನ ಅವನ ಅಭಿವ್ಯಕ್ತಿಯ ಮೂಲ ಪ್ರೇರಣೆ. ಇದರಿಂದಾಗಿ ಅವನ ಅಭಿವ್ಯಕ್ತಿ, ದೃಷ್ಟಾಂತ ಹಾಗೂ ಹೇಳಿಕೆಗಳ ರೂಪದ್ದಾಗುತ್ತದೆ. ಕಾವ್ಯದ ರಮ್ಯತೆಗಿಂತ ತತ್ತ್ವದ ವಾಚ್ಯವೇ ಪ್ರಧಾನವಾಗುತ್ತದೆ. ನಿದರ್ಶನಕ್ಕೆ:

   ಆನೆ ನೀರಾಟದಲಿ ಮೀನಕಂಡಂಜುವುದೆ?

   ಹೀನ ಮಾನವರ ದುರ್ನಡಿಗೆ ತತ್ತ್ವದ

   ಜ್ಞಾನಿಯಂಜುವೆನೆ ಸರ್ವಜ್ಞ.

   ಎಂಬ ಈ ಪದ್ಯವನ್ನು ನಿದರ್ಶನವಾಗಿ ನೋಡಬಹುದಾಗಿದೆ. ಇದರಲ್ಲಿ ನೀತಿಕಾವ್ಯದ ಸಮಸ್ತ ಲಕ್ಷಣಗಳನ್ನೂ ಹಾಗೂ ದೌರ್ಬಲ್ಯಗಳನ್ನೂ ಗುರುತಿಸಬಹುದು. ಮೊದಲ ಪಂಕ್ತಿ, ಆನೆ ನೀರಾಟದಲಿ ಮೀನಕಂಡಂಜುವುದೆ ಎಂಬ ಪ್ರಶ್ನೆ, ಆಧುನಿಕ ಅರ್ಥದಲ್ಲಿ ನಿಜವಾಗಿಯೂ ಹರಳುಗೊಂಡು ಒಂದು ಕಾವ್ಯ ಪ್ರತಿಮೆಯಾಗಿದೆ. ಅದೊಂದು ಪಂಕ್ತಿ ಸಾಲು ಏನೆಲ್ಲವನ್ನು ಧ್ವನಿಸಲು ಆದರೆ ಮುಂದಿನ ಎರಡು ಸಾಲುಗಳು, ಮೊದಲ ಪಂಕ್ತಿ ಧ್ವನಿಸುತ್ತಿದ್ದ ಅರ್ಥ ಪರಂಪರೆಯನ್ನು ವಿವರಣಾತ್ಮಕವಾದ ಉಪದೇಶದ ಧಾಟಿಯಲ್ಲಿ ಒಂದು ಪರಿಮಿತಾರ್ಥಕ್ಕೆ ಇಳಿಸಿಬಿಡುತ್ತವೆ. ಇದಕ್ಕೆ ಕಾರಣ ಈ ಕವಿಯ ಕಾವ್ಯಧೋರಣೆಯೇ. ಸರ್ವಜ್ಞನ ಉಕ್ತಿಗಳಲ್ಲಿ ನೆನಪಿನ ನಾಲಗೆಯ ಮೇಲೆ ರಸವೊರಿಸುವ ಎಷ್ಟೋ ಪಂಕ್ತಿಗಳು ದೊರಕುತ್ತವೆಯೆಂಬುದು ಸಮಾಧಾನದ ಸಂಗತಿ. `ಬಳ್ಳಿಗುರುಡರು ಕೂಡಿ ಹಳ್ಳವನು ಬಿದ್ದಂತೆ’ ಎಂಬ ಪಂಕ್ತಿಯಲ್ಲಿ ಬಳ್ಳಿಗುರುಡ ಎಂಬ ಮಾತನ್ನು ಇಲ್ಲಿ ಗಮನಿಸಬೇಕು. `ಧನಕನಕ ಉಳ್ಳವನು ದಿವಸಕರನಂತಕ್ಕು, ಧನಕನಕ ಹೋದ ಮರುದಿವಸ ಹಾಳೂರ ಶುನಕನಂತಕ್ಕು’ ಎಂಬ ಎರಡು ಹೋಲಿಕೆಗಳ ವೈದೃಶ್ಯದ ಸ್ವಾರಸ್ಯ ಸೊಗಸಾದುದ್ದು. `ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ’ `ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೆ ಮೇಲು’ `ಊರಿಂಗೆ ದಾರಿಯನು ಯಾರು ತೋರಿದರೇನು’ `ಚಿತ್ತವಿಲ್ಲದೆ ಗುಡಿಯ ಸುತ್ತಿದರೆ ಫಲವೇನು?’ `ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ’ ಇಂಥ ಎಷ್ಟೊಂದು ಹೇಳಿಕೆಗಳು ಸರ್ವಜ್ಞನ ತ್ರಿಪದಿಗಳ ತುಂಬ ಚದುರಿಕೊಂಡು ಮಿನುಗುತ್ತವೆ. ಈ ಸಂಕ್ಷಿಪ್ತಾಭಿವ್ಯಕ್ತಿ, ಅವುಗಳ ಹಿಂದಿರುವ ಲೋಕಾನುಭವ, ದಿನನಿತ್ಯದ ವ್ಯವಹಾರಕ್ಕೂ ಒದಗಿ ಬರುತ್ತವೆ. ಸುತ್ತಣ ಜನದ ಆಡುಮಾತಿಗೆ ಕಾವ್ಯಾಭಿವ್ಯಕ್ತಿಯ ತಿರುವುಕೊಟ್ಟು ವ್ಯಂಗ್ಯ, ಕಟಕಿ, ವಿನೋದ, ಸಹಾನುಭೂತಿ ಇತ್ಯಾದಿ ವೈವಿಧ್ಯಗಳಲ್ಲಿ, ಜನರ ಬದುಕನ್ನು ತಿದ್ದುತ್ತಾ, ನಿಜವಾದ ಅರ್ಥದಲ್ಲಿ ಜನತೆಯ ಕವಿಯಾದ ಸರ್ವಜ್ಞ, ಕನ್ನಡ ಸಾಹಿತ್ಯ ಪರಂಪರೆಯಲ್ಲಿ ತನ್ನ ವಿಶಿಷ್ಟ ವ್ಯಕ್ತಿತ್ವದಿಂದ ಇಂದಿಗೂ  ಕನ್ನಡ ಜನಮಾನಸದಲ್ಲಿ ಚಿರಪರಿಚಿತನಾಗಿ ಉಳಿದಿರುವುದನ್ನು ಗಮನಿಸ ಬಹುದಾಗಿದೆ.

     ಸರ್ವಜ್ಞನ ಕಾವ್ಯಕ್ಕೆ ಇಂಥದೇ ವಸ್ತು ಇಲ್ಲ. ಅದಕ್ಕೊಂದು ನಿಶ್ಚಿತವಾದ ಬೆಳವಣಿಗೆ-ಆದಿ, ಮಧ್ಯ, ಅಂತ್ಯ ಇಲ್ಲ. ಇದನ್ನು ಇಂಥಲ್ಲಿಂದ ಓದಬೇಕೆಂಬ ಹಂಗಿಗೆ ಓದುಗರನ್ನು ಒಳಗುಪಡಿಸುವುದಿಲ್ಲ. ಎಲ್ಲಿಂದಾದರೂ ಓದಬಹುದು, ಎಲ್ಲಿ ಬೇಕಾದರೂ ನಿಲ್ಲಿಸಬಹುದು ಎಂ ಜಿ.ಎಸ್.ಶಿವರುದ್ರಪ್ಪನವರು ಹೇಳಿಕೆ ಅಕ್ಷರಸಹ ಸತ್ಯ. ಮುಂದುವರಿದು ಅವರು ಸರ್ವಜ್ಞನ ಕಾವ್ಯ ನಿಜವಾದ ಅರ್ಥದಲ್ಲಿ ವ್ಯವಹಾರ ಕಾವ್ಯ. ಅನುಭವಿಯೊಬ್ಬನು-ಮನುಷ್ಯ ಸ್ವಭಾವವನ್ನು, ಲೋಕದ ನಡವಳಿಕೆಯನ್ನು ಚೆನ್ನಾಗಿ ಕಂಡ ಅನುಭವಿಯೊಬ್ಬನು-ಸುತ್ತಣ ಜನರನ್ನು ತಿದ್ದುವ ಸುಧಾರಕತನದ ಕಳಕಳಿಯಿಂದ ನುಡಿದ ಅಭಿವ್ಯಕ್ತಿಗಳಿವು. ಇವುಗಳಲ್ಲಿ ಶಸ್ತ್ರ ಚಿಕಿತ್ಸಕನ ದೃಷ್ಟಿಯಿದೆ; ಶಾಸ್ತ್ರದ ನಿಷ್ಕೃಷ್ಟತೆಯೂ ಇದೆ. ಹೀಗಿರುವುದರಿಂದಲೇ ಈ ಉಕ್ತಿಮಾರ್ಗ ಸಲೀಸಾಗಿ ಸುತ್ತಣ ಜನ ಜೀವನವನ್ನು ಮುಟ್ಟುತ್ತದೆ, ತಟ್ಟುತ್ತದೆ ಎಂದು ನುಡಿದಿದ್ದಾರೆ. ಈ ಮಾತುಗಳು ಸ್ವೀಕಾರಾರ್ಹವಾಗಿವೆ.

     ಆಡು ಮುಟ್ಟದ ಗಿಡವಿಲ್ಲ-ಎಂದು ಹೇಳುವುದುಂಟು. ಅದರಂತೆ ಸರ್ವಜ್ಞ ಹೇಳದ ವಿಷಯವಿಲ್ಲ. ದಿನನಿತ್ಯವೂ ಪ್ರಪಂಚದಲ್ಲಿ ಎಲ್ಲೆಡೆಗೆ ಕಾಣಿಸುವ ವಿಷಯಗಳನ್ನು ಕುರಿತು ಅವನು ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ. ಚೆನ್ನಪ್ಪ ಉತ್ತಂಗಿಯವರು ಸರ್ವಜ್ಞನ ವಚನಗಳನ್ನು ಪಾರಮಾರ್ಥಿಕ ಪದ್ಯಗಳು, ನೈತಿಕ ಪದ್ಯಗಳು ಮತ್ತು ಲೌಕಿಕ ಪದ್ಯಗಳು ಎಂದು ಮೂರು ವಿಶಾಲ ವಿಭಾಗವಾಗಿ ವಿಂಗಡಿಸಿ ಒಟ್ಟು ಸುಮಾರು ಎರಡು ಸಾವಿರದಷ್ಟು ವಚನಗಳನ್ನು ಪ್ರಕಟಿಸಿದ್ದಾರೆ, ಪ್ರತಿಯೊಂದು ವಿಭಾಗದಲ್ಲಿ ಅಂದಂದು ಅನಿಸಿದ್ದಕ್ಕೆ ಅಂದಂದೇ ಮಾತುಕೊಟ್ಟು ನಿಲ್ಲಿಸಿದ `ಪದ್ಧತಿ’ಗಳಿವೆ. ಉದಾ: ಗುರುಪದ್ಧತಿ, ಲಿಂಗಪದ್ಧತಿ ಇತ್ಯಾದಿ. ಇದು ಒಂದು ಬಗೆಯ ವಿಷಚಿಂತನುಗುಣವಾದ ಸರ್ವಜ್ಞ ವಚನಗಳ ವಿಭಾಗಕ್ರಮ ಎನ್ನಬಹುದು. ಸೂಕ್ಷ್ಮವಾಗಿ ನಿರೀಕ್ಷಿಸಿರುವ ಅವನ ಕಣ್ಣಿಗೆ ಬಿದ್ದ ಯಾವುದೇ ವಸ್ತು, ವ್ಯಕ್ತಿ ಅಥವಾ ಸಮಾಜದ ಗುಣ-ದೋಷಗಳು ಅವನ ತ್ರಿಪದಿ ರಚನೆಗೆ ಕಾರಣವಾಗುತ್ತವೆ, ಆಗ ಅವನು ಒಳ್ಳೆಯದನ್ನು ಮೆಚ್ಚುತ್ತಾನೆ. ಕೆಡುಕನ್ನು ನಿರ್ಭೀತಿಯಿಂದ ಖಂಡಿಸುತ್ತಾನೆ. ಅನ್ಯಾಯ-ಅನಾಚಾರಗಳನ್ನು ನಿರ್ದಾಕ್ಷಿಣ್ಯವಾಗಿ ಟೀಕಿಸುತ್ತಾನೆ. ಅದರ ಜೊತೆಗೇ ವಿಧಾಯಕವಾಗಿ ಮಾರ್ಗದರ್ಶಕ ಮಾತುಗಳನ್ನು ಹೇಳುತ್ತಾನೆ.

     ಸರ್ವಜ್ಞನ ಕಾಲಕ್ಕೆ ದೇವರು, ಧರ್ಮ ಹಾಗೂ ಧಾರ್ಮಿಕ ವಿಧಿ-ವಿಧಾನಗಳು ತಮ್ಮ ತಿರುಳನ್ನು ಕಳೆದುಕೊಂಡಿರಬೇಕು; ಅಲ್ಲದೆ ಅಧರ್ಮ, ಅನೀತಿ, ಬಾಹ್ಯಾಡಂಬರ, ಮೂಢನಂಬಿಗೆ, ಪಕ್ಷಪಾತ, ಬೂಟಾಟಿಕೆ, ಮೋಸಗಾರಿಕೆ, ದುರ್ವರ್ತನೆ ಮೊದಲಾದವು ಸಮಾಜದಲ್ಲಿ ತಾಂಡವವಾಡುತ್ತಿರಬೇಕು. ಇಂಥ ಪರಿಸ್ಥಿತಿಯಲ್ಲಿ `ಕಂಡುದನು ಆಡುವ’ ಸರ್ವಜ್ಞನ ಅಂತರಂಗದಿಂದ ವಚನಗಳು ಸಿಡಿದೆದ್ದವು.

     ಸರ್ವಜ್ಞನು ನಗೆಯ ಅಸ್ತ್ರದಿಂದಲೇ ಸಮಾಜವನ್ನು ತಿದ್ದಲು ಪ್ರಯತ್ನಿಸಿದ್ದಾನೆ. ಅವನದು `ನಕ್ಕು ನಗಿಸುವ ನಗೆ’ ಅವನಲ್ಲಿ  ನಿಃಸ್ವಾರ್ಥ ಭಾವನೆಯೂ, ಪೂರ್ವಗ್ರಹರಹಿತದ ದೃಷ್ಟಿಯೂ ಇದ್ದುದರಿಂದ ಅವನ ವಿಡಂಬನೆಯು ಯಾವುದೇ ವ್ಯಕ್ತಿಯ ಮನ ನೋಯಿಸುವಂಥದಾಗುವುದಿಲ್ಲ. ವಿನೋದ ಪ್ರವೃತ್ತಿ ಅವನ ವ್ಯಕ್ತಿತ್ವದ ಒಂದು ಮಹತ್ವದ ಅಂಶವೇ ಆಗಿದೆ. ವಿಡಂಬನೆ, ಕಟಕಿ, ವಿನೋದ, ತಿಳಿಹಾಸ್ಯ ಮೊದಲಾದ ನಗೆಯ ವಿವಿಧ ಪ್ರಕಾರಗಳು ಸರ್ವಜ್ಞನಲ್ಲಿವೆ. ಸಮಾಜದ ಅಸಂಬದ್ಧತೆ,ಮೌಢ್ಯಗಳನ್ನು ಕಂಡು ಪುರಂದರದಾಸನು -`ನಗೆಯು ಬರುತಿದೆ ಎನಗೆ ನಗೆಯು ಬರುತಿದೆ’ ಎಂದು ನುಡಿದಂತೆ, ಸರ್ವಜ್ಞನೂ ನಕ್ಕಿದ್ದಾನೆ. ಸಮಾಜ-ವಿಮರ್ಶೆಯನ್ನು ಮಾಡುವಲ್ಲಿ ಈ ಅವನ ಹಾಸ್ಯವು ಅವನ ತ್ರಿಪದಿಗಳಿಗೆ ಒಂದು ವಿಶೇಷ ಸೊಬಗನ್ನು ತಂದು ಕೊಟ್ಟಿದೆ. ಒಂದೊಂದು ಸಲ ಕೇವಲ ತಿಳಿಹಾಸ್ಯವು ಅವನ ತ್ರಿಪದಿಯಲ್ಲಿ ಕಂಡುಬರುವುದು

ಹರಕು ಹೋಳಿಗೆ ಲೇಸು ಮುರುಕು ಹಪ್ಪಳಲೇಸು

ಕುರುಕುರು ಕಡಲೆ ಬಲುಲೇಸು, ಪಾಯಸದ

ಸುರುಕು ಲೇಸೆಂದ ಸರ್ವಜ್ಞ.  

 ಸರ್ವಜ್ಞನ ತ್ರಿಪದಿಗಳ ತಾತ್ವಿಕ ನೆಲೆಗಟ್ಟು:   

  `ಸರ್ವಜ್ಞನು ಸಂಸ್ಕೃತರ ಸಂಸ್ಕೃತ ಕವಿಯಲ್ಲ ಪ್ರಾಕೃತ ಕವಿ’ ಎಂದು ಸರ್ವಜ್ಞತಜ್ಞರೆಂದು ಪ್ರಸಿದ್ಧರಾದ ಚೆನ್ನಪ್ಪ ಉತ್ತಂಗಿಯವರು ಹೇಳಿದ ಮಾತು ಸರ್ವಜ್ಞನ ಭಾಷಾಶೈಲಿಗೂ ಅನ್ವಯಿಸುತ್ತದೆ. ಅವನದು ಪಂಡಿತ ಮಾನ್ಯವಾದ ಸಂಸ್ಕೃತ ಭೂಯಿಷ್ಠ, ದೀರ್ಘಸಮಾಸ ಘಟಿತ-ಶೈಲಿಯಲ್ಲ. ಸಹಜ ಸುಲಭ ಅಚ್ಚಕನ್ನಡ ಪದಗಳಲ್ಲಿಯೇ ತನ್ನ ಅಭಿಪ್ರಾಯಗಳನ್ನು ಸಮರ್ಪಕವಾಗಿ ವ್ಯಕ್ತಪಡಿಸಿದ್ದಾನೆ. ಭಾಷಾ ಶೈಲಿಯಲ್ಲಿಯೂ ಅವನು ದೇಸಿ ತತ್ವಕ್ಕೆ ಮನ್ನಣೆ ಕೊಟ್ಟಿದ್ದಾನೆ.ಈತನು ಕೆಲವೆಡೆ ಎಂತಹ ಗಹನ ಗೂಢ ತತ್ವವನ್ನು,ಆಶಯವನ್ನು ಸಂಸ್ಕೃತದ ಗಂಧಗಾಳಿಯ ಸೋಂಕು ಇಲ್ಲದಂತಹ ತಿಳಿಗನ್ನಡದಲ್ಲಿ ಭಟ್ಟಿ ಇಳಿಸ ಬಲ್ಲ ಕನ್ನಡ ನುಡಿಯ ಹಿಡಿತ ಪ್ರಭುತ್ವ ಆತನಿಗಿರುವುದನ್ನು ಕಾಣ ಬಹುದು. ನಿದರ್ಶನಕ್ಕೆ,

        ಆಗಿಲ್ಲ ಹೋಗಿಲ್ಲ ಮೇಗಿಲ್ಲ ಕೆಳಗಿಲ್ಲ

        ತಾಗಿಲ್ಲ ತಪ್ಪು ತಡೆಯಿಲ್ಲ ಲಿಂಗಕೆ

        ದೇಗುಲವೆ ಇಲ್ಲ ಸರ್ವಜ್ಞ.

 ಈ ತ್ರಿಪದಿಯಲ್ಲಿ  ಸಂಸ್ಕೃತದ ಸುವಿಖ್ಯಾತವೂ ಜನಪ್ರಿಯವೂ ಆದ ಪರಮಾರ್ಥದ ಕುರಿತ ಪಾರಿಭಾಷಿಕ ವೆಂಬಂತಹ ಒಂದು ಪದವನ್ನು ಬಳಸದೇ ದಿನಬಳಕೆಯ ಮಾತಿನಲ್ಲಿ ಜಟಿಲವೂ ನಿಗೂಢವೂ ಆದ ಆಶಯವನ್ನು ಸಮರ್ಥವಾಗಿ ಬಿಂಬಿಸಿದ್ದಾನೆ. ಕನ್ನಡ ಭಾಷೆಯಲ್ಲಿ ಎಂತಹ ಕಸುವು ಇದೆ ಎಂಬುದನ್ನೂ ಇದು ಸೂಚಿಸುತ್ತದೆ.ಆಗಿಲ್ಲ ಹೋಗಿಲ್ಲ ಅಂದರೆ ಆಗು ಹೋಗುಗಳಿಲ್ಲದ ಅನಾದಿ ಅನಂತ ಸ್ವರೂಪ ಕಾಲಾತೀತ;  ಮೇಗಿಲ್ಲ ಕೆಳಗಿಲ್ಲ ವೆಂದರೆ ಸ್ಥಲಾತೀತ. ತಾಗಿಲ್ಲ ತಪ್ಪು ತಡೆಯಿಲ್ಲ ವೆಂದರೆ ಉಪಮಾತೀತ. ನಿರಂಜನ ನಿರಂಕುಶ ಸ್ವರೂಪ ನಿಗೂಢ ತತ್ವದ ತಿರುಳು ಇಲ್ಲಿ ತಿಳಿಗನ್ನಡದಲ್ಲಿ ಪರಿಪಾಕ ಗೊಂಡಿದೆ. ಪರಮಾತ್ಮನ ಅನಾದ್ಯನಂತ ಸ್ವರೂಪವನ್ನು ಆತನು ಸ್ವಯಂಭೂ ಎಂಬುದನ್ನೂ ಅವನ ನಿರ್ಗುಣ ನಿರ್ಮಲಸ್ವರೂಪವನ್ನೂ ವಿಶ್ವವ್ಯಾಪಕತೆಯನ್ನೂ ಸರ್ವಜ್ಞನು ಎಂಥ ಸುಲಭ ಅಚ್ಚಕನ್ನಡ ಶಬ್ದಗಳಲ್ಲಿ ಮೇಲಿನ ತ್ರಿಪದಿಯಲ್ಲಿ ಬಣ್ಣಿಸಿದ್ದಾನೆ. ಕವಿಯ ಕನ್ನಡ ಪ್ರಜ್ಞೆಗೆ- ಪ್ರಭುತ್ವಕ್ಕೆ ಇದು ನಿದರ್ಶನವಾಗಿದೆ.ಪಾಂಡಿತ್ಯ ಪ್ರದರ್ಶನಕ್ಕಾಗಿ ಅವನು ಅಲಂಕಾರಗಳನ್ನು ಬಳಸುವುದಿಲ್ಲ. ಆದರೆ ಹದವರಿತ ಔಚಿತ್ಯ ಪೂರಿತ ಅಲಂಕಾರಗಳು, ರೂಪಕಗಳು ಅವನ ತ್ರಿಪದಿಯಲ್ಲಿ ಧಾರಾಳವಾಗಿವೆ. ಉಪಮೆ, ರೂಪಕ, ದೃಷ್ಟಾಂತಗಳ, ನಿಧಿ ಅವನ ವಚನಗಳು. ವಿರಾಗಿಯಾಗಿ ಒಂಟಿಯಾಗಿ ನಿತ್ಯ ಸಂಚಾರಿಯಾಗಿ ಬದುಕಿರ ಬಹುದಾದ ಸರ್ವಜ್ಞ ಹಾಳೂರಿನಲ್ಲಿ ಹಾದು ಹೋಗ ಬಹುದಾದ, ಬೀಡು ಬಿಟ್ಟಿರ ಬಹುದಾದ ಸಂಭವವಿಲ್ಲದಿಲ್ಲ. ಅಂತಹ ಪ್ರಸಂಗಗಳಲ್ಲಿ ಹಲವಾರು ಸಂಗತಿಗಳ ಜ್ವಲಂತ ಸ್ಮೃತಿಯೇ ಅಲಂಕಾರಗಳ ಸೃಷ್ಟಿಗೆ ಕಾರಣವಾಗಿದೆ. ಉದಾಹರಣೆಗೆ ತತ್ವವನ್ನು ಅರಿಯದೆ ಕೇವಲ ರುದ್ರಾಕ್ಷಿಯನ್ನು ಹೊತ್ತವನು `ಅತ್ತಿಮರ  ತಾ ಕಾಯ ಹೊತ್ತಿರ್ದ ತೆರದಂತೆ’ ಎಂಬಲ್ಲಿಯ ಹೋಲಿಕೆಯ ಸೊಗಸನ್ನು ಗಮನಿಸಬಹುದು.  ಅದೇ ರೀತಿ ` ವಿದ್ಯೆಯಿಲ್ಲದವನ ಬರಿಮುಖವು ಹಾಳೂರ ಹದ್ದಿನಂತಿಕ್ಕು’ ಎಂಬಲ್ಲಿ ಹದ್ದಿನ ಉಪಮೆ ಶಕ್ತಿಯುತವಾಗಿದೆ. ಪ್ರಾಣಿ ಪಕ್ಷಿಗೆ ಸಂಬಂಧಿಸಿದ ಮಾರ್ಮಿಕವಾದ ಉಪಮೆಗಳನ್ನು ಕಾಣ ಬಹುದಾಗಿದೆ.

 1. ವನಿತೆಯನಗೊಲಿದಳೆನಬೇಡ ಬೆಳ್ಳಕ್ಕಿ

 ದನವ ಕಾದಂತೆ ಸರ್ವಜ್ಞ. ಈ ಉಪಮೆಯಲ್ಲಿ ಹೆಣ್ಣಿನ ಪ್ರೀತಿ ತನಗೆ ದಕ್ಕಿತೆಂದು ನಂಬಿ ಕೆಡುವ ದುರ್ದೈವಿಗೆ ದನಕಾಯುವಂತೆ ಅದನ್ನನುಸರಿಸುವ ಬೆಳ್ಳಕ್ಕಿಗೆ ಹೋಲಿಸಿರುವುದನ್ನು ಕಾಣಬಹುದಾಗಿದೆ.

 2. ನಿಲುಕದ ಫಲಕೆ ನರಿ

 ಮಿಡುಕಿ ಸತ್ತಂತೆ

3.ಸತ್ವವಿಲ್ಲದವರ ಒಡನಾಟ ಬೇಲಿಯ

 ಒತ್ತಿಯಂತಿಹುದು ಇತ್ಯಾದಿ ಉಪಮೆಗಳಲ್ಲಿ ಒಂದಿಲ್ಲೊಂದು ಬಗೆಯ ಒಗರು-ಹೊಗರನ್ನು ಕಾಣಬಹುದಾಗಿದೆ.

 ತ್ರಿಪದಿಗಳ ಸಾರ :

 ಮಾನವ ಸಾಂಸಾರಿಕ ಜೀವನ, ದಿನದಿನದ ವಸ್ತು ಸಂಗತಿಗಳಿಂದ ಮೊಗೆ ಮೊಗೆದು ತೆಗೆದುಕೊಂಡ ಅನೇಕಾನೇಕ ಉಪಮೆಗಳು ಈತನ ಸಾಹಿತ್ಯಾಭಿವ್ಯಕ್ತಿಯ ಜೀವನಾಡಿಗಳಾಗಿವೆ. ನಿದರ್ಶನಕ್ಕೆ,

 ಸಾಣೆ ಕಲ್ಲೊಳು ಗಂಧ ಮಾಣದಲೆ ಎಸೆವಂತೆ

 ಕಳಹೋಗಿ ಕೆಮ್ಮಿ ಸತ್ತಂತೆ

 ಹಿಂಡನಗಲಿದ ಗಜದಂತೆ

 ಎಣ್ಣೆ ಕುಡಿಕೆಯೊಡೆದಂತೆ

 ಹಾಳೂರ ಕೊಟ್ಟಿಗೆ ಉರಿದಂತೆ

 ಕಿಲುಬಿಡಿದ ಕಂಚಿನಂತೆ

 ಕಣ್ಣೊಳಗೆ ಕಾರವಿಟ್ಟಂತೆ

 ಬೆರಣಿಯ ಹೊಗೆ ಕುಡಿದಂತೆ

 ತಿಗುಣಿಯ ಮಂಚದಂತೆ

 ಮಳಲೊಳಗೆ ಎಣ್ಣೆ ಹೊಯಿದಂತೆ

 ಈ ರೀತಿಯಾಗಿ ಬದುಕಿನ ನಾನಾ ಕ್ಷೇತ್ರಗಳಿಗೆ ಸಂಬಂಧಿಸಿದ ಇಂತಹ ಜೀವಂತ ಹಾಗೂ ಜ್ವಲಂತ ಉಪಮೆಗಳು ಸರ್ವಜ್ಞನ ಅನುಭವದ ಕಾವು-ಕಸುವು ಕರಹುಗಳಿಗೆ ಕನ್ನಡಿ ಹಿಡಿಯುತ್ತವೆ. ಅದೇ ರೀತಿ ಪರಂಪರೆಯ ಜಾಡು,ಶಿಷ್ಟತೆಯ ಸೊಗಡು ಒಗೊಂಡಂತಹ ಕೆಲವು ಉಪಮೆಗಳು ಇಣುಕಿ ಹಾಕಿವೆ.

 ನಿದರ್ಶನಕ್ಕೆ, ವಜ್ರದಿಂ ಗಿರಿಯ ಹೊಯಿದಂತೆ

          ಭಾನು ಮೋಡದಲ್ಲಿ ಹೊಯಿದಂತೆ

          ಹುಣ್ಣಿಮೆಯು ಹೋದ ಶಶಿಯಂತೆ   ಈತನ ವಚನಗಳಲ್ಲಿಯ  ಉಪಮೆಗಳು ಹಳ್ಳಿಗಾಡಿನ ಬದುಕಿನ ಗಟ್ಟಿ ಮುಟ್ಟಾದ ಅನುಭವ ತನ್ನೆಲ್ಲಾ ಗಡುಸುತನದಿಂದ ಕೆನೆಗಟ್ಟಿ ನಿಂತಿದೆ. ವಿರಳವಾಗಿ ಕೆಲವು ರೂಪಕಗಳನ್ನು ಗುರುತಿಸ ಬಹುದಾಗಿದೆ. ಅದರಲ್ಲೂ ಈತನು ಸೃಷ್ಟಿಸಿರುವ ಅನ್ನದೇವರು, ತುತ್ತೆಂಬ ಶಿವ ರೂಪಕಗಳು ಅದ್ಭುತವಾಗಿವೆ.

 ಉಪ್ಪು ಕಾಮನ ಬಿಲ್ಲು| ತುಪ್ಪವಯ್ದಲರಂಬು

 ಬಪ್ಪ ಭೋಗಗಳು ರತಿಯಾಗಿ, ಕೂಳು ಕಂದರ್ಪ

 ಕಾಣಯ್ಯ ಸರ್ವಜ್ಞ ಎಂಬಲ್ಲಿಯ ಉಪ್ಪೇ ಬಿಲ್ಲು.ತುಪ್ಪವೇ ಹೂಬಾಣ,ಭೋಗಗಳೇ ರತಿ,ಕೂಳೆ ಕಂದರ್ಪ ವೆಂಬ ರೂಪಕ ಸೃಷ್ಟಿ ಪೂರ್ವದ ಸಾಹಿತ್ಯ ಪರಂಪರೆಯಿಂದ ನಿರ್ಮಿತವಾದುದಾಗಿದೆ.

        ‘ಧ್ಯಾನದಹೊಸ ಬತ್ತಿ ಮೌನದ ತಿಳಿದುಪ್ಪ ಸ್ವಾನುಭವವೆಂಬ ಬೆಳಗಿನ ಜ್ಯೋತಿಯ ಜ್ಞಾನವಂ ಸುಡುಗು ಸರ್ವಜ್ಞ’ಎಂಬ ವಚನದಲ್ಲಿ ಸುಂದರವಾದ ರೂಪಕವಿದೆ. ದೃಷ್ಟಾಂತಗಳು ಸರ್ವಜ್ಞನ ಉಸರಿದಂತೆ,ಅವು ಸಹಜವಿರುವಂತೆ ರಮ್ಯವೂ ಆಗಿವೆ. ‘ಕತ್ತೆ ಬೂದಿಲಿ ಹೊರಳಿ ಮತ್ತೆ ಯತಿಯಪ್ಪುದೆ?’ ಸೊಡೆರೆಣ್ಣೆ ತೀರಿದರೆ ಕೊಡನತ್ತಿ ಹೊಯ್ಯುವರೆ, ಉಣ್ಣೆ ಕೆಚ್ಚಲೊಳಿರ್ದು ಉಣ್ಣದದು ನೊರೆ ಹಾಲು ಬಡಿಗೆಯಲಿ ಹುತ್ತ ಹೊಡೆಯಲಡಗಿಹ ಸರ್ಪ ಮಡಿಯುವುದೆ ? ಮೊದಲಾದ ಅಸಂಖ್ಯ ದೃಷ್ಟಾಂತಗಳು ಸರ್ವಜ್ಞನ ತ್ರಿಪದಿಯ ಸೊಗಸನ್ನು ಹೆಚ್ಚಿಸಿವೆ. ಅವನು ದೇಸಿಯ ಸೌಂದರ್ಯ ಸತ್ವಗಳನ್ನು ಅರಿತವನು. ಅವನ ಅನೇಕ ಮಾತುಗಳು ಜನತೆಯ ನಾಲಿಗೆಯ ಮೇಲೆ ನಲಿದು ಗಾದೆಯ ಮಾತುಗಳಾಗಿ ಹೋಗಿವೆ.

 ಸರ್ವಜ್ಞ ಮತ್ತು ದೇಸಿ:

       ಸರ್ವಜ್ಞನು ಖಂಡಿತವಾದಿಯಾದುದರಿಂದ ಸುಸಂಸ್ಕೃತರೆನ್ನುವವರು ಮೆಚ್ಚದ ಗ್ರಾಮ್ಯವನ್ನು ಅವನು ಬಳಸುತ್ತಾನೆ. ಅಂಥಲ್ಲಿ ದೇಸಿಯ ಸೊಬಗಿನೊಡನೆ ಗ್ರಾಮ್ಯದ ಒರಟುತನವನ್ನೂ ಕಾಣುತ್ತೇವೆ. ಸ್ವರ್ಗವನ್ನು ರಂಡೆಯಾಳುವಳೆ? ಕೈಲಾಸ ರಂಡೆಯ ಹೊರಸೆ ? ಎಂಬಂತಹ ಮಾತುಗಳಲ್ಲಿ ಗ್ರಾಮ್ಯವು ಕಂಡು ಬರುತ್ತದೆ. ಆದರೆ ಸರ್ವಜ್ಞನಿಗೆ ಭಾಷೆ ಮುಖ್ಯವಲ್ಲ; ಭಾವ ಅಥವಾ ಅಭಿಪ್ರಾಯ ಮುಖ್ಯ.ಅದು ಪರಿಣಾಮಕಾರಿಯಾಗಲು ಎಂತಹ ಭಾಷೆಯು ಅವನ ದೃಷ್ಟಿಯಲ್ಲಿ ಯೋಗ್ಯವೇ. ಅಲ್ಲದೆ ಸರ್ವಜ್ಞನು ವಿಪ್ಲವ ಮೂರ್ತಿ, ಸಿಡಿಲುಣಿ, ಅವನೊಂದು ಜ್ವಾಲಾಮುಖಿ ಆ ಮುಖದಿಂದ ಹೊರಬೀಳುವುದೆಲ್ಲ ವಚನಗಳಲ್ಲ, ರಚನೆಗಳು ವಿದ್ಯುತ್ಕಣಗಳು ಎಂಬ ವಿದ್ವಾಂಸರ ಮಾತುಗಳು ಮನನೀಯವಾಗಿವೆ.

      ಸರ್ವಜ್ಞನದು ತ್ರಿಪದಿ ಕಾವ್ಯವೇ, ಸರ್ವಜ್ಞನು ಕವಿಯೇ ಎಂಬ ಪ್ರಶ್ನೆಯು ಸಾಹಿತ್ಯ ವಲಯದಲ್ಲಿ ಅಲ್ಲಲ್ಲಿ ಕೇಳಿಬಂದರೂ ಅದು ಅಸಹಜ ಎಂದೆನಿಸುತ್ತದೆ. ಉತ್ತಂಗಿಯವರು ಸರ್ವಜ್ಞನ ಪದಗಳಲ್ಲಿ ಜೀವನವನ್ನೂ ಭಾವನಿರ್ಭರತೆಯನ್ನೂ ವಕ್ರೋಕ್ತಿ ಪ್ರಕಾರವನ್ನು ಕಂಡವರು, ಇವುಗಳಿಗೆ ಕಾವ್ಯ ಸ್ವರೂಪವಿದೆಯೆಂದೇ ಭಾವಿಸುವರಲ್ಲದೆ ನೀತಿಯ ರಗಳೆಯೆಂದು ಎಂದಿಗೂ ತಿಳಿಯರು ಎಂದಿದ್ದಾರೆ. ಜಿ.ಎಸ್ ಶಿವರುದ್ರಪ್ಪನವರು ಸರ್ವಜ್ಞನ ವಚನಗಳು ಬಹುಮಟ್ಟಿಗೆ ಮಿತ್ರ ಸಮ್ಮಿತ ಎಂಬ ವರ್ಗಕ್ಕೆ ಸೇರುತ್ತದೆ. ಹಿತೈಷಿಯಾದ ಗೆಳೆಯನೊಬ್ಬನು ಈ ಲೋಕದಲ್ಲಿ ನಡೆದುಕೊಳ್ಳಬೇಕಾವ ನಿರ್ದೇಶನವನ್ನು ನಯವಾಗಿ, ಆದರೆ ಕೆಲವು ಸಲ ಕಟುವಾಗಿ ಹೇಳಿದ ಹಾಗಿದೆ. ಈ ಸರ್ವಜ್ಞನ ಧಾಟಿ. ಸರ್ವಜ್ಞನ ಕಾವ್ಯ ನಿಜವಾದ ಅರ್ಥದಲ್ಲಿ ವ್ಯವಹಾರ ಕಾವ್ಯ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಸರ್ವಜ್ಞಾನಿಗೆ ಶ್ರೇಷ್ಠ ಕಾವ್ಯ ರಚನೆಯ ಬಗ್ಗೆ ಇರುವ ಕಳಿಕಳಿಗಿಂತ, ಸುತ್ತಲಿನ ಜನಜೀವನವನವನ್ನು ತಿದ್ದುವ ಉದ್ದೇಶವೇ ಪ್ರಧಾನವಾದುದ್ದರಿಂದ ಅನೇಕ ಸಲ ತಿದ್ದುವ ಉದ್ದೇಶವೇ ಪ್ರಧಾನವಾದುದ್ದದರಿಂದ, ಅನೇಕ ಸಲ ನೀತಿಯು ಪ್ರಧಾನವಾಗಿಬಿಟ್ಟು ಕಾವ್ಯಾಂಶವು ಹಿಂದುಳಿಯುತ್ತದೆ. ಅಂತೆಯೇ ಎ.ಆರ್. ಕೃಷ್ಣಶಾಸ್ತ್ರಿಗಳು, ಸರ್ವಜ್ಞನ ಕಾವ್ಯ ಒಟ್ಟಿನ ಮೇಲೆ ನೀತಿ ಕಾವ್ಯ. ರಸಿಕತೆಯೇ ಕವಿಯ ಜೀವ. ಅದು ಸರ್ವಜ್ಞನಲ್ಲಿ ಬೇಕಾದಷ್ಟಿದೆ. ಆದ್ದರಿಂದ ಅವನ ನೀತಿ ಕಾವ್ಯವು ಕಾವ್ಯವಾಗಿದೆ, ಉತ್ತಮ ಕಾವ್ಯವಾಗಿದೆ. ಎಂದು ತೀರ್ಮಾನಿಸಿದ್ದಾರೆ. ಜನಪದ ಸಾಹಿತ್ಯದ ತ್ರಿಪದಿಗಳಲ್ಲಿ ಕಂಡುಬರುವ ಕಾವ್ಯ ಸೌಂದರ್ಯವು ಸರ್ವಜ್ಞನ ಅನೇಕ ತ್ರಿಪದಿಗಳಲ್ಲಿ ಕಂಡು ಬರುವುದಿಲ್ಲ. ಅದರಂತೆ, ವಚನಕಾರರ ಅದರಲ್ಲೂ ಪ್ರಮುಖ ವಚನಕಾರರ ವಚನಗಳಲ್ಲಿರುವ ಕಾವ್ಯ ಗುಣ ಸರ್ವಜ್ಞನಲ್ಲಿಲ್ಲ ಎಂಬುದನ್ನು ಜಿ.ಎಸ್ ಶಿವರುದ್ರಪ್ಪನವರು ಎತ್ತಿ ತೋರಿಸಿದ್ದಾರೆ. ಒಮ್ಮೊಮ್ಮೆ ಸರ್ವಜ್ಞನು ಕೇವಲ ಪ್ರಾಸಕ್ಕೆ ಕಟ್ಟುಬಿದ್ದು, ಮಾತನ್ನು ಜೋಡಿಸಿ, ನೀರಸವಾದ ಪದ್ಯವನ್ನು ಹೊಸೆಯುತ್ತಾನೆ ಎಂದೆನಿಸುತ್ತದೆ.

      ಭಕ್ತಿಯಿಂದಲೆ ಯುಕ್ತಿ ಭಕ್ತಿಯಿಂದಲೆ ಶಕ್ತಿ

      ಭಕ್ತಿ ವಿರಕ್ತಿಯಳಿವರೀ ಜಗದಲ್ಲಿ

      ಮುಕ್ತಿಯಿಲ್ಲೆಂದ ಸರ್ವಜ್ಞ             

   ಆದರೆ ಇಂಥ ವಚನಗಳು ಕಣ್ಣಲ್ಲಿ ಕಣ್ಣಿಟ್ಟು ನೋಡಿ ಆಯ್ದುಕೊಳ್ಳುವಷ್ಟು ಅತಿ ವಿರಳವಾಗಿವೆ.

   ಬಹಳಷ್ಟು ತ್ರಿಪದಿಗಳು ಸಾಮಾಜಿ ಕಳಕಳಿಗೆ ನಿದರ್ಶನಗಳಾಗಿವೆ. ಸಮಾಜ ಜೀವನವನ್ನು ಸರ್ವಜ್ಞನು ಸೂಕ್ಷ್ಮವಾಗಿ ನಿರೀಕ್ಷಿಸಿ ಅದರ ವಿಮರ್ಶೆ ಮಾಡಿದುದಲ್ಲದೆ ತನ್ನ ತ್ರಿಪದಿಗಳಲ್ಲಿ ಸಮಾಜ ಬೋಧೆಯನ್ನು ನೀಡಿದ್ದಾನೆ. ಜೀವನ ಮೌಲ್ಯಗಳನ್ನು ಅವನು ತನ್ನ ಕೆಲವು ವಚನಗಳಲ್ಲಿ ವಿವರಿಸಿದ್ದಾನೆ. ಬಸವಣ್ಣನವರಿಗೆ `ಕಾಯಕವೇ ಕೈಲಾಸ’ವಾಗಿ ಕಂಡಂತೆ ಸರ್ವಜ್ಞನಿಗೆ ದುಡಿಮೆಯು ವ್ಯಕ್ತಿಯ ಹಾಗೂ ಸಮಾಜದ ಏಳಿಗೆಗೆ ಅವಶ್ಯಕವಾಗಿ ಕಂಡುಬಂದಿತು. ಅಂತೆಯೇ ಅವನು ಹೇಳಿದ್ದಾನೆ.

        ಕೇವಲ ಯಾಂತ್ರಿಕವಾಗಿ ದೇವಸ್ಥಾನಕ್ಕೆ ಹೋಗಿ, ವಿವೇಕವಿಲ್ಲದೆ ಮೂರ್ತಿ ಪೂಜೆ ಮಾಡಿ ಅಷ್ಟರಿಂದಲೇ  ಧನ್ಯರಾದೆವೆಂದು ಭಾವಿಸುವ ಜನರನ್ನು ಕುರಿತು ಸರ್ವಜ್ಞ ಹೀಗೆ ನುಡಿದಿದ್ದಾನೆ;

       ಕಲ್ಲುಗುಂಡಿನ ಮೇಲೆ ಮಲ್ಲಿಗೆಯ ಅರಳಿಕ್ಕಿ

       ನಿಲ್ಲದೆ ಹಣೆಯ ಬಡಿವರ್ಗೆ ಬುಗುಟಿಲ್ಲ

       ದಿಲ್ಲ ಕಾಣಯ್ಯ ಸರ್ವಜ್ಞ               

  ಅಂತರಂಗದಲ್ಲಿ ಭಕ್ತಿಯಿಲ್ಲದೆ ಕೇವಲ ಪ್ರದರ್ಶನಕ್ಕಾಗಿ ಆಡಂಬರದ ಪೂಜೆ ಮಾಡುವವರನ್ನು ಕಂಡು ಅವನು  ಟೀಕಿಸಿದ್ದಾನೆ.

        ಒಸೆದೆಂಟುದಿಕ್ಕಿನಲ್ಲಿ ಮಿಸುನಿ ಗಿಣ್ಣುಲುಗಿಂಡಿ

        ಹುಸಿದು ಮಾಡುವವನ ಪೂಜೆಯದ ಬೋಗಾರ

        ಪಸರವಿಟ್ಟಂತೆ ಸರ್ವಜ್ಞ.

     ಬಸವಣ್ಣನವರು `ಉಂಬ ಜಂಗಮ ಬಂದರೆ ನಡೆ ಎಂಬರು: ಉಣ್ಣದ ಲಿಂಗಕ್ಕೆ ಬೋನವ ಹಿಡಿ ಎಂಬರಯ್ಯ’ ಎಂದು ಸಾರಿದಂತೆ ಸರ್ವಜ್ಞನೂ ಹೇಳಿದ್ದಾನೆ.

  ಉಣಬಂದ ಜಂಗಮಕೆ ಉಣಬಡಿಸ ಲೊಲ್ಲದೇ

  ಉಣದಿಪ್ಪ ಲಿಂಗಕುಣಬಡಿಸಿ ಕೈ ಮುಗಿವ

  ಬಣಗುಗಳ ನೋಡ ಸರ್ವಜ್ಞ.

 ಚಿತ್ತೈಕಾಗ್ರತೆಯೂ ಚಿತ್ತಶುದ್ಧಿಯೂ ಇಲ್ಲದ ನಿರರ್ಥಕವಾದ ಬಾಹ್ಯಾಚಾರಗಳಿಂದ ಎಳ್ಳಷ್ಟು ಪ್ರಯೋಜನವಿಲ್ಲ.

     ಚಿತ್ತ ವಿಲ್ಲದೆ ಗುಡಿಯ ಸುತ್ತಿದಡೆ ಫಲವೇನು

     ಎತ್ತು ಗಾಣವನು ಹೊತ್ತುತ್ತಾ ನಿತ್ಯದಿ

     ಸುತ್ತಿ ಬಂದಂತೆ ಸರ್ವಜ್ಞ.

 ಅಂತಮುರ್ಖಿಯಾಗಿ ಮಾನಸ ಪೂಜೆ ಮಾಡುವವನು ಮನೆಯಲ್ಲಿಯೇ ಇದ್ದು ಮಠವಾಸಿಗಳಿಗಿಂತ ಹೆಚ್ಚಿನ ಫಲವನ್ನು ಪಡೆಯಬಹುದು. ಹಾಗಿಲ್ಲದವನು ದೇವಾಲಯದಲ್ಲಿದ್ದರೂ ಪ್ರಯೋಜನವೇನು?

  ಮನದಲ್ಲಿ ನೆನೆವಂಗೆ ಮನೆಯೇನು ಮಠವೇನು

  ಮನದಲ್ಲಿ ನೆನೆಯದಿರುವನು ದೇಗುಲದ

  ಕೊನೆಯಲಿದ್ದೇನು ಸರ್ವಜ್ಞ.

 ಸರ್ವಜ್ಞ ಮಾಡಿಕೊಂಡ ಪರಮಾತ್ಮನ ಕಲ್ಪನೆಯು ವಿಶಾಲವಾದುದೂ, ಮತಾತೀತವಾದದೂ ಆಗಿದೆ.

 ದೇಹ ದೇವಾಲಯವು ಜೀವವೇ ಶಿವಲಿಂಗ

 ಬಾಹ್ಯಂಗಳಳಿದು ಭಜಿಪಂಗೆ ಮುಕ್ತಿಸಂ

 ದೇಹವಿಲ್ಲೆಂದ ಸರ್ವಜ್ಞ.

  ಭಾರತೀಯ ಪರಂಪರೆಯಂತೆ ಆಧ್ಯಾತ್ಮ ಮಾರ್ಗದಲ್ಲಿ ಗುರುವಿನ ಅವಶ್ಯಕತೆ ಮತ್ತು ಮಹತ್ವವನ್ನು ಸರ್ವಜ್ಞ ಅರಿತಿದ್ದಾನೆ.

    ಗುರುವಿನ ವಿಸ್ತರದ ಪರಿಯನಾನೇನೆಂಬೆ

    ಮೆರೆವ ಬ್ರಹ್ಮಾಂಡದೊಳಹೊರಗವ ಬೆಳಗಿ

    ಪರಿಪೂರ್ಣನಿಪ್ಪ ಸರ್ವಜ್ಞ.

 ಇಂಥ ಸದ್ಗುರುವಿನ ಬೋಧೆಯಿಂದಲೇ ಶಿಷ್ಯನು ಉದ್ಧಾರ ಹೊಂದುವುದು

  ಮತ್ತೆ ಸದ್ಗುರು ಮುಖದಿ ತತ್ವಮಸಿಯನೆ ತಿಳಿದು

  ಸತ್ಯನಿಂತೆಂದು  ಅರಿದಿಪ್ಪ ಜ್ಞಾನಿ ತಾ

  ಸತ್ತು ಹುಟ್ಟುವನೆ? ಸರ್ವಜ್ಞ.

  ಉದ್ಯೋಗವುಳ್ಳವನ ಹೊದ್ದುವದು ಸಿರಿಬಂದು

  ಉದ್ಯೋಗವಿಲ್ಲದಿರುವನಾ ಕರದೊಳ

  ಗಿದ್ದುದೂ ಪೋಕು ಸರ್ವಜ್ಞ.

ಇಂಥ ಉದ್ಯೋಗಶೀಲನ ಮನೆಯಲ್ಲಿ ನೆಮ್ಮದಿ ತಾನಾಗಿಯೇ ನೆಲೆಸುವದು ಆಗ:

    ಬೆಚ್ಚನಾ ಮನೆಯಾಗಿ ವೆಚ್ಚಕ್ಕೆ ಹೊನ್ನಾಗಿ

    ಇಚ್ಚೆಯನರಿವ ಸತಿಯಾಗಿ ಸ್ವರ್ಗಕೆ

    ಕಿಚ್ಚು ಹಚ್ಚೆಂದ ಸರ್ವಜ್ಞ.

  ಸುಖಸಂಸಾರದ ಚಕ್ರವನ್ನು ಅವನು ಕೆಲವು ತ್ರಿಪದಿಗಳಲ್ಲಿ ಇಟ್ಟಿದ್ದಾನೆ.

ಎತ್ತುಗಳು ಎರಡಾಗಿ ಬತ್ತದಿಹ ಹಯಿನಾಗಿ

ಮಿತ್ರರಯ್ದಾಗಿ ಸತಿ-ಯೊಬ್ಬಳಾದರೆ

ನಿತ್ಯದಲಿ ಸುಖವು ಸರ್ವಜ್ಞ.

ತದ್ವಿರುದ್ಧವಾಗಿ ವಿರಸ-ಸಂಸಾರದ ಚಿತ್ರವನ್ನೂ ಅವನು ಕೊಡದೆ ಇಲ್ಲ.

 ಬಂಡು ಹೆಂಡತಿಯಾಗಿ ತುಂಡೊಬ್ಬ ಸೊಸೆಯಾಗಿ

 ಕಂಡಲ್ಲಿ ಹರಿವ ಮಗನಾದರೂ ಮನೆಗೆ

 ದಂಡ ತಪ್ಪುವದೆ ಸರ್ವಜ್ಞ.

 ಕೌಟುಂಬಿಕ ಜೀವನದಲ್ಲಿ ಶಾಂತಿ ಸಮಾಧಾನಗಳನ್ನು ನೆಲೆ ಗೊಳಿಸುವವಳು ಸ್ತ್ರೀಯಲ್ಲದೆ ಮತ್ತಾರಲ್ಲ. ಸರ್ವಜ್ಞನ ದೃಷ್ಟಿಯಲ್ಲಿ ಸ್ತ್ರೀಯ ಮಹಿಮೆ ವಿಶೇಷವಾಗಿದೆ.

ಹೆಣ್ಣಿನಿಂದಲಿ ಇಹವು ಹೆಣ್ಣಿನಿಂದಲಿ ಪರವು

ಹೆಣ್ಣಿಂದ ಸಕಲ ಸಂಪದವು ಹೆಣ್ಣೊಲ್ಲ

ದಣ್ಣಗಳು ಎಲ್ಲಿ ಸರ್ವಜ್ಞ

ಸ್ತ್ರೀಯ ವ್ಯಕ್ತಿತ್ವದ ಸ್ಫುಟವಾದ ಎರಡು ಮುಖಗಳನ್ನು ಅವನು ಚಿತ್ರಿಸಿದ್ದಾನೆ.

ನಾರಿ ಪರರುಪಕಾರಿ ನಾರಿ ಸ್ವರ್ಗಕೆ ದಾರಿ

ನಾರಿ ಸಕಲರಿಗೆ ಹಿತಕಾರಿ ಮುನಿದರೆ

ನಾರಿಯೇ ಮಾರಿ ಸರ್ವಜ್ಞ.

 ಕೇವಲ ಗೃಹಿಣಿಯರನ್ನಲ್ಲದೆ, ಜಾರಸ್ತ್ರೀಯರನ್ನು ಮತ್ತು ವೇಶ್ಯೆಯರನ್ನು ಹಾಗೂ ಅವರ ಪ್ರಭಾವ ನಡೆ-ನುಡಿಗಳ ರೀತಿ ನೀತಿಗಳನ್ನು ಸೂಕ್ಷ್ಮವಾಗಿ ನಿರೀಕ್ಷಿಸಿ ಅವುಗಳನ್ನು  ತನ್ನ ವಚನಗಳಲ್ಲಿ ಚಿತ್ರಿಸಿದ್ದಾನೆ.

ಮಾನವನ ಗುಣಶೀಲಗಳು ನಿರ್ಧಾರವಾಗುವುದು ಅವನ ನಡೆನುಡಿಗಳಿಂದ ಅವನ ಉಳಿವು-ಅಳಿವುಗಳೂ ಅವುಗಳಿಂದಲೇ. ಅದನ್ನು ಈ ರೀತಿಯಾಗಿ ಪ್ರತಿಪಾದಿಸಿದ್ದಾನೆ.

ಕಣ್ಣುನಾಲಿಗೆ ಮನವು ತನ್ನದೆಂದೆನಬೇಡ

ಅನ್ಯರು ಕೊಂದರೆನಬೇಡ ಇವು ಮೂರು

ತನ್ನ ಕೊಲ್ಲುವವು ಸರ್ವಜ್ಞ. ಮನುಷ್ಯನ ಚಾರಿತ್ರ್ಯದಲ್ಲಿ ಸತ್ಯಕ್ಕೆ ತುಂಬಾ ಮಹತ್ವವನ್ನು ಕೊಟ್ಟಿದ್ದಾನೆ. ಸರ್ವಜ್ಞ `ಕಂಡುದನು ಆಡಿದರೆ ಭೂ ಮಂಡಲವು ಮುನಿಯುವದು’ ದಿಟವಾದರೂ ಸತ್ಯವಂತರೆಂಬುದು ಗೊತ್ತಾದರೆ ಕೊನೆಗೆ

ಸತ್ಯರಿಗೆ ಧರೆಯಲ್ಲ ಮಸ್ತಕದಿ ಎರಗುವದು

ಹೆತ್ತ ತಾಯ್ಮಗನ ಕರೆವಂತೆ ಶಿವನವರ

ನೆತ್ತಿಕೊಂಬುವನು ಸರ್ವಜ್ಞ.   

ಧಾರಾಳ ಹಣವಿದ್ದರೂ ಅದನ್ನು ವೆಚ್ಚ ಮಾಡಲು ಹಿಂಜರಿಯುವ ಲೋಭಿಗಳನ್ನು ಕುರಿತು ಸರ್ವಜ್ಞನು ಕಟುವಾಗಿ ಟೀಕಿಸಿದ್ದಾನೆ.

ಉಣ್ಣದೊಡವೆಯ ಗಳಿಸಿ ಮಣ್ಣಿನೊಲು ತಾನಿರಿಸಿ

ಸಣ್ಣಿಸಿಯೆ ನೆಲದ ಸಾರಿದನ ಬಾಯೊಳಗೆ

ಮಣ್ಣು ಕಾಣಯ್ಯ ಸರ್ವಜ್ಞ.

ದಾನದ ಹಿರಿಮೆಯನ್ನು ಸರ್ವಜ್ಞ ಕವಿ ತುಂಬಾ ವಿಸ್ತಾರವಾಗಿ ಬಣ್ಣಿಸಿದ್ದಾನೆ. ದಾನ ಮಾಡುವದು ಧಾರ್ಮಿಕನ ಕರ್ತವ್ಯಗಳಲ್ಲಿ ಒಂದು ಎಂಬುದು ಆಗಿನ ಸಮಾಜದಲ್ಲಿ ರೂಢವಾಗಿದ್ದರೂ, ದಾನ ಮಾಡಲು ಜನ ಹೇಗೆ ಹಿಂಜರಿಯುತ್ತಾರೆ ಎಂಬುದನ್ನು ಅವನು ತುಂಬಾ ಮಾರ್ಮಿಕವಾಗಿ ಚಿತ್ರಿಸಿದ್ದಾನೆ.

ದಾನವೆಂದರೆ ತಲೆಯ ಚಾನದಲಿ ಕಡಿದಂತೆ

ತಾನೊಂದು ತಪ್ಪಮಾಡಿ ನೂರಾರನು

ಮೌನದಿಂ ಕೊಡುವ ಸರ್ವಜ್ಞ.

ಇನ್ನು ಕೆಲವರು ದಾನವನ್ನೇನೂ ಮಾಡುತ್ತಾರೆ. ಆದರೆ ಆಮೇಲೆ ಮರ ಮರ ಮರುಗುತ್ತಾರೆ. ಇಂಥವರನ್ನೂ ಸಂದರ್ಶಿಸಿದ ಸರ್ವಜ್ಞ ಹೇಳುತ್ತಾನೆ.

 ಕೊಟ್ಟು ಕುದಿಯಲು ಬೇಡ ಕೊಟ್ಟಾಡಿಕೊಳಬೇಡ

 ಕೊಟ್ಟು ನಾ ಕೆಟ್ಟೆ ನೆನೆಬೇಡ ಶಿವನಲ್ಲಿ

 ಕಟ್ಟಿಹುದು ಬುತ್ತಿ ಸರ್ವಜ್ಞ

 ದಾನವನ್ನು ಎಷ್ಟಾದರೂ ಕೊಡಲಿ ಕೊಟ್ಟದನ್ನು `ಆಡದೆ ಕೊಡುವವನು ರೂಢಿಯೊಳಗಗುತ್ತಮನು’ ಎಂದಿದ್ದಾನೆ. ದಾನಗಳಲ್ಲೆಲ್ಲ ಅನ್ನದಾನವೇ ಶ್ರೇಷ್ಠ

 ಅನ್ನ ದೇವರ ಮುಂದೆ ಇನ್ನು ದೇವರ ಉಂಟೆ?

  ಅನ್ನವಿರುವತನಕ ಪ್ರಾಣವು ಜಗದೊಲ

 ಗನ್ನವೇ ದೈವ ಸರ್ವಜ್ಞ.

 ಸರ್ವಜ್ಞ ಮತ್ತು ಕನ್ನಡ ಭಾಷೆ:

  ಸಾಹಿತಿಯಾದವನು ಸಾರ್ವತ್ರಿಕ ಆಸ್ತಿಯೆನಿಸಿದ ಸಾಮಾನ್ಯ ಭಾಷೆಯ ನುಡಿ-ನುಡಿಗಟ್ಟುಗಳನ್ನೇ ಆತ ತನ್ನ ಸಂಪನ್ಮೂಲವಾಗಿ ಸ್ವೀಕರಿಸಿದರೂ ಅದರಲ್ಲಿ ತನ್ನ ಅಭಿಜಾತ ಪ್ರತಿಭೆಯ ಪ್ರಭಾವ ಮುದ್ರೆಯನ್ನೊತ್ತಿ ತನ್ನ ಅಭಿವ್ಯಕ್ತಿಗೆ ಒಂದು ಒಪ್ಪ-ಓರಣ,ಶಕ್ತಿ-ಸಾರವನ್ನು ತಂದುಕೊಳ್ಳುತ್ತಾನೆ. ಈ ದೃಷ್ಟಿಯಿಂದ ಸರ್ವಜ್ಞನ ಭಾಷೆಯ ಬಳಕೆಯಲ್ಲಿ ಓತಪ್ರೋತವಾಗಿರುವ ಬೆಡಗು ಪರಿಶೀಲನಾರ್ಹವಾಗಿದೆ. ಈತನ ತ್ರಿಪದಿಗಳಲ್ಲಿ ತನ್ನ ಅಭಿಜಾತ ಪ್ರತಿಭೆಗೆ ಜ್ವಲಂತ ನಿದರ್ಶನಗಳಾದ ಅನೇಕ ಅರ್ಥೋಜ್ವಲ ನವೀನ ನುಡಿಗಟ್ಟುಗಳನ್ನು ಸರ್ವಜ್ಞ ಸೃಷ್ಟಿಸಿದ್ದಾನೆ.

ಹೊಟ್ಟೆದೇವ ( ಹೊಟ್ಟೆಗಾಗಿಯೇ ಬದುಕುವವ, ಕೂಳಿಗೆ ಆಳಾದವ ವ.78)

ಕವುದಿಯನು ಹೊದ್ದಾತ ( ಭಿಕ್ಷುಕ ವ.927)

 ಬಿದ್ದ ನಡು (ಅಲಸ್ಯ),

ಊರನರಿ (ಕುತಂತ್ರಿ, ಸ್ವಾರ್ಥಿ)

ಮೋಚಿದ ಹೆಣ್ಣು ( ವಿಧವೆ )

ಮುರವಾಳ ( ಮುರಿದ ಬಾಳುವೆಯವ, ವಿದುರ )

ಅಟ್ಟಿಕ್ಕುವಾಕೆ ( ಪತ್ನಿ)

ಸೋರುಗಣ್ಣಾಕೆ (ಸ್ವಲ್ಪ ಮಾತಿಗೆ ಅಳುವಾಕೆ )

ಬಣ್ಣವನು ಬರೆವ ಸತಿ ( ನಟನೆ ಮಾಡುವಾಕೆ)

ಸಜ್ಜನೆ ( ಪಾತಿವ್ರತ್ಯ)

ಬಿದ್ದು ಬರುವವ (ಫಟಿಂಗ)

ಹೇನನ್ನು ತಿಂಬ ಹೀನ ( ಜೀನ ಕೃಪಣ )

ಗಾಳಿದೂಳಿಯ ದಿನ ( ಬೇಸಿಗೆ ಕಾಲ )

ಅಂಬರದ ಕಲಹ (ಗುಡುಗು ಸಿಡಿಲು )

ತೊಪ್ಪಲ ನೀರು ( ಮಂಜಿನ ಹನಿ )

ಈ ಪದಪುಂಜಗಳಲ್ಲಿ ಒಂದೊಂದು ವಿಧವಾದ  ಭಾವದ ಒಗರು ಅಥವಾ ಬಣ್ಣದ ಒಗರು ತಾನೆತಾನಾಗಿ ವಿಜೃಂಭಿಸಿ ಅಭಿವ್ಯಕ್ತಿಗೆ ಅಪರೂಪದ ಶಕ್ತಿ-ಕಾಂತಿಯನ್ನು ಒದಗಿಸಿದೆ.

 ಸರ್ವಜ್ಞನ ಬಳಕೆಯ ಕನ್ನಡದ ಬನಿಯೂ ಗಮನಾರ್ಹವಾಗಿದೆ.ಕನ್ನಡಿಗರಲ್ಲಿ ಮನೆಮಾಡಿರುವ ಅನೇಕ ಹಿತನುಡಿ ಅಥವಾ ಪಡೆನುಡಿಗಳು ಈತನಲ್ಲಿ ಸದ್ದಿಲ್ಲದೆ ಕಾವ್ಯದ ಪಟ್ಟಕ್ಕೇರಿವೆ. ನಿದರ್ಶನಕ್ಕೆ, ಕುಟ್ಟಿ ಹೇಳು (ಒತ್ತಿ ಹೇಳು),ಗಿಳಿಯೋದು, ಹಿತ್ತಲದ ಗಿಡ, ಕೊಳ್ಳಗಾಣು ( ಹಾಳಾಗಿ ಹೋಗು) ಕರಿಗೈ ಮತ್ತು ಕರಿಬಾಯಿ ( ಕೆಟ್ಟಕೆಲಸ ಮಾಡುವಿಕೆ ಮತ್ತು ಕೆಟ್ಟ ಮಾತಾಡುವಿಕೆ.) ಹಂಚು ಹರಿಯಾಗು (ಹಾಳಾಗು), ಆಡ ಕಾಯು ( ದನಕಾಯು,ಬುದ್ದಿಗೇಡಿ) ಇಂತಹ ನಾಡಿನ ನಾಲಗೆಯ ಮೇಲೆ ನಲಿಯುವ ನೂರಾರು ನುಡಿಗಳು ಈತನಲ್ಲಿ ತುಂಬಿ ತುಳುಕಿವೆ. ಸರ್ವಜ್ಞನ ಭಾಷೆಯ ಬಳಕೆ ಸತ್ವಯುತವೂ ಸೋಪಜ್ಞತೆಯಿಂದ ಸಮನ್ವಿತವೂ ಆಗಿದ್ದೂ ಅಭಿವ್ಯಕ್ತಿಯನ್ನು ಸಾರಭೂತ ಗೊಳಿಸಲು,ಸಫಲಗೊಳಿಸಲು ಸಹಕಾರಿಯಾಗಿದೆ.

 ಸರ್ವಜ್ಞನು ದಿನನಿತ್ಯದ  ಬದುಕಿನ ವಿವಿಧ ಕ್ಷೇತ್ರಗಳಿಂದ  ವೈವಿಧ್ಯಪೂರ್ಣವಾದ ದೃಷ್ಟಾಂತಗಳನ್ನು ಹೆಕ್ಕಿ ತರುವುದರ ಮೂಲಕ ತನ್ನ ಅನುಭವದ ಸಮೃದ್ಧಿಚಿಂತನೆಯನ್ನು ಸಾಬೀತು ಪಡಿಸಿದ್ದಾನೆ.

 ನಿದರ್ಶನಕ್ಕೆ,

 ಜಾತಿ ಹೀನರ ಮನೆಯ ಜ್ಯೋತಿ ತಾ ಹೀನವೇ

 ಯಾತರದ ಹೂವೇನು ನಾತರೇನು ಸಾಲದೇ 

 ಬೆಣ್ಣೆ, ಬೆಂಕಿಯ ನಡುವೆ ತಣ್ಣಗಿರ ಬಹುದೇ

 ಕಲ್ಲಿನೊಳಗಣ ಕಪ್ಪೆಗೆಲ್ಲಿಹರು ತಾಯ್ತಂದೆ

 ಒಂದೊಂದು ಹನಿ ಬಿದ್ದು ನಿಂದಲ್ಲಿ ಮಡುವಕ್ಕು

 ಗುರಿಯ ತಾಗದ ಬಾಣ ನೂರಾರನೆಸೆದೇನು

 ಅದೇ ರೀತಿ ಕೆಲವೆಡೆ ಒಂದೊಂದು ಪದ್ಯದಲ್ಲಿ ನಿರೂಪಿಸಿರುವ ಒಂದೊಂದು ದೃಷ್ಟಾಂತವೂ   ಸಶಕ್ತವಾಗಿದೆ. ಉಪಮೆಗಳು ಮಾಲೆ ಮಾಲೆಗಳಾಗಿ ಬಂದಿವೆ.

 ಮುತ್ತು ನೀರೊಳು ಪುಟ್ಟಿ ಮತ್ತೆ ನೀರಪ್ಪುದೆ?

 ಸತ್ಯವನರಿದ ಜ್ಞಾನಿ ಸಂಸಾರವನು

 ಮತ್ತೆ ಒದ್ದುವನೇ? ಸರ್ವಜ್ಞ.

 ತಿಳಿಯ ಕಾಸಿದ ತುಪ್ಪ ವಳಿದು ಹಾಲಪ್ಪುದೆ?

 ಕಳೆಬೆಳಗನರಿದ ಶಿವಯೋಗಿ ಸಂಸಾರ

 ದೊಳಗೆ ಸಿಲುಕುವನೆ?ಸರ್ವಜ್ಞ

 ಗಗನಕ್ಕೆ ಹೊಗೆ ಹೋಗಿ| ಮಿಗೆ ಜಗಕೆ ಬಪ್ಪುದೇ?

 ಅಘಹರನ ಪದವ ಸವಿದವನು ಸಂಸಾರ

 ದಘವ ಹೊದ್ದುವನೇ ಸರ್ವಜ್ಞ.  ಇಂತಹ ತ್ರಿಪದಿಗಳಲ್ಲಿ ಹೋಲಿಕೆಗಳು ಕೇವಲ ಅಲಂಕಾರಕ್ಕಾಗಿ ಬಂದಿಲ್ಲ. ಆಶಯದ ಪ್ರಭಾವ ಪೂರ್ಣ ಆವಿಷ್ಕಾರಕ್ಕಾಗಿ ಅಭಿವ್ಯಕ್ತಿಯ ಅಭಿನ್ನ ಅಂಗವಾಗಿ ಬಂದಿವೆ.

   ಸರ್ವಜ್ಞನ ತ್ರಿಪದಿಗಳಲ್ಲಿ ನೀತಿ ಬೋಧೆಯ ಜೊತೆಗೆ ಒಂದಿಲ್ಲೊಂದು ಬಗೆಯ ಅರ್ಥ ಸ್ವಾರಸ್ಯವಿದ್ದೇ ಇರುತ್ತದೆ ಎಂಬುದನ್ನು ಮರೆಯುವಂತಿಲ್ಲ. ಸರ್ವಜ್ಞನ ಕೃತಿಗೆ ಬರಿಯ ನೀತಿ ಕಾವ್ಯ ಎನ್ನಲಾಗದು. ಅನುಭವ, ನೀತಿ,ತತ್ವ, ಭಕ್ತಿ ಎಲ್ಲವೂ ಇರುವ ಜೀವನ ಸತ್ಯದ ಕಾವ್ಯ ಎಂದರೆ ಹೆಚ್ಚು ಒಳಿತು ಎಂದು ರಂ. ಶ್ರೀ ಮುಗಳಿಯವರು ಮಾರ್ಮಿಕವಾಗಿ ನುಡಿದಿದ್ದಾರೆ. ತಮಿಳಿನ ತಿರುವಳ್ಳವರ್ ಮತ್ತು ತೆಲುಗಿನ ವೇಮನರೊಡನೆ ಕನ್ನಡದ ಸರ್ವಜ್ಞನನ್ನು ಹೋಲಿಸಲಾಗಿದೆ. ಸುತ್ತಣ ಜನದ ಆಡು ಮಾತಿಗೆ ಕಾವ್ಯಭಿವ್ಯಕ್ತಿಯ ತಿರುವು ಕೊಟ್ಟು, ವ್ಯಂಗ್ಯ, ಕಟಕಿ ವಿನೋದ, ಸಹಾನುಭೂತಿ ಇತ್ಯಾದಿ ವೈವಿಧ್ಯಗಳಲ್ಲಿ, ಜನದ ಬದುಕನ್ನು ತಿದ್ದುತ್ತ ನಿಜವಾದ ಅರ್ಥದಲ್ಲಿ ಜನತೆಯ ಕವಿಯಾದ ಸರ್ವಜ್ಞನು ಕನ್ನಡ ಸಾಹಿತ್ಯ ಪರಂಪರೆಯಲ್ಲಿ ತನ್ನ ವಿಶಿಷ್ಟ ವ್ಯಕ್ತಿತ್ವದಿಂದ ಕನ್ನಡ ಜನಮನದಲ್ಲಿ ಮನೆ ಮಾಡಿಕೊಂಡಿದ್ದಾನೆ.  ಐದು ಶತಮಾನಗಳಷ್ಟು ಹಿಂದಿನ ಸಾಮಾಜಿಕ ಸಂದರ್ಭದಲ್ಲಿ ಜ್ವಲಂತ ಪ್ರಜ್ಞೆಯಿಂದ ಸ್ಪಂದಿಸಿದ ಕವಿ ಸರ್ವಜ್ಞ ತನ್ನ ಸಮಾಜ ವಿಮರ್ಶೆ,ಜೀವನ ಜಿಜ್ಞಾಸೆ ಹಾಗೂ ಕಾವ್ಯದ ಧಾಟಿ-ಧೋರಣೆಗಳಿಂದಾಗಿ ಆಧುನಿಕ ಸಂದರ್ಭದಲ್ಲೂ ಪ್ರಸ್ತುತನಾಗಿದ್ದಾನೆ. ಆತ ತನ್ನ ತ್ರಿಪದಿಗಳಲ್ಲಿ ಎರಕ ಹೊಯ್ದ ಅನುಭವ ಒಗರು-ಹೊಗರುಗಳು ಸಾರ್ವಕಾಲೀನ ಸತ್ವವನ್ನು ಒಳಗೊಂಡವುಗಳಾಗಿವೆ. ಸರ್ವಜ್ಞನು ಕಾಲಮಾತ್ರದಿಂದ ಅಂದಿನವನಾಗಿದ್ದರೂ ಮನೋಧರ್ಮ ಯುಗಧರ್ಮಗಳ ದೃಷ್ಟಿಯಿಂದ ಇಂದಿಗೂ ಸಲ್ಲುವವನಾಗಿದ್ದಾನೆ. ಸಮಕಾಲೀನ ಸಾಮಾಜಿಕ ಸಂದರ್ಭ ಹಾಗೂ ಆಚಾರ ವಿಚಾರಗಳ ವಿಕೃತ-ವಿಘಾತಕ ನಿಲುಮೆಗಳ ವಿರುದ್ಧ ಬಂಡೇಳುವಿಕೆ ಮತ್ತು ಬದುಕನ್ನು ಬರಿಯ ರೋಮಾಂಚಕವೆಂದು ಭ್ರಮಿಸದೇ ಅದರ ಕಠೋರ ವಾಸ್ತವಿಕತೆಯನ್ನು ತೆರೆದ ಕಣ್ಣಿಂದ ನೋಡುವಿಕೆ ಇವುಗಳು ಆಧುನಿಕ ಮನೋಧರ್ಮದವುಗಳಾಗಿವೆ. ಇಂತಹ ಮನೋಧರ್ಮವೇ ಸರ್ವಜ್ಞನನದಾಗಿರುವುದರಿಂದ ಅವನ ಬೋಧೆಗಳು ಇಂದಿಗೂ ಪ್ರಸ್ತುತವಾಗಿವೆ. ಸರ್ವಜ್ಞನು ಸಂಕುಚಿತ ಪರಂಪರೆಯ ಜಾಡನ್ನು ಬಿಟ್ಟು ಹೊಸ  ಹಾದಿಯನ್ನು ತುಳಿದ ಹಿಂಡನಗಲಿದ ಗಜವಾಗಿ ಮೆರೆದು ಕ್ರಾಂತಿಕಾರಿ ಕವಿ ಎನಿಸಿಕೊಂಡಿದ್ದಾನೆ.  ಅನುಭವಿಯ ವೇದವೇ ವೇದದ ಸಾರವೆಂದು ಒಂದು ಸಂದರ್ಭದಲ್ಲಿ ಸಾರಿದ ಸರ್ವಜ್ಞನ ಸಾರೋಕ್ತಿ ಸಮಗ್ರ ಸಾಹಿತ್ಯದ ಮಾತ್ರವಲ್ಲ ಸರ್ವಜ್ಞ ಸಾಹಿತ್ಯದ ಜೀವಾಳವನ್ನೇ ತೋರಿಸುವಂತಹದ್ದಾಗಿದೆ. ತಾನು ಕಂಡುಂಡ ಅನುಭವ, ತನ್ನ ಹೃದಯ-ಮನದಲ್ಲೆದ್ದ ಭಾವನೆ, ಚಿಂತನೆಗಳಿಗೆಲ್ಲಾ ಆಕಾರ ನೀಡ ಬಲ್ಲ ಸರ್ವಜ್ಞನ ಸಾಹಿತ್ಯಕ ವಿಶೇಷತೆಯೇ ಇಂದಿಗೂ ಅವಶ್ಯಕವಾಗಿರುವುದು. ಈತ ಕುರುಡು ಸಾಂಪ್ರದಾಯಿಕತೆಗೆ ಶರಣಾಗದೇ ಭಾಷೆಯ ಬಳಕೆ, ಛಂಸ್ಸಿನ ಆಯ್ಕೆಯಲ್ಲಿ ಜಾನಪದ ಸತ್ವವನ್ನೇ ಹೆಕ್ಕಿ, ಹೆಕ್ಕಿ ಒಕ್ಕಿ ಕನ್ನಡದ ಕಣಜವನ್ನು  ಶ್ರೀಮಂತಗೊಳಿಸಿ ತ್ರಿಪದಿಯ ಸಾರ್ವಭೌಮ ಎಂದೆನಿಸಿದ್ದಾನೆ. ಯಾರೂ ಕಣ್ಣೆತ್ತಿ ನೋಡದಂತಹ ಅಲಕ್ಷಕ್ಕೆ ಒಳಗಾಗಿದ್ದ ಜಾನಪದ ಕಾವ್ಯ ರೂಪ ತ್ರಿಪದಿಯು ಸರ್ವಜ್ಞನ ಅಭಿಜಾತ  ಪ್ರತಿಭೆಯ ಪರುಷ ಸ್ಪರ್ಷದಿಂದ ಸುವರ್ಣಕಣವಾಗಿ ಪರಿವರ್ತಿತವಾಗಿ ಸಾಹಿತ್ಯ ರೂಪದ ತ್ರಿಪದಿಯಾಗಿ  ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿಕೊಂಡಿದೆ.                                 

 ಪರಾಮರ್ಶನ ಗ್ರಂಥಗಳು

1. ಸರ್ವಜ್ಞನ ವಚನಗಳು ಸಂ: ಉತ್ತಂಗಿ ಚೆನ್ನಪ್ಪ

  ಧಾರವಾಡ

2. ಎಸ್.ಶಿವಣ್ಣ: ಬಿಡುಮುತ್ತು

   ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು 2004

3. ಪರಮಾರ್ಥ ಸಂ: ಎಲ್. ಬಸವರಾಜು

   ಪ್ರಸಾರಾಂಗ ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು 1972

4. ಸರ್ವಜ್ಞ ಒಂದು ಸಮೀಕ್ಷೆ: ಸಂ: ಜಿ.ಎಸ್.ಶಿವರುದ್ರಪ್ಪ

    ಪ್ರಸಾರಾಂಗ ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು 1975

೫. ಎ.ಆರ್.‌ ಕೃಷ್ಣಶಾಸ್ತ್ರಿ:  ಸರ್ವಜ್ಞ

   ಪ್ರಚಾರೋಪನ್ಯಾಸಮಾಲೆ,ಪ್ರಸಾರಾಂಗ ಮೈಸೂರು ವಿಶ್ವವಿದ್ಯಾಲಯ

೬.ಎಂ.ಅಕಬರ ಅಲಿ: ಸರ್ವಜ್ಞನ ಸಮಾಜದರ್ಶನ ಮತ್ತು ಸಾಹಿತ್ಯ ತತ್ವ

       ಕನ್ನಡ ಸಾಹಿತ್ಯ ಪರಿಷತ್‌, ೧೯೭೮

೭.ರಂ.ಶ್ರೀ,ಮುಗುಳಿ, ಕನ್ನಡ ಸಾಹಿತ್ಯ ಚರಿತ್ರೆ

  ಉಷಾ ಸಾಹಿತ್ಯ ಮಾಲೆ, ಮೈಸೂರು, ೧೯೬೮

 

 

ಷಡಕ್ಷರ ಕವಿಯ ರಾಜಶೇಖರ ವಿಳಾಸ

             ಡಾ.ಸಿ.ನಾಗಭೂಷಣ

 

 ಕನ್ನಡ ಸಾಹಿತ್ಯದಲ್ಲಿ ಚಂಪೂ ರೂಪ ಮಹತ್ವದ ಸಂಪ್ರದಾಯವಾಗಿ ಬೆಳೆದು ಬಂದಿದೆ. ಮಹಾಕಾವ್ಯಗಳ ಅಭಿವ್ಯಕ್ತಿಗೆ ಅತ್ಯುತ್ತಮ ಮಾಧ್ಯಮವಾಗಿದೆ. ಸಂಸ್ಕೃತ ನಾಟಕಗಳಿಂದ ಸ್ಫೂರ್ತಿ ಹೊಂದಿ ಚಂಪೂವು ಕನ್ನಡದಲ್ಲಿ ಅಭಿವ್ಯಕ್ತಿ ಸಾಹಿತ್ಯ ರೂಪವಾಗಿ ರೂಪುಗೊಂಡಿದೆ. ಚಂಪು ಪ್ರಕಾರ ಒಂದು ಮಹಾಕೃತಿಯ ಮಾಧ್ಯಮವಾಗಬಲ್ಲ ಛಂದೋರೂಪವನ್ನಾಗಿಸಿದವರು ಕನ್ನಡಿಗರೇ ಎಂದು ನಿರ್ಣಯಿಸಬಹುದು. ಚಂಪೂವು ಮುಖ್ಯತಃ ಸಂಸ್ಕೃತವೆಂದು ತಿಳಿದರೂ ಅದು ಕನ್ನಡ ಸಾಹಿತ್ಯದ ಮಹಾಕಾವ್ಯಗಳಲ್ಲಿ ತಾಳಿದ ರೂಪವು ಮಾತ್ರ ಸಂಸ್ಕೃತದ ಅನುಕರಣ ಫಲವಲ್ಲವೆಂದೂ ವೈಶಿಷ್ಟ್ಯಪೂರ್ಣವೆಂದು ಭಾವಿಸಬಹುದು. ಚಂಪುವು ಸಾಮಾನ್ಯವಾಗಿ ಗದ್ಯ-ಪದ್ಯಮಯವಾಗಿದ್ದರೂ ಇಲ್ಲಿ ಪದ್ಯದ ಭಾಗವೇ ಹೆಚ್ಚು. ಗದ್ಯ ಕಡಿಮೆ. ಕಂದಗಳು ಹಾಗೂ ವೃತ್ತಗಳು ಹೆಚ್ಚಾಗಿ ಬಳಸಲ್ಪಟ್ಟಿರುತ್ತವೆ. ಎರಡು ವೃತ್ತಗಳನ್ನು ಜೋಡಿಸುವುದಕ್ಕಾಗಿ ಆಗಾಗ ಗದ್ಯವಿರುತ್ತದೆ. ಚಂಪೂ ಕಾವ್ಯದ ವಸ್ತುಗಳಲ್ಲಿ ಲೌಕಿಕ ಮತ್ತು ಧಾರ್ಮಿಕ ಇವೆರಡು ಪರಂಪರೆಯಾಗಿ ಬೆಳೆದು ಬಂದವು ಲೌಕಿಕ ಕೃತಿಗಳಲ್ಲಿ ರಾಜಕೀಯ ಶ್ಲೇಷವು ಕಂಡು ಬಂದರೆ, ಧಾರ್ಮಿಕ ಕೃತಿಗಳಲ್ಲಿ ಶಾಂತರಸ, ಭಕ್ತಿರಸಗಳು ಪ್ರಚುರವಾಗಿವೆ.

 ರಾಮಾಯಣ-ಮಹಾಭಾರತ, ವೈದಿಕ, ಜೈನ ಪುರಾಣಗಳು, ಕಲ್ಪಿತ ಕಥಾವಸ್ತುವುಳ್ಳ ಕಾವ್ಯಗಳು ಐತಿಹಾಸಿಕ ವೃತ್ತಾಂತಗಳು ಇವು ಚಂಪೂ ಕಾವ್ಯದ ವಸ್ತುವಿಗೆ ಪ್ರಮುಖವಾದ ಆಕರಗಳು. ಭಾಷಾ ಶೈಲಿಯಲ್ಲಿ ಮಾರ್ಗ-ದೇಶಿಗಳ ಸಮನ್ವಯದ ಪ್ರಯತ್ನವಿದೆ. ಪ್ರಾಚೀನ ಸಂಸ್ಕೃತ ಪರಂಪರೆಯಲ್ಲಿ ಕಾಣುವಂತೆ ಉದಾತ್ತ ನಾಯಕನ ಮಹಿಮಾತಿಶಯ ನಿರೂಪಣೆ, ನಾಯಕ-ಪ್ರತಿನಾಯಕ ಸಂಘರ್ಷ, ಇಷ್ಟದೈವ, ದೈವಭಕ್ತಿ, ಧಾರ್ಮಿಕ ಕ್ಷೇತ್ರಗಳ ಉತ್ಕರ್ಷ ಸಾಧನೆ ಮಹಿಮೆ ಮುಂತಾದವುಗಳ ಕಥನ, ಮತಪ್ರಸಾರ, ಮನೋರಂಜನೆ ಇವೆಲ್ಲಾ ಇಲ್ಲಿಯೂ ಕಾಣಬಹುದಾಗಿದೆ.

 ಚಂಪೂ ಸಾಹಿತ್ಯಕ್ಕೆ ಭದ್ರವಾದ ನೆಲೆಗಟ್ಟು ಹಾಕಿದವನು ಪಂಪ ಕವಿ. ಆತನ ಆದಿಪುರಾಣ, ವಿಕ್ರಮಾರ್ಜುನ ವಿಜಯ ಕೃತಿಗಳು ವಸ್ತು ಮತ್ತು ರೀತಿ ಎರಡು ದೃಷ್ಟಿಗಳಿಂದಲೂ ಉತ್ತರ ಕಾಲೀನ ಚಂಪೂ ಕವಿಗಳಿಗೆ ಅನುಕರಣೀಯವಾಗಿಯೂ, ಆದರ್ಶವಾಗಿಯೂ, ಮಾದರಿಯಾಗಿಯೂ ಪರಿಣಮಿಸಿದವು. ಮುಂದಿನ ಚಂಪೂ ಕವಿಗಳು ಅನುಸರಿಸುವ ಚಂಪೂವಿನ ಚೌಕಟ್ಟು ಬಹುಪಾಲು ಪಂಪನ ಚಂಪೂವಿನ ಚೌಕಟ್ಟನ್ನೇ ಅನುಸರಿಸಿದವುಗಳಾಗಿವೆ.

ವೀರಶೈವ ಚಂಪೂ ಸಾಹಿತ್ಯ :

 

 ವೀರಶೈವ ಕವಿಗಳು ಚಂಪೂವಿನಲ್ಲಿ ಬರೆದರು ಎಂಬ ಮಾತು ಕನ್ನಡದಲ್ಲಿ ವಿಪರ್ಯಾಸ ಚಂಪೂವಿನ ರೀತಿ ಪ್ರೌಢ, ಅಭಿಜಾತ, ಪ್ರತಿಷ್ಠಿತ ಈ ಧೋರಣೆಗೆ ವೀರಶೈವ ಸಾಹಿತ್ಯದ ಮನೋಧರ್ಮಕ್ಕೆ ವ್ಯತಿರಿಕ್ತ. ಇದನ್ನು ಕನ್ನಡದಲ್ಲಿ ತಿಳಿಸಿದವರು ಜೈನರು. ಜೈನ ಚಂಪೂ ಕವಿಗಳ ಚಂಪೂ ಧೋರಣೆಯೇ ಬೇರೆ, ವೀರಶೈವ ಕವಿಗಳು ಚಂಪೂವಿನಲ್ಲಿ ಬರೆದರೂ ಅವರ ಧೋರಣೆಯೇ ಬೇರೆ. ವೀರಶೈವ ಕವಿಗಳು ಕನ್ನಡ ಮಣ್ಣಿನಲ್ಲಿ ರೂಪು ತಾಳಿದ ಸಾಮಾಜಿಕ ವ್ಯವಸ್ಥೆ, ಹೊಸ ವೈಚಾರಿಕ ಕ್ರಾಂತಿಗೆ ಸ್ಪಂದಿಸಬೇಕಾಗಿ ಬಂದುದರಿಂದ ಕನ್ನಡಕ್ಕೆ ಮನ್ನೆಣೆಯಿತ್ತರು. ಬಹುತೇಕ ಸಂಸ್ಕೃತ-ಪ್ರಾಕೃತ ಕೃತಿಗಳ ಹಿನ್ನೆಲೆಯ ಅಗತ್ಯ ಇವರಿಗೆ ಅಷ್ಟಾಗಿ ಉಂಟಾಗಿಲ್ಲ. ಲೌಕಿಕ-ಆಗಮಿಕವೆಂಬ ಧ್ವಂದ್ವ ಧೋರಣೆಯನ್ನು ಈ ಕವಿಗಳು ಕಾಣಿಸಿಲ್ಲ. ರಾಜತ್ವವನ್ನು ನಿರಾಕರಿಸಿದರು. ಅವರು ಹಳಗನ್ನಡ ಚಂಪೂವಿನಲ್ಲಿ ಹಿಂದಿನ ಧೋರಣೆಗಳಿಗೆ ಬದ್ಧರಾಗದೆ ತಮ್ಮ ಕಾವ್ಯೋದ್ದೇಶಕ್ಕೆ ತಕ್ಕಂತೆ ಅದರ ಹೊರಮೈಯನ್ನು ಉಳಿಸಿಕೊಂಡು ಆಂತರಿಕ ಆಶಯಗಳಲ್ಲಿ ಬದಲಾವಣೆ ತಂದಿಕೊಂಡಿದ್ದಾರೆ. ವೀರಶೈವ ಕವಿಗಳಲ್ಲಿ ಹಳಗನ್ನಡ ಪ್ರೌಢ ಚಂಪು ನಡುಗನ್ನಡ ಚಂಪೂ ಆಗಿ ಮಾರ್ಪಟ್ಟಿತ್ತು. ವೀರಶೈವ ಚಂಪೂ ಸಾಹಿತ್ಯದ ಆದಿಕವಿ ಹರಿಹರ. ಈತನ ಉದಿತ ಮಾರ್ಗ ನಂತರದ ವೀರಶೈವ ಚಂಪೂ ಕವಿಗಳ ಮೇಲಾಗಿದೆ. ಸುಮಾರು 40ಕ್ಕೂ ಮೇಲ್ಪಟ್ಟು ಚಂಪೂ ಕೃತಿಗಳು ವೀರಶೈವ ಕವಿಗಳಿಂದ ರಚಿಸಲ್ಪಟ್ಟಿದೆ.

ವೀರಶೈವ ಚಂಪೂ ಕೃತಿ ಶ್ರೇಣಿಯನ್ನು ಈ ರೀತಿ ತೋರಿಸಬಹುದಾಗಿದೆ.

 

  ಕವಿ                ಕೃತಿ               ಸ್ವರೂಪ              ಕಾಲ

ಹರಿಹರ          ಗಿರಿಜಾ ಕಲ್ಯಾಣ         ಲೀಲೆ            ಕ್ರಿ.ಶ. ೧೨೦೦

ಸೋಮರಾಜ   ಉದ್ಭಟ ಕಾವ್ಯ             ಚರಿತ್ರೆ             ಕ್ರಿ.ಶ.  ೧೨೨೨

ಚಂದ್ರಕವಿ     ವಿರೂಪಾಕ್ಷಾಸ್ಥಾನ         ಸ್ಥಳವರ್ಣನೆ          ಕ್ರಿ.ಶ. ೧೪೩೦

ಸುರಂಗ     ತ್ರಿಷಷ್ಠಿ ಪುರಾತನರ ಚರಿತ್ರೆ        ಚರಿತ್ರೆ             ಕ್ರಿ.ಶ. ೧೫೦೦

ಪ್ರಭುಗ         ಚೂಡಾನಾಸ್ಥಾನ

               ವಿಭೋಗಾಸ್ಥಾನ          ಸ್ಥಳ ವರ್ಣನೆ        ಕ್ರಿ.ಶ.  ೧೫೦೦

ಚೆನ್ನವೀರ ಜಂಗಮ  ಷಟ್ಥವಲ್ಲಭ          ಶರಣ ಸ್ತವನ         ಕ್ರಿ.ಶ.  ೧೬೩೦

ವೀರಭದ್ರರಾಜ   ವೀರಭದ್ರ ವಿಜಯ         ಲೀಲೆ              ಕ್ರಿ.ಶ.   ೧೫೩೦

ಸದಾಶಿವಯೋಗಿ      ರಾಮನಾಥವಿಲಾಸ     ಚರಿತೆ            ಕ್ರಿ.ಶ.   ೧೫೬೫

ವಿರಕ್ತತೋಂಟದಾರ್ಯ ಚಿದಾನಂದಸಿಂದು     ಚರಿತೆ           ಕ್ರಿ.ಶ.   ೧೬೧೦

ಮುರಿಗಾ ದೇಶಿಕೇಂದ್ರ  ಹಮ್ಮೀರ ಕಾವ್ಯ        ಚರಿತ್ರೆ           ಕ್ರಿ.ಶ.   ೧೬೧೫

ಕುಂಡಲಗಿರಿ   ರಸಿಕ ಮನೋರಂಜನ ವಿಲಾಸ  ವಿಲಾಸ          ಕ್ರಿ.ಶ.  ೧೬೩೦

ಸಿದ್ಧಲಿಂಗ ಶಿವಯೋಗಿ  ಭೈರವೇಶ್ವರ ಪುರಾಣ        ಚರಿತ್ರೆ       ಕ್ರಿ.ಶ.   ೧೬೩೦

ಶಾಂತಲಿಂಗ ದೇಶಿಕ    ಶಿವಲಿಂಗ ಚಾರಿತ್ರ          ಚರಿತ್ರೆ       ಕ್ರಿ.ಶ.   ೧೬೫೦

ಕವಿಮಾದಣ್ಣ        ನನ್ನಯ್ಯಗಳ ಚರಿತ್ರೆ           ಚರಿತ್ರೆ       ಕ್ರಿ.ಶ.  ೧೬೫೦

ಷಡಕ್ಷರಿ          ರಾಜಶೇಖರ ವಿಳಾಸ            ಚರಿತ್ರೆ        ಕ್ರಿ.ಶ.  ೧೬೫೫  

              ಶಬರಶಂಕರ ವಿಳಾಸ             ಚರಿತ್ರೆ         ಕ್ರಿ.ಶ.  ೧೬೫೫

              ವೃಷಭೇಂದ್ರ ವಿಜಯ             ಚರಿತ್ರೆ         ಕ್ರಿ.ಶ.  ೧೬೫೫      

ಇಮ್ಮಡಿ ಮುರಿಗಾ ದೇಶಿಕೇಂದ್ರ  ಹಾಲಾಸ್ಯ ಪುರಾಣ   ಲೀಲೆ         ಕ್ರಿ.ಶ.  ೧೭೨೦

ಅಳಿಯ ಲಿಂಗರಾಜ    ನಳಕೂಬರ ವಿಲಾಸ

                    ಗಯಚರಿತ್ರೆ             ಲೀಲೆ        ೧೮ನೇ ಶತಮಾನ         

ಲಿಂಗಣ್ಣ ಕವಿ      ಕೆಳದಿ ನೃಪ ವಿಜಯ          ಚರಿತ್ರೆ            ಕ್ರಿ.ಶ. ೧೭೨೦

ಬಸವ್ಪಪ ಶಾಸ್ತ್ರಿ    ದಮಯಂತಿಸ್ವಯಂವರ

                ರೇಣುಕ ಚಂಪು        ಅಖ್ಯಾಯಿಕೆ         ಕ್ರಿ.ಶ.೧೮೪೩-೧೮೮೯ 

ಕುಮಾರ ವಿಭು ಬಿಕ್ಷಕ ಮಹೇಶ ವಿಲಾಸ         ಲೀಲೆ            ಕ್ರಿ.ಶ. ೧೯೦೦

ಸಂಗ ವಿಭು    ಕುಮಾರ ವಿಜಯ            ಚರಿತ್ರೆ            ಕ್ರಿ.ಶ. ೧೯೦೦

 

 ಮೇಲ್ಕಂಡ ವೀರಶೈವ ಚಂಪೂ ಕವಿಗಳ ಸ್ವರೂಪವನ್ನು ಅನುಸರಿಸಿ ಲೀಲೆ, ಸ್ವತಂತ್ರ ರೂಪದ ಚರಿತ್ರೆ, ಮಿಶ್ರರೂಪದ ಚರಿತ್ರೆ, ತತ್ವ ವಿವೇಚನೆ, ಸ್ಥಲ ಮಹಾತ್ಮೆ, ಇತಿಹಾಸ ಇತ್ಯಾದಿಯಾಗಿ ವರ್ಗೀಕರಿಸಬಹುದಾಗಿದೆ.

 ಜೈನಕವಿಗಳಿಗೆ ಚಂಪೂ ಪ್ರಬಂಧದಲ್ಲಿ ಪಂಪ ಕವಿಯು ಮಾರ್ಗ ಪ್ರವರ್ತಕನಾದರೆ ವೀರಶೈವ ಕವಿಗಳಿಗೆ ಹರಿಹರ ಪ್ರವರ್ತಕನಾಗಿದ್ದಾನೆ. ಅದು ಹರಿಹರ ಮಾರ್ಗ ಎಂಬುದಾಗಿದ್ದು, ಷಡಕ್ಷರಿ, ಸುರಂಗ, ಬಸವಪ್ಪ ಶಾಸ್ತ್ರಿಗಳ ಕಾಲದವರೆಗೂ ಮುಂದುವರೆದಿದೆ. ವೀರಶೈವ ಚಂಪೂ ಕವಿಗಳು ಹಳಗನ್ನಡ ಭಾಷೆ ನಡುಗನ್ನಡಕ್ಕೆ ತಿರುಗಿ ಸಂಸ್ಕೃತ ಬಳಕೆಗಿಂತ ದೇಶೀ ವಾಗ್ವಿಳಾಸಕ್ಕೆ ಹೆಚ್ಚಿನ ಆದ್ಯತೆ ದೊರೆಯುತ್ತಿದ್ದ ಕಾಲದಲ್ಲಿ ಕೃತಿರಚನೆಗೆ ತೊಡಗಿದ್ದಾರೆ. ಷಡಕ್ಷರ ಕವಿಯು 13 ನೆಯ ಶತಮಾನದಿಂದ 19 ನೇ ಶತಮಾನದವರೆಗಿನ ಚಂಪೂ ಕವಿಗಳಲಿ ಮಹಾಕವಿ ಎನಿಸಿ ಕೊಳ್ಳುವ ಯೋಗ್ಯತೆಯನ್ನು ಪಡೆದ ಕವಿ ಹಾಗೂ ಈಯುಗದ ವೀರಶೈವಚಂಪೂಕಾರರಲ್ಲಿ ಶ್ರೇಷ್ಠನು ಎಂದು ಸಾಹಿತ್ಯ ಚರಿತ್ರೆಯಲ್ಲಿ ಬಿಂಬಿತನಾಗಿದ್ದಾನೆ.

ಕವಿ ಪರಿಚಯ : ಕನ್ನಡ ಚಂಪೂ ಸಾಹಿತ್ಯದಲ್ಲಿ ಪಂಪ ಕವಿಯು ಒಂದು ತುದಿಯಲ್ಲಿ ನಿಂತರೆ ಇನ್ನೊಂದು ತುದಿಯಲ್ಲಿ ಷಡಕ್ಷರ ಕವಿ ನಿಲ್ಲುತ್ತಾನೆ. ಕನ್ನಡ ಕವಿ ಚರಿತ್ರೆಯಲ್ಲಿ ಇಬ್ಬರು ಷಡಕ್ಷರ ಕವಿಗಳು ಪ್ರಸಿದ್ಧಿಯನ್ನು ಪಡೆದಿದ್ದಾರೆ. 1. ಮುಪ್ಪಿನ ಷಡಕ್ಷರಿ 2. ಷಡಕ್ಷರ ಕವಿ. ಒಬ್ಬರು ಸ್ವರ ವಚನಗಳ ಕತೃಗಳು ಮತ್ತೊಬ್ಬರು ಚಂಪೂ ಕವಿಗಳು. ಚಂಪೂ ಕವಿ ಷಡಕ್ಷರ ಕವಿಯೇ ತನ್ನ ವಿಷಯವಾಗಿ ಅಲ್ಲಲ್ಲಿ ಉಲ್ಲೇಖಿಸಿರುವುದರಿಂದ ಹಾಗೂ ಆ ಕವಿಗೆ ಸಂಬಂಧಿಸಿದ ಬೇರೆ ಬೇರೆ ಉಲ್ಲೇಖಗಳು ಲಭ್ಯವಿರುವುದರಿಂದ ಕವಿಯ ವೈಯಕ್ತಿಕ ವಿಚಾರಗಳನ್ನು ತಿಳಿಯುವಲ್ಲಿ ತೊಂದರೆ ಯೆನಿಸಲಾರದು.

    ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಧನುಗೂರು ಗ್ರಾಮದಲ್ಲಿ ಹುಟ್ಟಿದ ಷಡಕ್ಷರಿಯು ಧನಗೂರಿನ ಮಠಾಧಿಪತಿಯಾಗಿದ್ದು ಹದಿನಾಡಿನ ಅರಸ ಮುದ್ದು ರಾಜರ ಕೋರಿಕೆಯ ಮೇರೆಗೆ ಎಳಂದೂರಿಗೆ ಬಂದು ರಾಜರು ಕಟ್ಟಿಸಿದ ಮಠದಲ್ಲಿ ವಾಸಿಸುತ್ತಾರೆ. ಆತನ ಮಡದಿ ಅಮೃತಾಂಬಿಕೆ ಗುರು ರೇವಣಮಹಾಯೋಗಿಂದ್ರರು ಎಂಬುದಾಗಿ ತಿಳಿದು ಬರುತ್ತದೆ. ದೇವೇಂದ್ರನ ರಾಜಾವಳಿ ಕಥೆಯಲ್ಲಿಯ ‘ಎಳಂದೂರ ಷಡಕ್ಷರಿಯಂ ತತ್ಪುರದ ಜೈನ ಬ್ರಾಹ್ಮಣನಪ್ಪ ಬೊಮ್ಮರಸನ ಪುತ್ರ ವಿಶಾಲಾಕ್ಷಿ ಪಂಡಿತನು ತಿರುಮಲಾರ್ಯನುಂ ಇಂತು ಮೂವರು ಸಹಾಧ್ಯಾಯಿಗಳಾಗಿ ನಿಘಂಟು, ವ್ಯಾಕರಣ, ಕಾವ್ಯ, ನಾಟಕ ಮೊದಲಾದ ವಿದ್ಯೆಗಳಲ್ಲಿ ಶಿಖಾಮಣಿಗಳೆನಿಸಿದರು. ಷಡಕ್ಷರ ಕವಿಸೇಖರನೆನಿಸಿದನು’ ಎಂಬ ಉಲ್ಲೇಖದಿಂದ ಈ ಮೂವರು ಸಮಕಾಲೀನರು ಎಂಬುದಾಗಿ ತಿಳಿದು ಬರುತ್ತದೆ.

 ಈತನು ಕ್ರಿ.ಶ.ಸುಮಾರು 1640ರಲ್ಲಿ ಜನಿಸಿರಬಹುದೆದು ಅಭಿಪ್ರಾಯ ಇದೆ. ಕ್ರಿ.ಶ.1654ರಲ್ಲಿ ಕಾವ್ಯವನ್ನು ರಚಿಸಿರುವುದರಿಂದ ಕೇವಲ 13ನೆಯ ವಯಸ್ಸಿನಲ್ಲಿಯೇ ಆತನಿಗೆ ಕವಿತಾ ಶಕ್ತಿ ಸಿದ್ಧಿಸಿರುವುದು ತಿಳಿದು ಬರುತ್ತದೆ. ಕವಿಯ ಕಾಲದ ಬಗೆಗೆ ನಿಶ್ಚಿತವಾಗಿ ಹೇಳಲು ಸಾಧ್ಯವಿಲ್ಲದಿದ್ದರೂ 17ನೇ ಶತಮಾನದ ಮಧ್ಯಭಾಗದಲ್ಲಿ ಬದುಕಿರುವನು ಎಂದು ಹೇಳಬಹುದಾಗಿದೆ.

 ಷಡಕ್ಷರ ಕವಿಯು ಉಭಯ ಕವಿತಾವಿಶಾರದನಾಗಿದ್ದಾನೆ. ಕವಿತ್ವ,ಪಾಂಡಿತ್ಯಗಳ ಅನನ್ಯ ಸಂಗಮವಾಗಿರುವ ಈ ಕವಿಯ ಹೆಸರಿನಲ್ಲಿ ಸಂಸ್ಕೃತ ಹಾಗೂ ಕನ್ನಡ ಭಾಷೆಯಲ್ಲಿ ದೊರೆಯುವ ಚಿಕ್ಕ ದೊಡ್ಡ ಕೃತಿಗಳ ಸಂಖ್ಯೆ ಇಪ್ಪತ್ತೆರಡು. ಅವುಗಳಲ್ಲಿ ಕನ್ನಡ ಭಾಷೆಯಲ್ಲಿ ರಚಿತವಾಗಿರುವವು ಕೇವಲ ನಾಲ್ಕು. ಉಳಿದವು ಸಂಸ್ಕೃತ ಭಾಷೆಯವು. ಕನ್ನಡ ಕಾವ್ಯಗಳಲ್ಲಿ ರಾಜಶೇಖರ ವಿಳಾಸ ಮತ್ತು ವೃಷಭೇಂದ್ರ ವಿಜಯಗಳು ಮಹಾಕಾವ್ಯಗಳು. ಶಬರ ಶಂಕರ ವಿಳಾಸ ಮಾತ್ರ ಐದು ಅಧ್ಯಾಯಗಳ ಖಂಡಕಾವ್ಯ. ಷಡಕ್ಷರಮಂತ್ರ ಸ್ತೋತ್ರ ರಗಳೆ ಪ್ರಕಾರದ ಲಘು ಕೃತಿ. ಸಂಸ್ಕೃತ ಕಾವ್ಯಗಳಲ್ಲಿ ಕವಿಕರ್ಣ ರಸಾಯನವೊಂದೇ ಬೃಹತ್ಕಾವ್ಯ ಉಳಿದೆಲ್ಲ ಲಘು ಕಾವ್ಯಗಳು ( ವೀರಭದ್ರ ದಂಡಕ,ಬಸವೇಶ್ವರಾಷ್ಟಕ, ನೀಲಾಂಬಿಕೆಯ ಸ್ತೋತ್ರ) ಸ್ತೋತ್ರ ಸ್ತವನ. ಅಷ್ಟಕ ದಂಡಕ ಉದಾಹರಣ ಗದ್ಯ ಮುಂತಾದ ಲಘು ಕಾವ್ಯ ಪ್ರಕಾರಗಳಾಗಿದೆ.

 ಮಠಾಧಿಪತಿಯೂ ಯತಿಯೂ ಆದ ಷಡಕ್ಷರದೇವನು ವೀರಶೈವಧರ್ಮದಲ್ಲಿ ತನಗಿರುವ ಅಪಾರವಾದ ನಿಷ್ಠೆಯನ್ನು ತಾನು ವಿರಚಿತ ಕಾವ್ಯಗಳಲ್ಲಿ ವ್ಯಕ್ತಪಡಿಸಿದ್ದಾನೆ. ಆತನ ಇಷ್ಟದೈವತೆ ಶಿವಲಿಂಗವಾಗಿರುವುದು ಆತನ ಕಾವ್ಯಗಳಿಂದ ತಿಳಿದು ಬರುತ್ತದೆ. ಆತನ ಎಲ್ಲಾ ಕಾವ್ಯಗಳಲ್ಲಿಯೂ ಶಿವಲಿಂಗದ ಸ್ತುತಿ ಇದೆ. ರಾಜಶೇಖರ ವಿಳಾಸ ಮತ್ತು ಬಸವರಾಜ ವಿಜಯ ಕಾವ್ಯಗಳ ಆಶ್ವಾಸಾಂತ್ಯಗಳಲ್ಲಿ ಶಿವೆಯ ಸ್ತುತಿಯಿದೆ. ಶಿವೆ-ಶಕ್ತಿ ಸಮನ್ವಿತವಾದ ತತ್ವವೊಂದನ್ನು ಸೂಚಿಸುವಂತಿದೆ. ಈ ತತ್ವದ ಭೂಮಿಕೆಯ ಆಧಾರದ ಮೇಲೆಯೇ ಷಡಕ್ಷರದೇವನ ಎಲ್ಲಾ ಕಾವ್ಯಗಳು ಸೃಷ್ಟಿಯಾಗಿವೆ.

ರಾಜಶೇಖರ ವಿಳಾಸ ಕಾವ್ಯ ರಚಿಸಲು ಹಿನ್ನೆಲೆ ಮತ್ತು ಕಥಾವಸ್ತು :

 ಕವಿಯು ರಾಜಶೇಖರ ವಿಳಾಸ ಕೃತಿಯನ್ನು ರಚಿಸಲಿಕ್ಕೆ ಒದಗಿದ ಹಿನ್ನೆಲೆಯ ಬಗೆಗೆ ದಂತ ಕಥೆಯಿದೆ. ಜೈನಕವಿ ನೇಮಿಚಂದ್ರನಿಂದ ವಿರಚಿತವಾದ `ಲೀಲಾವತಿ’ ಚಂಪೂ ಕೃತಿಯನ್ನು ಆನೆಯ ಮೇಲೆ ಅಂಬಾರಿಯಲ್ಲಿರಿಸಿ ಜೈನರು ಮೆರವಣಿಗೆ ಹೊರಡಿಸಿದ್ದರು. ಆ ಆನೆಯ ಕೆಳಗೆ ಒಂದು ತೊಟ್ಟಿಲನ್ನು ಕಟ್ಟಿದ್ದರು. ಈ ಮೆರವಣಿಗೆಯು ಷಡಕ್ಷರ ಕವಿಯ ಮಠದ ಮುಂದೆ ನಿಲ್ಲಲು ಅವನ ಶಿಷ್ಯರು ಇದೇನು ಮೆರವಣಿಗೆ ಎಂದು ಕೇಳಲಾಗಿ ಅವರು ಇದು ಕರ್ನಾಟಕ ಗ್ರಂಥ ಶಿರೋಮಣಿಯಾದ ಕವಿಕುಂಜರ ಲೀಲಾವತಿಯ ಮೆರವಣಿಗೆ ಎಂದು ಹೇಳಿದರು. ಆನೆಯ ತೊಟ್ಟಿಲು ಕಟ್ಟಿದ್ದೇಕೆಂದು ಕೇಳಲು ಅವರು ನಗುತ್ತ ಈ ಗ್ರಂಥವು ರಸಭರಿತವಾದದ್ದದ್ದು. ಆ ರಸವು ತುಳುಕಿ ನೆಲಕ್ಕೆ ಬಿದ್ದಿತೆಂದು ಊಹಿಸಿ ತೊಟ್ಟಿಲನ್ನು ಹೊಟ್ಟೆಗೆ ಕಟ್ಟಿದ್ದಾರೆಂದು ಹೇಳಲು, ಈ ಸಂಗತಿಯನ್ನು ಶಿಷ್ಯರು ಷಡಕ್ಷರ ಕವಿಗೆ ತಿಳಿಸಿದರು. ಆಗ ಷಡಕ್ಷರ ಕವಿಯು ಇದಕ್ಕಿಂತ ರಸಭರಿತವಾದ ಕಾವ್ಯ ವಿರಲಿಕ್ಕಾಗಿ ಇದಕ್ಕೆ ಇಂಥ ಬಹುಮಾನ ಸಲ್ಲುವುದಿಲ್ಲವೆಂದು ತನ್ನ ಶಿಷ್ಯರ ಸಂಗಡ ಹೇಳಿ ಕಳುಹಿಸಿದನು. ಮೆರವಣಿಗೆಯನ್ನು ಮುಂದೆ ಹೋಗದ ಹಾಗೆ ತಡೆದನು. ಆ ಸಂಗತಿಯು ಅರಮನೆಯವರೆಗೂ ಹೋಯಿತು. ವಿಚಾರಣೆಯ ಸಂದರ್ಭದಲ್ಲಿ ಷಡಕ್ಷರ ಕವಿಯು ಅಧಿಕಾರಿಗಳಿಗೆ ಇನ್ನೊಂದು ವರ್ಷದೊಳಗಾಗಿ ಅದಕ್ಕಿಂತ ಶ್ರೇಷ್ಠವಾದ ಗ್ರಂಥವನ್ನು ರಚಿಸುತ್ತೇನೆ. ಅದಕ್ಕಿಂತ ಲೀಲಾವತಿಯು ರಸಭರಿತವೆಂದು ವಿದ್ವಾಂಸರಿಗೆ ತೋರಿದರೆ ಆಗ ಮೆರವಣಿಗೆ ಮಾಡಬಹುದೆಂದು ಹೇಳಿದನು. ಈ ಮಾತು ಎಲ್ಲರಿಗೂ ಒಪ್ಪಿಗೆಯಾಯಿತು. ಅನಂತರ ಷಡಕ್ಷರ ದೇವನು ‘ರಾಜಶೇಖರ ವಿಳಾಸ’ ಗ್ರಂಥ ರಚನೆಗೆ ತೊಡಗಿ ಒಂದು ವರ್ಷದಲ್ಲಿ ಪೂರೈಸಿದನು. ಅದನ್ನು ವಿದ್ವಾಂಸರ ಸಮ್ಮುಖದಲ್ಲಿ ಓದಿ ತೋರಿಸಿದನು.

 ಕವಿ ವಿಬುಧರ ಕಿವಿಯೊಳ ಸೂ

ಸುವ ನವರಸಮಿಳಿದು ತೀವಿ ತನುವಂ ಮನವಂ

ಕವಿದು ಪೊರಸೂಸಿತೆನೆ ಪೊ

ಣ್ಮುವ ಸುಖಭಾಷ್ಪ ತುಳುಂಕೆ ಪೇಳ್ವುದು ಕೃತಿಯಂ [1-52]

ಎಂದು ತಾನು ರಚಿಸಿದ ಕೃತಿಯ ಬಗೆಗೆ ಹೇಳಿಕೊಂಡಿದ್ದಾನೆ. ವಿದ್ವಾಂಸರು ಲೀಲಾವತಿ ಹಾಗೂ ರಾಜಶೇಖರ ವಿಳಾಸಗಳನ್ನು ಓದಿಸಿ ಕೇಳಿ ಷಡಕ್ಷರ ದೇವನಿಗೆ ಯೋಗ್ಯತಾ ಪತ್ರವನ್ನು ಕೊಟ್ಟರೆಂದು ತಿಳಿದು ಬರುತ್ತದೆ. ಈ ಘಟನೆಯನ್ನು ಐತಿಹಾಸಿಕವಾಗಿ ಒಪ್ಪಲು ಸಾಧ್ಯವಿಲ್ಲ. ನೇಮಿಚಂದ್ರನ ಕಾಲ 13ನೇ ಶತಮಾನ. ಷಡಕ್ಷರ ಕವಿಯ ಕಾಲ 17ನೇ ಶತಮಾನದ ಮಧ್ಯಭಾಗ. ಕಾವ್ಯದ ಅಗ್ಗಳಿಕೆಗೆ ಮಹತ್ತರತೆಯನ್ನು ಸಾರುವುದಕ್ಕಾಗಿ ಈ ಕಥೆಯನ್ನು ಕಲ್ಪಿಸಿದ್ದಾರೆ ಎಂದೆನಿಸುತ್ತದೆ. ಗುಬ್ಬಿಯ ಮಲ್ಲಣಾರ್ಯನು ಭಾವಚಿಂತಾರತ್ನ ಕಾವ್ಯದಲ್ಲಿ ವರ್ಣಕವಾಗಿ ಹೇಳಿದ ಕಥೆಯನ್ನೇ ಷಡಕ್ಷರಿ ರಾಜಶೇಖರ ವಿಳಾಸದಲ್ಲಿ ವಸ್ತುಕವಾಗಿ ಹೇಳಿರುವನು. ತೆಲುಗಿನ ಪಾಲ್ಕುರಿಕೆ ಸೋಮನಾಥ, ಕನ್ನಡದ ಭೀಮಕವಿಗಳು ಹೇಳಿದ ಬಸವಾದಿ ಪ್ರಮಥರ ಕಥೆಯನ್ನು, ಶಿವಭಕ್ತರ ಕಥೆಗಳನ್ನು ಚಂಪೂರೂಪದಲ್ಲಿ ಬಸವರಾಜ ವಿಜಯದ ಕೃತಿಯಲ್ಲಿ ಹೇಳಿದ್ದಾನೆ. ಶಿವನ ಪಂಚವಿಶತಿ ಲೀಲೆಗಳಲ್ಲಿ ಹದಿನೈದನೆಯದಾದ ಶಬರಶಂಕರ ಲೀಲೆಯ ಕಥೆಯನ್ನು ವಸ್ತುವಾಗಿ ಸ್ವೀಕರಿಸಿ ಪೂರ್ವದ ಕವಿಗಳಿಂದ ಪ್ರಭಾವಿತನಾಗಿ ಶಬರಶಂಕರ ವಿಲಾಸವನ್ನು ರಚಿಸಿದ್ದಾನೆ.

 ಕಥೆಯ ಮೂಲ : ಮೊದಮೊದಲು ಅರಸನೊಬ್ಬನ ನ್ಯಾಯನೀತಿಯನ್ನು ಪ್ರತಿಪಾದಿಸುವ ಒಂದು ಸಾಂಕೇತಿಕ ರೂಪವಾಗಿದ್ದ ಈ ಕಥೆಯು ಮುಂದೆ ಮಂತ್ರದ ಮಹಿಮೆಯನ್ನು ಒಳಗೊಂಡು ಒಂದು ವಿಶಿಷ್ಟ ಕಥೆಯಾಗಿ ಮಾರ್ಪಾಡುಗೊಂಡಿದೆ.ಕವಿಯು ತನ್ನ ಕಾವ್ಯಕ್ಕೆ ವಸ್ತುವನ್ನು ಪಡೆದುಕೊಂಡು ಹಲವೆಡೆ ಉಚಿತ ಮಾರ್ಪಾಡುಗಳನ್ನು ಮಾಡಿಕೊಂಡಿದ್ದಾನೆ. ಈ ಕೃತಿಯ ಮೂಲ ವಸ್ತು ಕ್ರಿ.ಶ.2ನೆಯ ಶತಮಾನದ್ದೆಂದು ಹೇಳಲಾದ ಇಲಂಗೋ ಕವಿ ರಚಿಸಿದ ಶಿಲಪ್ಪದಿಗಾರಂ ಎನ್ನುವ ತಮಿಳು ಗ್ರಂಥದಲ್ಲಿ ದೊರೆಯುತ್ತದೆ. ಅದರಲ್ಲಿ ಒಂದು ಆಕಳು ತನ್ನ ಕರುವಿನೊಡನೆ ಬೀದಿಯಲ್ಲಿ ನಿಂತಾಗ್ಗೆ ಕರು ಕುದುರೆಯ ಕಾಲಿಗೆ ಸಿಕ್ಕು ಸಾಯುತ್ತದೆ. ನೊಂದ ಆಕಳು ನಗರದ ಮಹಾದ್ವಾರದಲಿ ಕಟ್ಟಿದ ನ್ಯಾಯ ಗಂಟೆಯನ್ನು ಬಾರಿಸಿ ನ್ಯಾಯಭಿಕ್ಷೆ ಕೋರುತ್ತದೆ. ಅರಸನು ಅಲ್ಲಿಗೆ ಬಂದು ವಿಷಯವನ್ನು ತಿಳಿದು ಹಸುವಿಗೆ ನ್ಯಾಯದಾನ ಮಾಡುತ್ತಾನೆ. ತಮಿಳುನಾಡಿನ ತಿರುವಾರೂರಿನ ಗುಡಿಯಲ್ಲಿ, ಲೇಪಾಕ್ಷಿ, ಪೆನುಗೊಂಡೆ ದೇವಾಲಯಗಳಲ್ಲಿ ಈ ಘಟನೆಗೆ ಸಂಬಂಧಿಸಿದ ಹಾಗೆ ತಾಯಿ ಹಸು ಗಂಟೆಯನ್ನು ತನ್ನ ಕೊಂಬಿನಿಂದ ಬಾರಿಸುತ್ತಿರುವ ಹಾಗೂ ಬೀದಿಯಲ್ಲಿ ರಾಜನ ರಥ ನಿಂತಿರುವ ದೃಶ್ಯಗಳನ್ನು ಕಲ್ಲಿನಲ್ಲಿ ಕೆತ್ತಲಾಗಿದೆ. ಸತ್ತ ಕರುವಿಗೆ ನ್ಯಾಯ ತೋರಿದ ಚೋಳನ ಕಥೆಯನ್ನು ಕನ್ನಡದಲ್ಲಿ ವರ್ಣಕ ರೂಪದಲ್ಲಿ ಗುಬ್ಬಿಯ ಮಲ್ಲಣಾರ್ಯನು, ಷಟ್ಪದಿ ಪ್ರಕಾರದಲ್ಲಿ ಭಾವಚಿಂತಾರತ್ನ ಹೆಸರಿನಲ್ಲಿ ಈಗಾಗಲೇ ರಚಿಸಿದ್ದನು. ಭಕ್ತಿ ರಸ ಪ್ರಧಾನವಾಗಿ ಸತ್ಯೇಂದ್ರ ಚೋಳನ ಕಥೆಯಲ್ಲಿ ಪಲ್ಲವಿಸಿ ಕರುಣರಸ ಪ್ರಧಾನವಾದ ತಿರುಕೊಳವಿನಾಚೆಯ ಕಥೆಯಲ್ಲಿ ಮುಕ್ತಾಯಗೊಂಡಿರುವ ಭಾವಚಿಂತರತ್ನ ವರ್ಣಕ ಕಾವ್ಯವನ್ನೇ ಷಡಕ್ಷರ ಕವಿಯು ಆಧಾರವಾಗಿಟ್ಟು ಅಲ್ಲಲ್ಲಿ ಮಾರ್ಪಾಡುಗಳನ್ನು ಮಾಡುವುದರ ಮೂಲಕ ವಸ್ತುಕ ರೂಪದಲ್ಲಿ ಈ ಕಾವ್ಯವನ್ನು ರಚಿಸಿದ್ದಾನೆ. ಸತ್ಯೇಂದ್ರಚೋಳನ ಕಥೆ ತೀರಾ ಚಿಕ್ಕದು. ಮಲ್ಲಣಾರ್ಯನು ಕತೆಯ ತೆಳು ಹಂದರವನ್ನು ಕುರಿತು ಒಂದು ಪದ್ಯದಲ್ಲಿ, ` ಸಾಮಾನ್ಯ ಹೆಣ್ಣೋರ್ವಳು ಕಾಪಾಡಿಕೊಂಡಿದ್ದ ಮಗನು ಕುದುರೆಯ ಗೊರಸಿನಿಂದ ಸಾಯಲು, ಅದನ್ನು ಕೇಳಿ ಪರೀಕ್ಷಿಸಿ, ತನ್ನ ಮಗನ ತಲೆಯನ್ನು ಕತ್ತರಿಸುವಲ್ಲಿ ಭಕ್ತವಧೆಯೆಂದು ತನ್ನ ಶಿರದೊಡನೆ ಕತ್ತರಿಸಿದ ಎಂಟು ತಲೆಗಳನ್ನು ಪಡೆದು ಕೈಲಾಸಕ್ಕೆ ಹೋದ ಸತ್ಯೇಂದ್ರ ಚೋಳನ ಕತೆಯನು ಬೆಳಸಿ ಮಾಡುವೆನು’ ಎಂದಿರುವನು.

 ಷಡಕ್ಷರ ಕವಿಯು ತನ್ನ ಕಾವ್ಯ ಪಂಡಿತರ, ಪರಿಣಿತರ ಮನ್ನಣೆ ಗಳಿಸಬೇಕೆಂಬ ಅಭಿಲಾಷೆ ಇದ್ದುದರಿಂದ ಅಷ್ಟಾದಶ ವರ್ಣನೆ ಹಾಗೂ ನವರಸಗಳ ಅಭಿವ್ಯಕ್ತಿಯ ಹಿನ್ನೆಲೆಯಲ್ಲಿ ಮೂಲ ಕಥಾವಸ್ತುವಿನಲ್ಲಿ ತನಗೆ ಬೇಕಾದಂತೆ ಮಾರ್ಪಾಟುಗಳನ್ನು ಮಾಡಿಕೊಂಡಿದ್ದಾನೆ. ಮಲ್ಲಣಾರ್ಯನು ಭಾವಚಿಂತಾರತ್ನದಲ್ಲಿ ಸತ್ಯೇಂದ್ರಚೋಳನ ಕಥೆಯನಿದನ ಬೆಳಸಿ ಕೃತಿಮಾಳ್ಪೆನು ಎಂಬ ಹೇಳಿಕೆಯಲ್ಲಿ ಆತನ ಕಥಾ ನಾಯಕ ಸತ್ಯೇಂದ್ರ ಚೋಳ. ಅವನ ಕಥೆಯ ಮುಖಾಂತರ ಪಂಚಾಕ್ಷರಿ ಮಂತ್ರದ ಮಹಿಮೆಯನ್ನು ಸಾಧಿಸಿರುವುದನ್ನು ಕಂಡರೆ ಷಡಕ್ಷರದೇವನು ಬರೆಯಲಾರಂಭಿಸಿದ್ದು ರಾಜಶೇಖರ ವಿಳಾಸ. ಷಡಕ್ಷರ ಕವಿಯ ಕಾವ್ಯದಲ್ಲಿ ಕಥಾವಸ್ತುವಿನ ನಾಯಕ ಸತ್ಯೇಂದ್ರ ಚೋಳನ ಪುತ್ರ ರಾಜಶೇಖರ. ಸತ್ಯೇಂದ್ರಚೋಳ ಅಮೃತಮತಿಯರ ಪುತ್ರ ಬಯಕೆ, ಗುರುಗಳ ಆಶೀರ್ವಾದ ರಾಜಶೇಖರನ ಜನನ. ಅವನ ಬಾಲ ಲೀಲೆ ಯೌವನ ಇತ್ಯಾದಿಗಳ ವರ್ಣನೆಯನ್ನು ತಂದಿದ್ದಾನೆ. ವೀರರಸ ಶೃಂಗಾರ ರಸಗಳ ವರ್ಣನೆಯನ್ನು, ಸಿಂಹಳದ ಮೇಲೆ ದಂಡೆತ್ತಿ ಹೋದ ಪ್ರಸಂಗ, ಅಲ್ಲಿ ಸಿಂಹಳೇಶನ ಸುತೆಯಾದ ಸರ್ವಮಂಗಳೆಯ ದರ್ಶನ ಪ್ರಣಯಾಂಕುರ, ವಿವಾಹ ಇತ್ಯಾದಿ ಪ್ರಸಂಗಗಳಲ್ಲಿ ಹಲವೆಡೆ ಬದಲಾವಣೆ ತಂದಿದ್ದಾನೆ. ದೈವಭಕ್ತಿ ಹಾಗೂ ಷಡಕ್ಷರ ಮಂತ್ರದ ಮಹಿಮೆಯನ್ನು ಪ್ರತಿಪಾದಿಸಿದ್ದಾನೆ. ನ್ಯಾಯನೀತಿ, ಮತ್ತು ಮಂತ್ರಮಹಿಮೆ ತತ್ವಗಳನ್ನು ಪ್ರತಿಪಾದಿಸುವ ಉದ್ದೇಶದಿಂದ ರೂಪುಗೊಂಡ ರಾಜಶೇಖರವಿಳಾಸವು ಕವಿಯ ಪ್ರತಿಭಾಮೂಸೆಯಲ್ಲಿ ಮೂಡಿ ಬಂದಿದ್ದರಿಂದ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮಹತ್ತರವಾದ ಸ್ಥಾನವನ್ನು ಪಡೆದು ಕೊಂಡಿದೆ. ಹೀಗಾಗಿ ಕಥಾನಾಯಕತ್ವದಲ್ಲಿ ಬದಲಾವಣೆ ಹೊಂದಿದ ಈ ಕಾವ್ಯವು ಸ್ವಾರಸ್ಯಕರವೂ ಅರ್ಥಪೂರ್ಣವೂ ಆಗಿದೆ.

ಕಥಾವಸ್ತು :

 ಚೋಳಮಂಡಲ ಮಧ್ಯದಲ್ಲಿ ಶಿವಭಕ್ತರಿಂದ ತುಂಬಿದ ಧರ್ಮವತಿಯೆಂಬ ನಗರ. ಅದಕ್ಕೆ ಸತ್ಯೇಂದ್ರ ಚೋಳನೆಂಬುವನು ರಾಜ. ಅವನ ಹೆಂಡತಿ ಅಮೃತಮತಿ. ಮಂತ್ರಿ ಪತಿಮೋಹಿ. ಪತಿಮೋಹಿಯ ಮಗ ಮಿತವಚನ. ರಾಜ ದಂಪತಿಗಳಿಗೆ ಮಕ್ಕಳಿಲ್ಲ ಒಂದು ದಿನ ಅಮೃತಮತಿ ದೇವಿಯು ಪುರಾಣ ಪ್ರಸಂಗದಲ್ಲಿ ಮಾರ್ಕಂಡೇಯನ ಲೀಲೆಗಳನ್ನು ಕೇಳಿ ತನಗೆ ಮಕ್ಕಳಿಲ್ಲದ ಬಗೆಗೆ ವ್ಯಥೆಗೊಂಡು `ಎಳೆವರೆಯದೊಳೆಳೆಯರ್ಕಳ್

 ನೆಳಸುತೆ ನಳಿದೊಳ್ಗಳಿಂದ ಬಿಗಿದಪ್ಪಿ ಮನಂ

 ಗೊಳೆತಳ್ತು ನೋಡಿ ಮುದ್ದಿಪ

 ವಿಳಾಸಮೊಂದಕ್ಕೆ ನೋಂತುದಿಲ್ಲಾ ಕೆಳದಿ

 ಶಿವಭಕ್ತಿಯಿಲ್ಲದವನ ಬಾಳು, ಕವಿತ್ವವಿಲ್ಲದವನ ಜಾಣ್ಮೆ ಕಳೆಯಿಲ್ಲದಪೆಣ್, ಜವಮಿಲ್ಲದಶ್ವ, ತನೂಭವವಿಲ್ಲದ ಭಾಗ್ಯಗಳು ಇವು ಶೋಭಿಸುವುದಕ್ಕೇ ಸಾಧ್ಯವೇ?’(3-46, 47) ಇತ್ಯಾದಿ ಚಿಂತನೆಯಿಂದ ವ್ಯಥೆ ಪಡುತ್ತಿರುವ ಅವಳಿಗೆ ಗುರುಗಳಾದ ಚಿದ್ಘನ ಶಿವಾಚಾರ್ಯರು ಉಪದೇಶಿಸಿದ ಶಿವಮಂತ್ರಾಕ್ಷರಿ ಮಂತ್ರ ಮಹಾತ್ಮೆಯ ಫಲವಾಗಿ ರಾಜಶೇಖರನೆಂಬ ಮಗ ಜನಿಸುತ್ತಾನೆ. ಮಂತ್ರಲಕ್ಷ್ಯನೆಂಬುದು ಅವನ ಇನ್ನೊಂದು ಹೆಸರು. ರಾಜಶೇಖರ ದೊಡ್ಡವನಾದ ಮೇಲೆ ಯುವರಾಜ ಪಟ್ಟಾಭಿಷಿಕ್ತನಾಗಿ, ಕಪ್ಪ ಕೊಡದೆ ಉದ್ಗರ್ವದಿಂದ ಮೆರೆಯುತ್ತಿದ್ದ ಸಿಂಹಳೇಂದ್ರನ ಮೇಲೆ ದಂಡೆತ್ತಿ ಹೋಗಿ ಯುದ್ಧದಲ್ಲಿ ಅವನನ್ನು ಸೋಲಿಸಿ, ಅವನ ಮಗಳಾದ ಸರ್ವಮಂಗಳೆಯನ್ನು ಧರ್ಮ ಪತ್ನಿಯಾಗಿ ಸ್ವೀಕರಿಸಿ ನಗರಕ್ಕೆ ಹಿಂದಿರುಗುವನು.

 ಒಂದು ದಿನ ಒಡ್ಡೊಲಗದಲ್ಲಿ ಕುಳಿತಿರುವಾಗ ಸಾಮಂತನಾದ ಸಿಂಧುರಾಜನು ಅಕ್ಷೀಣ ಲಕ್ಷಣಾ ಕೃತಿಗಳುಳ್ಳ ಎರಡು ಜಾತ್ಸಶ್ವಗಳನ್ನು ಕಾಣಿಕೆಯಾಗಿ ಕೊಡುವನು. ಅವುಗಳನ್ನು ರಾಜಕುಮಾರನು ವೈಹಾಳಿಯ ಇಚ್ಛೆಯನ್ನು ಹೊಂದಿ ತನ್ನ ಸಮ ವಯಸ್ಕನಾದ ಮಿತವಚನನೊಡನೆ ಅಶ್ವಾರೋಹಣೋತ್ಸವವನ್ನು ನೆರವೇರಿಸಿ ಹಿಂದಿರುಗಿ ಅರಮನೆಯನ್ನು ಪ್ರವೇಶ ಮಾಡುವ ಸಂದರ್ಭದಲ್ಲಿ ಆ ಊರಿನ ಶಿವಭಕ್ತೆಯಾದ ತಿರುಕೊಳವಿನಾಚಿಯೆಂಬುವವಳ ಏಕಮಾತ್ರ ಪುತ್ರ ಶಂಕರ ಎಂಬುವವನು ಮಿತವಚನನ ಕುದುರೆಯ ಕಾಲಿಗೆ ಸಿಕ್ಕು ಮರಣ ಹೊಂದಿದನು. ಮಗನ ಸಾವಿನಿಂದಾಗಿ ಧಾರುಣವಾದ ಪುತ್ರ ಶೋಕ ಸಂತಪ್ತೆಯಾದ ಅವಳು ಆ ಸತ್ತ ಮಗನ್ನೆತ್ತಿಕೊಂಡು ಸತ್ಯೇಂದ್ರಚೋಳ ಭೂಪತಿಯಲ್ಲಿ ದೂರು ಸಲ್ಲಿಸಿದಳು. ಕೂಡಲೇ ಅರಸನು ಮಂತ್ರಿಯಾದ ಪತಿಮೋಹಿಯೊಡನೆ ಯೋಚಿಸಿ ಅಪರಾಧ ಕಾರಣನಾದ ರಾಜಕುಮಾರನ ಶಿರಚ್ಛೇದನ ಆಜ್ಞೆಯನ್ನು ಮಾಡುವನು. ಮುಂದಾಗುವ ಮಹಾ ಅನಾಹುತಗಳನ್ನು ನೋಡಲಿಚ್ಛಿಸದ ಪತಿಮೋಹಿ ತನ್ನ ಶಿರಚ್ಛೇದನ ಮಾಡಿಕೊಂಡು ಬಿಡುವನು. ಈ ಸನ್ನಿವೇಶದ ಪರಿಣಾಮವಾಗಿ ರಾಜಶೇಖರ, ಸಂದಾಯಿಯೆಂಬ ಸೇವಕ, ಮಿತವಚನ, ತಿರುಕೊಳವಿನಾಚಿ ಕೊನೆಗೆ ಸತ್ಯೇಂದ್ರಚೋಳ ಎಲ್ಲರೂ ತಮ್ಮ ತಮ್ಮ ಶಿರಚ್ಛೇದನ ಮಾಡಿಕೊಳ್ಳುವರು. ಎಲ್ಲ ಶಿರಸ್ಸುಗಳೂ ಶಿವಷಡಕ್ಷರಿ ಮಂತ್ರೋಚ್ಛಾರಣೆ ಮಾಡತೊಡಗುವವು. ಕೊನೆಗೆ ಅಮೃತಮತಿದೇವಿ ತನ್ನ ಶಿರವನ್ನು ಕಡಿದುಕೊಳ್ಳಲು ಸಿದ್ಧಳಾಗುವಷ್ಟರಲ್ಲಿ ಶಿವನು ಪ್ರತ್ಯಕ್ಷನಾಗಿ ಎಲ್ಲರನ್ನು ಬದುಕಿಸುವನು. ಶಿವನು ಎಲ್ಲರನ್ನೂ ಕೈಲಾಸಕ್ಕೊಯ್ದು ಗಣ ಸಂದೇಹ ಮಧ್ಯದಲ್ಲಿ ಇರಿಸುವನು. ಕಥೆಯು ಕೊನೆಯಲ್ಲಿ ಮಂಗಳಾಂತವಾಗಿ ಪರಿಣಮಿಸುವುದು. ಈ ಕಥೆಯ ಹಂದರದ ಮೇಲೆ ತನ್ನ ಅದ್ಭುತ ಪ್ರತಿಭೆಯ, ಪಾಂಡಿತ್ಯದ, ಲೋಕಾನುಭವದ ಹಿನ್ನೆಲೆಯಲ್ಲಿ ಕಾವ್ಯ ವಲ್ಲರಿಯನ್ನು ಹಬ್ಬಿಸಿದ್ದಾನೆ.

ಕಾವ್ಯದ ಆಶಯ : ಈ ಕೃತಿಯಲ್ಲಿ ಕವಿಯು ವಿಶೇಷತಃ ಶೃಂಗಾರ, ಕರುಣ, ಶಾಂತರಸ ರೂಪದಲ್ಲಿ ಅತ್ಮ ಪ್ರಕಾಶ ಮಾಡಿಕೊಂಡಿದ್ದಾನೆ. ಕವಿಯು ಸಂಸ್ಕೃತದ ವಿಪುಲ ಸಂಪತ್ತಿನ ನಡುವೆ ಕನ್ನಡವನ್ನು ಸೇರಿಸಿ ತನ್ನ ಉದ್ದೇಶದ ಸಾಧನೆಗಾಗಿ ತೊಡಗಿದ್ದರಿಂದ ಈ ಕೃತಿಯು ಪಾಮರರಿಗಿಂತ ಪಂಡಿತರಿಗೆ ಪ್ರಿಯವಾಯಿತೇನೋ ಎನ್ನಿಸುತ್ತದೆ. ಹೀಗಾಗಿ ಕೆಲವು ವಿದ್ವಾಂಸರು ರಾಜಶೇಖರ ವಿಳಾಸವು ಷಡಕ್ಷರ ಕವಿಯ ಪಾಂಡಿತ್ಯ ಪ್ರದರ್ಶನ್ಕಕಾಗಿ ಪ್ರಾದುರ್ಭವಿಸಿದ ಕಾವ್ಯ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ. ಕವಿಗೆ ಅಪಾರ ವಿದ್ವತ್, ಪಾಂಡಿತ್ಯ ಇದ್ದುದರಿಂದ ಅದನ್ನು ಪ್ರದರ್ಶಿಸಲು ಪ್ರಯತ್ನಿಸಿದ್ದಾನೆ. ಅದಾಗ್ಯೂ ಪ್ರತಿಮಾ ಸೃಷ್ಟಿಯಲ್ಲಿ ಷಡಕ್ಷರನಂತೆ ಅಪೂರ್ವ ಪ್ರತಿಭೆಯನ್ನು ತೋರಿದವರು ಕನ್ನಡ ಕವಿಗಳಲ್ಲಿ ತೀರ ವಿರಳ. ಭಾರತ, ರಾಮಾಯಣ, ಪುರಾಣಗಳಂತಹ ಪ್ರಸಿದ್ಧ ಸಿದ್ಧ ಕಥಾವಸ್ತುಗಳನ್ನು ತೆಗೆದುಕೊಂಡು ಸೈ ಎನ್ನಿಸಿಕೊಳ್ಳುವುದೇ ಕಷ್ಟವಾಗಿರುವಾಗ ಯಾವ ವಿಶೇಷ ಘಟನಾವಳಿಗಳಿಲ್ಲದ ಅಪ್ರಸಿದ್ಧ ಕಥಾವಸ್ತುವೊಂದನ್ನು ಆಯ್ಕೆ ಮಾಡಿಕೊಂಡು ಕೃತಕವಾದರೂ ಕಾವ್ಯ ಮಾರ್ಗದ ಲಕ್ಷಣಗಳನ್ನು ಹಿಡಿದು ಅದಕ್ಕೆ ಜೀವಕಳೆ ತುಂಬಿ ಮಹಾಕಾವ್ಯ ಎನ್ನಿಸುವಷ್ಟ ಮಟ್ಟಿಗೆ ಅಪೂರ್ವ ಪ್ರತಿಭೆಯನ್ನು ತೋರಿದವರಲ್ಲಿ ಷಡಕ್ಷರನಂತಹ ಕನ್ನಡ ಚಂಪೂ ಕವಿಗಳು ತೀರ ವಿರಳ ಎಂದೇ ಹೇಳಬಹುದು.

 ರಾಜಶೇಖರ ವಿಳಾಸವು ತಂಬೆಲರಂತೆ, ತುಂಬುವೆರೆಯಿಂ ಪೊರಪೊಣ್ಮುವ ಜೊನ್ನದಂತೆ ಪೆಣ್ದುಂಬಿಯ ಗಾನದಂತೆ, ಪೊಸ ಸುಗ್ಗಿಯ ನಂದನದಂತೆ, ನಲ್ಮೆಯಿಂದಂ ಬಿಗಿದಪ್ಪಿ ದಂಗನೆಯ ಪರ‍್ಮೊಲೆ ಸೋಕಿನ ಸೌಖ್ಯದಂತೆ ರಸಜ್ಞರ ಚಿತ್ತಂ ಬಿಡದಿರ್ಪುದು ಎಂದು ಕವಿಯೇ ಹೇಳಿಕೊಂಡಿದ್ದಾನೆ. ತನ್ನ ಕಾವ್ಯವನ್ನು ರಚಿಸುವಲ್ಲಿ ಹರಿಹರ ಕವಿಯ ಮಾರ್ಗವನ್ನೇ ಅನುಸರಿಸಿರುವುದಾಗಿ ಈ ಕೆಳಕಂಡ ಪದ್ಯದಲ್ಲಿ :

 ಮೃದುಮಧುರ ಪದವಿಲಾಸ

 ಸ್ಪದ ಸವಿಸರ ಪ್ರಕಾಶ ಕರ್ಣಾಟ ಕವಿ

 ತ್ವ ದೊಳೊರ್ವನೆ ಪೆಸರ್ವಡೆದ

 ಗ್ಗದ ಹರಿಹರನುದಿತ ಮಾರ್ಗದಿಂದಿದ ನೊರೆವಂ” [1-79] ಎಂದಿದ್ದಾನೆ.

ಪೂರ್ವದ ಹರಿಹರನ ಉದಿತ ಮಾರ್ಗದಲ್ಲಿಯೇ ಕೃತಿ ರಚನೆ ಮಾಡಿರುವುದು ಗಮನಾರ್ಹವಾಗಿದೆ. ಕಾವ್ಯದಲ್ಲಿ ತನ್ನ ಉದ್ದೇಶವನ್ನು

 ರಸೆಯೊಳ್ ರಸವತ್ಕವಿತೆಯ

 ನುಸುರಲ್ಪಡೆದ ಸಮನಯನನಂ ಪೊಗಳದೆ ಮಾ

 ನಿಸರಂ ಸುರರಂ ಪೊಗಳ್ವುದು

 ಕಸವರಮಂ ಕಳೆದು ಕಸವನಾಂತ ವೊಲಕ್ಕುಂ [1-21]

 ಅದರಿಂದೆ ಮಹಿತ ಮಹಿಮಾ

 ಸ್ಪಂದನಂ ಶಿವನಂ ತದೀಯ ಶರಣ ವಜ್ರಮಂ

 ಪದೆದು ಮುದ ಮೊದವೆ ಬಲ್ಲಂ

 ದದೆ ನುತಿಪೆಂ ನುತಿಸೆನುಳಿದ ಸುರರಂ ನರರಂ (1- 22)

ಎಂದು ಹೇಳುವಲ್ಲಿ ಕವಿಯು ಶಿವನನ್ನು, ಶರಣರನ್ನು ಹೊರತು ಉಳಿದವರನ್ನು ಸ್ಮರಿಸುವುದಿಲ್ಲವೆಂಬ ಆಶಯ ಅಡಗಿದೆ.

ಕಾವ್ಯದ ಪ್ರಮುಖ ಪಾತ್ರ ಸೃಷ್ಟಿ:

ತಿರುಕೊಳವಿನಾಚಿ: ರಾಜಶೇಖರ ವಿಳಾಸದಲ್ಲಿ ಶೃಂಗಾರದ ಲತೆಗೆ ಕರುಣೆಯೇ ನೀರು. ಭಕ್ತಿಯೇ ಕುಸುಮ. ಈ ಉಕ್ತಿಯ ಕಾವ್ಯದಲ್ಲಿ ಬರುವ ಮುಖ್ಯರಸಗಳನ್ನು ಸಂಗ್ರಹವಾಗಿ ಹೇಳಿದಂತಿದೆ. ಕನ್ನಡ ಕವಿಗಳಲ್ಲಿ ಶೋಕರಸ ಅಭಿವ್ಯಕ್ತಿಯಲ್ಲಿ ಷಡಕ್ಷರಿಯು ಪ್ರಮುಖನಾಗಿ ಕಂಡುಬರುತ್ತಾನೆ. ಕೃತಿಯಲ್ಲಿಯ ‘ತಿರುಕೊಳವಿನಾಚಿಯ ಪ್ರಲಾಪದ ಪ್ರಸಂಗದಲ್ಲಿ ಶೋಕರಸವೇ ಹೆಪ್ಪುಗಟ್ಟಿದೆ. ತನ್ನ ಬಾಳಿನ ಏಕಮಾತ್ರ ಆಶಾದೀಪ್ತಿಯಾಗಿದ್ದ ಪುತ್ರನ ಆಕಸ್ಮಿಕ ಮರಣದ ಅಘಾತವನ್ನು ಸಹಿಸದ ಮಾತೃ ಹೃದಯದ ನೈಜ ಚಿತ್ರಣವನ್ನು ಈ ಪ್ರಸಂಗದಲ್ಲಿ ಕಾಣಬಹುದಾಗಿದೆ. ಈಕೆಯ ಪತಿ ಹಡಗಿನ ಅಪಘಾತದಿಂದ ಮಡಿದಿದ್ದನು. ಅವಳಿಗಿದ್ದ ಆರು ಮಕ್ಕಳೂ ಆರೇ ತಿಂಗಳಲ್ಲಿ ಸತ್ತರು. ಕೊನೆಗುಳಿದ ಓರ್ವನೆ ಮಗ ಶಂಕರನೇ ಆಕೆಯ ಬಾಳದೀಪ. ಜೀವನ ಸರ್ವಸ್ವ. ಆತ ಅವಳನ್ನು ಉದ್ಧರಿಸುತ್ತಾನೆ ಎಂದು ಆಕೆ ನಂಬಿದ್ದಳು. ಆದರೆ ಅವಳ ಆ ಆಶಾಗೋಪುರವೇ ಕುಸಿದು ಬಿದ್ದಾಗ ಅವಳಿಗೆಂಥ ಸಂಕಟವಾಗಬೇಡ! ಆ ಸಂದರ್ಭದಲ್ಲಿ ಆ ಮಾತೆಯ ಶೋಕವನ್ನು ಎಷ್ಟೆಂದು ಅಳೆಯಬಹುದು. ಅವಳು ನೀರಿಗೆ ಹೋದ ಸಮಯದಲ್ಲಿ ರಾಜಕುಮಾರನ ತುರಗ ವಿಹಾರದ ತುರಗದ ಕಾಲಿಗೆ ಸಿಕ್ಕು ಸತ್ತಾಗ ಮಾತೃ ಹೃದಯಕ್ಕೆ ಹೇಗಾಗಬೇಡ ! ಅವಳು ನೀರಿಗೆ ಹೋದ ಸಮಯದಲ್ಲಿ ರಾಜಕುಮಾರನ ತುರಗ ವಿಹಾರದ ಧ್ವನಿಯನ್ನು ಕೇಳಿ ಅದನ್ನು ನೋಡುವ ಆಸೆಯಿಂದ ಹೊರಬಂದ ಆ ಮಗು ಶಂಕರನು ತುರಗದ ಖುರ ಪುಟಕ್ಕೆ ಸಿಲುಕಿ ತಲೆ ಕತ್ತರಿಸಿ ಮಡಿಯುವುದೆಂದರೆ ಎಂಥ ವಿಧಿಲೀಲೇ! ಮನೆಗೆ ಮರಳಿದಾಗ ಮಗ ಕಾಣದಿರಲು ಎಲ್ಲೆಲ್ಲಿಯೂ ಅರಸಿ ಕೂಗಿ ಕರೆದು ಕೊನೆಗೆ ವಿಹಾರ ನೋಡಲಿಕ್ಕೆ ಹೋಗಿರಬಹುದೆಂದು ರಾಜಮಾರ್ಗದೆಡೆಗೆ ಬಂದ ಆಕೆ ಅಲ್ಲಿ ತನ್ನ ಪ್ರೀತಿಯ ಮಗುವಿನ ಮೃತ್ಯು ಅಪ್ಪಿದ ದೇಹವನ್ನು ನೋಡಿ ಎಷ್ಟು ಕಂಗಾಲಾಗಬೇಡ! ಆಗ ಅವಳು ನುಡಿವ ನುಡಿಗಳು ಎಂಥಹ ಕಲ್ಲು ಹೃದಯದವರನ್ನು ಕರಗಿಸದೇ ಇರದು.

 ಕರಿಗಳ ಕಾಲ್ಗೆ ಒಳಗಾದನೊ

 ವರೂಥ ಚಕ್ರಕ್ಕೆ ಸಿಲ್ಕಿದನೊ ಹಯ ಚಂಚತ್

 ಖುರ ಹತಿಯಿಂದ ಹಳಿದನೋ ಶಂ

 ಕರನು ಅಕಟ ಎಂದು ಬಗೆದು ಬಾಯ್ವಿಡುತಿರ್ದಳು (13-103)

ದುರ್ವಿಧಿಯು ಅವಳಿಗೆ ಅರಿವಿಲ್ಲದೆಯೆ ಸಂದರ್ಭೋಚಿತವಾಗಿ ಸತ್ಯವನ್ನು ನುಡಿಸಿತೇನೊ ಅವಳ ಆ ನುಡಿ ನಿಜವೇ ಆಗಿ ಎದುರಿಗೆ ಶಂಕರನ ಮೃತದೇಹ ಬಿದ್ದುದನ್ನು ಕಂಡಾಗ ಮಗುವಿನ ತಲೆಯನ್ನು ಕೈಯಲ್ಲಿ ಹಿಡಿದುಕೊಂಡು ಅವಳು

 ಎಳಗಿಳಿಯಂ ಕೊರಲ್ ಮುರಿದು ಮೋದಿದರ್ ಆರ್ ಮರಿಯಂಚೆಯಂ

 ಭಯಗೊಳಿಸುತೆ ಎರಂಕೆಯಂ ಪರಿದು ಪೊಯ್ದವರು ಆರ್ (13-105)ಎಂದು

ಬಸಿರಂ ಪೊಸೆದು ದೆಸೆದೆಸೆಗೆ ಬಾಯ್ವಿಟ್ಟು ಮೊರೆಯಿಟ್ಟು ಮಮ್ಮಲ ಮರುಗುವಳು

ಈ ಸಂದರ್ಭದಲ್ಲಿ ಆಕೆ ಹರಿಸುವ ಶೋಕ ಸಾಗರವನ್ನು ಕವಿಯು ಹೃದಯಂಗಮವಾಗಿ ವರ್ಣಿಸಿದ್ದಾನೆ.

 ಮಗುವಿಗೆ ನೋವಾಗ ಬಾರದೆಂಬ ಭಾವನೆ ತಾಯಿಗೆ ಇನ್ನೂ ಇದೆ.

 

 ಮುನ್ನಱುವರಳಿದಳಲನೆಲೆ

 ನಿನ್ನಂ ನೆಱೆ ನೋಡಿ ಮಗನೆ ಮಱಿದಿರ್ದೆಂಪೇಳ್

 ಇನ್ನಾರಿಂದಂ ಮಱೆದಪೆ

 ನೆನ್ನೊಳುಸಿರ್ ಸುಮ್ಮನಿರದಿರೆಲೆ ತನುಜಾತಾ [13-108]

 ಆರೊಡನುಸುರ್ವೆಂ ದುಃಖಮ

 ನಾರುಂಟೆ ನಗಕಟ ಮಗನೆ [1-120]

 ನೋಡುವ ಕಣ್ಣೊಡೆದುದು ಮಾ

 ತಾಡಿಪ ನಾಲಗೆ ಮುರುಂಟಿದುದು ನಿನ್ನಂ ಮುಂ

 ಡಾಡುವ ಕೈಯುಡಿದುದು ಸಲೆ

 ಪಾಡುವ ಬಾಯ್ಯೆಂದುದಣುಗ ನೀಂ ಮಡಿಯಲೊಡಂ [1-119]

ಎಂದು ಅಳುವಲ್ಲಿ ವ್ಯಷ್ಠಿಯೊಡನೆ ಸಮಷ್ಠಿಯು ದನಿಬೆರೆಸುತ್ತದೆ.

ಈಕೆಯ ಆರು ಜನ ಮಕ್ಕಳು ಮಡಿದಿದ್ದಾರೆ. ವ್ಯಾಪಾರಕ್ಕೆ ಹೋದ ಗಂಡ ಹಡಗು ಮುಳುಗಿ ಸಕಲ ಸಂಪತ್ತಿನೊಡನೆ ಜಲಸಮಾಧಿ ಹೊಂದಿದ್ದಾನೆ. ಪ್ರಾಣ ಕಳೆಯಂತೆ ತದ ನಂತರ ಜನಿಸಿದ ಮಗುವನ್ನು ನೋಡಿಯೇ ಕಾಲಕಳೆಯುತ್ತಿದ್ದಾಳೆ.

 ಮುನ್ನಱುವರದಳಲಂ ಎಲೆ ಮಗನೆ ನಿನ್ನಂ ನೆಱೆನೋಡಿ ಮಱೆದಿರ್ದೆಂ’ ಎಂದು ತಾಯಿ ಹೇಳುವಲ್ಲಿ ಮಕ್ಕಳನ್ನು ಕಳೆದುಕೊಂಡ ತಾಯಿಯ ಕರುಳ ವೇದನೆ ಹಾಗೂ ಉಳಿದವರನ್ನು ನೋಡಿ ಜೀವನವನ್ನು ಸಾಗಿಸುವ ಸಾಂತ್ವನಗಳನ್ನು ಗುರುತಿಸಬಹುದಾಗಿದೆ. ಮಗು ಗಳಗಳನೆ ಬೆಳೆದು ಧನವನ್ನು ಗಳಿಸಿ ಚರಾರ್ಚನೆಯನೆಸಗಿ ಉಜ್ವಲ ಸುಖವ ನೀವನೆಂದು ತಾಯಿಯ ಹೆಬ್ಬಯಕೆ. ಆದರೆ ಆತನು ತುರಗ ಖುರಹರೆಯಿಂದ ಮಡಿದು ಬಿದ್ದಿರುತ್ತಾನೆ. ಕಡೆಯಿಲ್ಲದ ದುಃಖ ಸಾಗರದಲ್ಲಿ ಮುಳುಗಿದ ತಿರುಕೊಳವಿನಾಚಿಯ ಮನಸ್ಸಿಗೆ ನಿಲುಗಡೆಯೆಂಬುದಿಲ್ಲ. ಆಕೆಯ ಮನದಲ್ಲಿ ಭಾವನೆಯ ತರಂಗಗಳು ಒಂದರ ಮೇಲೊಂದು ಎಡೆತಾಕುತ್ತವೆ. ಮುಂದಿನ ಆಸೆಯನ್ನು ನೆನೆಯು ವಷ್ಟರಲ್ಲಿಯೇ

 ಕೊರಲಂ ಮೆಟ್ಟುವ ಪದದೊಳ್

 ತುರಗಂ ಕಂಗೆಟ್ಟು ಜನನಿಯೆಂದೆನ್ನಂ ನೀಂ

 ಕರೆದೆಯೊ ಮಱೆದೆಯೊ ದೋಷಾ

 ಕರೆಯೆಂದೇಂ ತೊಱೆದೆಯೊ ತನೂಜನೆ ಪೇಳೈ [13-110]

 

ಎಂದು ಕೇಳುವಲ್ಲಿ ತಾಯಿಗೆ ಮಗು ಕರೆದುದರ ನೆನಪಾಗುತ್ತದೆ. ಮರುಕ್ಷಣದಲ್ಲಿಯೇ ಅವಳಿಗೆ ತನ್ನ ಮಗನು ಜೀವಂತನಾಗಿರುವನೆಂದು ಭಾಸವಾಗುತ್ತದೆ. ಮಗು ಮಡಿದಿದೆಯೆಂಬುದನ್ನು ಮರೆತು

 ಪಸಿಯದೆಲೆ ಕಂದ ಬತ್ತಿತು

 ಬಸಿರಿದು ಕಳೆಗುಂದಿ ತಾನನಂ ಕಣ್ಬೊಣರ್ಗಳ್

 ಮಸುಳ್ದುವುಣಲ್ಬಡೆಯದೆ ಮಿಗೆ

 ಬಸವಳಿದಿಂಪಿರ್ಪುಮುಚಿತವೇ ಸುಕುಮಾರಾ [13-114] ಎಂದು ಹೇಳುತ್ತಾಳೆ.

ಪಸಿದೆಯೆಲೆ ಕಂದ ಎಂದು ಕೇಳುವಲ್ಲಿ ಎಷ್ಟು ಸಹಜತೆಯಿದೆ?

ಸರಿವರೆಯದ ಮಕ್ಕಳು ಬಂದು ಶಂಕರನೆಲ್ಲಿಹನು ಎಂದು ಬೆಸಗೊಂಡರೆ ಅರಸರ ಹಯದಿಂದ ಮಡಿದನೆಂದು ಪೇಳಲೇ? ಎಂದು ಪ್ರಶ್ನಿಸುವ ತಾಯಿಯ ಅಳಲು ಎಂಥದು ? ಹೃದಯದ ಅಂತರಾಳದಿಂದ ಪುಟನೆಗೆದು ಗಗನವನ್ನು ಮುಟ್ಟುವ ಇಂಥ ಭಾವನೆಗಳು ಒಂದರ ಮೇಲೊಂದು ಬಂದು ತಾಯಿಯ ಮನವನ್ನು ಮುತ್ತಿ ಮುಸುಕುತ್ತವೆ.

ದೇವರ ಹರಕೆಯಂತೆ ಪಡೆದ ಆ ಮಗು ‘ತುರಗ ಖುರಕೆಂದು ಅಕಟ ಪೆತ್ತೆನೆ ಕುವರ ನಿನ್ನಂ ಶಂಕರಾ’ ಎಂದು ಶೋಕಿಸುವುದಕ್ಕಾಯಿತೆ ? ಕೊನೆಗೆ ನಿರುಪಾಯಳಾದ ಆ ತಾಯಿ ಮಗು ಸತ್ತರೂ ತಾನಿನ್ನೂ ಜೀವಿಸಿರುವಂತಾಯಿತೆ. ಎಂದು ಹಲುಬುವುದರಲ್ಲಿ ತಾಯಿ ಹೃದಯದ ನಿಜ ಮಮತೆಯನ್ನು ಪ್ರಕಟಿಸಿದ್ದಾಳೆ. ‘ನಿನ್ನ ಅಳಿವನು ಇಕ್ಷಿಸಿಯಂ ಎನ್ನ ಅಸು ಪೋಗದಂದುಂ ನಿನ್ನೊಳು ಎನ್ನಯ ಕೂರ್ಮೆ ನಿಜಮೆಂತು ಎನಿಪುದು’ ಎನ್ನುವಾಗ ಅವಳ ತಾಯಿ ಹೃದಯವನ್ನು ಕವಿ ಚೆನ್ನಾಗಿ ವಿಮರ್ಶಿಸಿದ್ದಾನೆ.

ತಾಯಿಯ ದುಃಖವು ಪರಮಾವಧಿಯನ್ನು ಮುಟ್ಟುತ್ತದೆ. ಆ ದುಃಖ ಜನ್ಯ ದೃಶ್ಯದಿಂದ ಕಣ್ಣು ನೀರಿನಿಂದ ತುಂಬಿ ಕುರುಡಾಗಿದೆ. ನಾಲಿಗೆ ಮಾತಾಡದೆ ಮರುಚಿದಂತಾಗಿದೆ. ಕರುಳೆದೆಗಳು ಮರಗಟ್ಟಿವೆ. ಚಲನೆಗೆ ಚಳಿ ಹಿಡಿದಿದೆ. ಬಾಹು ಪ್ರಜ್ಞೆಯೇ ಮಂಕು ಬಡಿದಂತೆ ಸ್ಥಗಿತವಾಗಿದೆ. ತನ್ನ ಜೀವನವೇ ಶೂನ್ಯವಾಗಿದೆ, ಆಕೆ ಉಪಾಯ ಕಾಣದೆ ರಾಜನ ಅರಮನೆಗೆ ಹೋಗಿ ಮೊರೆಯಿಡುತ್ತಾಳೆ. ನ್ಯಾಯ ಪಕ್ಷಪಾತಿಯಾದ ರಾಜನು ‘ಕೊಂದರಂ ಕೊಂದು ಕಳೆಯುವುದೇ ಧರ್ಮ’ ಎನ್ನುತ್ತಾನೆ. ತನ್ನ ಮಗನಿಗೆ ಶಿಕ್ಷೆಯಾಗಿ ಶಿರದಂಡವನ್ನು ವಿಧಿಸುತ್ತಾನೆ. ಮುಂದೆ ದುರಂತಗಳ ಮೇಲೆ ದುರಂತಗಳೊದಗಿ ಶಂಕರನ ಒಂದು ತಲೆಗೆ ಪ್ರತಿಯಾಗಿ ಏಳು ತಲೆಗಳು ದಂಡವಾಗುತ್ತವೆ. ಕೊನೆಯಲ್ಲಿ ಈಶ್ವರನ ಸಾಕ್ಷಾತ್ಕಾರವಾಗಿ ಎಲ್ಲವೂ ಮಂಗಳಕರವಾಗಿ ಅಂತ್ಯವಾಗುತ್ತದೆ. ಹೀಗೆ ಷಡಕ್ಷರಿಯು ಶಂಕರನ ಮೃತ್ಯು ದೃಶ್ಯ ಮತ್ತು ತಾಯಿ ತಿರುಕೊಳವಿನಾಚಿಯ ಸಂತಾಪವನ್ನು ಹೃದಯಂಗಮವಾಗಿ ಚಿತ್ರಿಸಿ ಕಾವ್ಯ ಪಾಂಡಿತ್ಯವನ್ನು ಧಾರಾಳವಾಗಿ ಮೆರೆದಿದ್ದಾನೆ. ಶೋಕ ಮತ್ತು ಕರುಣರಸಗಳು ಉಕ್ಕೇರಿ ಹರಿದಿವೆ. ತಿರುಕೊಳವಿನಾಚಿಯ ಪ್ರಲಾಪದ ಸನ್ನಿವೇಶ ಕನ್ನಡ ಕಾವ್ಯ ಪ್ರಪಂಚದಲ್ಲಿಯೇ ಮಿಗಿಲಾದುದು. ಇಲ್ಲಿ ವ್ಯಕ್ತಪಡಿಸುವ ಕರುಣ ರಸ ‘ಏಕೋರಸಃ ಕರುಣ ಏವ’ ಎಂಬ ಭವಭೂತಿಯ ಮಾತನ್ನು ನೆನಪಿಗೆ ತಂದು ಕೊಡುತ್ತದೆ. ಶೃಂಗಾರದ ಬಳ್ಳಿಗೆ ಈ ತೆರನಾದ ಕರುಣ ರಸ ನೀರೆರೆಯಲು ಅದರ ಸ್ವರೂಪವೇ ಬದಲಾಗುತ್ತದೆ. ಈ ಕರುಣಾ ರಸದ ಪರಿಣಾಮವಾಗಿಯೇ ಮಾನವತೆಗೆ ಪಕ್ವತೆ ಬಂದು ಏಳು ತಲೆಗಳು ಅರಳಿ ನಿಲ್ಲುತ್ತವೆ. ಈ ಪ್ರಸಂಗವು ಕವಿಯ ಕರುಣಾರಸ ಸಿದ್ಧಿಯ ಪ್ರತೀಕಕ್ಕೆ ನಿದರ್ಶನವಾಗಿದೆ. ಕವಿಯು ಇದನ್ನು ಎಷ್ಟೊಂದು ಸಹಜವಾಗಿ, ಹೃದಯದ್ರಾವಕವಾಗುವಂತೆ ಚಿತ್ರಿಸಿದ್ದಾನೆ. ಕವಿಯು ಯತಿಯಾಗಿದ್ದರೂ ಈ ಸಂದರ್ಭದಲ್ಲಿ ಪ್ರಾಪಂಚಿಕರ ಅದರಲ್ಲೂ ಅನಾಥ ಸ್ತ್ರೀಯೊಬ್ಬಳ ದುಃಖವೆಂತಹದೆಂಬುದನ್ನು ಅಂತಃಕರಣದ ಕಣ್ಣಿನಿಂದ ಕಂಡವನಾಗಿದ್ದಾನೆ. ಕಡಿವಡೆದೆಳವಳ್ಳಿಯಂತೆ ಕೊರಗಿ, ಪೊಸದಿಟ್ಟ ಪೂಮಾಲೆಯಂತೆ ಕಂದಿ,ಕುಂದಿ ಬಸಿರನ್ನು ಹೊಸೆದು ದೆಸೆದೆಸೆಗೆ ಬಾಯ್ವಿಟ್ಟು ಹಂಬಲಿಸುವ ತಿರುಕೊಳವಿನಾಚಿಯ ಪ್ರಲಾಪ ಕಲ್ಲೆದೆಯನ್ನು ಕರಗಿಸುವಂತಹದ್ದು. ಕನ್ನಡ ಕಾವ್ಯಗಳಲ್ಲಿ ರಾಘವಾಂಕನ ಹರಿಶ್ಚಂದ್ರಕಾವ್ಯದ ಚಂದ್ರಮತಿಯ ಪ್ರಲಾಪದ ನಂತರ ಅತ್ಯಂತ ಪರಿಣಾಮಕಾರಿಯಾಗಿ ಕರುಣರಸವನುಕ್ಕಿಸುವ ಸನ್ನಿವೇಶವಾಗಿದೆ. ಕವಿಗೆ ಎಂತಹ ಲೋಕಾನುಭವ ಇದೆ. ಅದೆಂತಹ ತಾಯಮಕ್ಕಳಅವ್ಯಾಜ್ಯ ಪ್ರೇಮದ ಅರಿವಿದೆ. ಕವಿಯ ಕರುಣಾರಸದ ನಿರೂಪಣೆ ಸಮಸ್ತ ಮಾನವ ಹೃದಯಗಳನ್ನೇ ಮಿಡಿಯುವಂತಹದ್ದು. ಕೃತಿಯ ಈ ಪ್ರಸಂಗವನ್ನು ಕುರಿತ ತಿರುಕೊಳವಿನಾಚಿಯ ಸಂದರ್ಭ ನಿಜವಾಗಿಯೂ ಹೃದಯ ಸ್ಪರ್ಶಿಯಾಗಿದೆ. ತಾಯಿಯ ಕರುಳನ್ನೇ ಎತ್ತಿ ಕಾವ್ಯದಲ್ಲಿಟ್ಟಂತಿದೆ ಎನ್ನುವ ಮಾತುಗಳು ಅರ್ಥ ಪೂರ್ಣವಾಗಿವೆ.

ಸತ್ಯೇಂದ್ರ ಚೋಳ:

 ಪಾತ್ರ ರಚನೆಯಲ್ಲಿ ಷಡಕ್ಷರಿಯು ತನ್ನ ಪ್ರತಿಭೆಯನ್ನು ಬೆಳಗಿದ್ದಾನೆ. ಕಲ್ಪನಾ ಚಾತುರ್ಯ, ಔಚಿತ್ಯ ಪ್ರಜ್ಞೆ, ಲೋಕಾನುಭವಗಳನ್ನು ವ್ಯಕ್ತಪಡಿಸಿದ್ದಾನೆ. ಪ್ರತಿಯೊಂದು ಚಿತ್ರಿತ ಪಾತ್ರವೂ ಕವಿಯಿಂದ ಜೀವಂತ ದೃಷ್ಟಿಯನ್ನು ಹೊಂದಿದ್ದು ಆದರ್ಶ ಮಾನವತೆ ವ್ಯಕ್ತಗೊಂಡಿದೆ. ಅಲ್ಲದೆ ಪ್ರತಿಯೊಂದು ಪಾತ್ರದಲ್ಲೂ ಶಿವಭಕ್ತಿ, ಸತ್ಯ, ಶೌಚ ಮೊದಲಾದ ದೈವಿಗುಣಗಳ ಅಂಶವನ್ನು ಕಾಣಬಹುದಾಗಿದೆ. ಶಿವಸಾಕ್ಷಾತ್ಕಾರವನ್ನು ಪಡೆಯುವುದನ್ನು ನೋಡುತ್ತೇವೆ.

   ಕೃತಿಯಲ್ಲಿನ ಸತ್ಯೇಂದ್ರ ಚೋಳನ ಪಾತ್ರ ಆತನ ಹಿರಿಮೆಗೆ ತಕ್ಕಂತೆಯೇ ಹೆಣೆಯಲ್ಪಟ್ಟಿದ್ದು ಕವಿಯ ಪ್ರೌಢಿಮೆಯನ್ನು ಎತ್ತಿ ತೋರಿಸುತ್ತದೆ. ಈತನು ಲೌಕಿಕದ ಯಾವ ಆಶೆ-ಆಮಿಶಗಳಿಗೂ ಒಳಗಾಗದ ಶಿವಭಕ್ತ. ಕಾವ್ಯದ ಕಥಾನಾಯಕನಲ್ಲದಿದ್ದರೂ ಕಥೆಯ ಜೀವನಾಡಿ.ಅವನು ಸದಾ ಶಿವಲಿಂಗ ಸಂಗತಿಯಲ್ಲಿ ದೃಢಯೋಗರಸದಿಂದ ಮಗ್ನನಾದವನು. ಸಂತಾನ ವಿಹೀನನಾಗಿರುವ ಆತನ ಸಂತಾನ ಪಡೆಯುವ ಬಯಕೆಯನ್ನು ಹೊಂದಿದ್ದರೂ, ಆತನ ರಾಣಿ ಅದಕ್ಕಾಗಿ ಪರಿತಪಿಸಿದ್ದರೂ ಆಚಾರ್ಯರು ಬರುವಾಗ ಶಿವನ ಪಂಚ ವಿಶಂತಿ ಲೀಲೆಗಳನ್ನು ಕೇಳುವುದರಲ್ಲಿ ತನ್ನ ಮನಸ್ಸನ್ನು ಕೇಂದ್ರಿಕರಿಸಿಕೊಂಡಿರುತ್ತಾನೆಯೇ ಹೊರತು ತನ್ನ ಮನದ ಬಯಕೆಯನ್ನು ಬೇಡಿ ಮಗುವಿನ ವರದಾನವನ್ನು ಬಯಸುವುದಿಲ್ಲ. ಮೋಕ್ಷ ಸಾಮ್ರಾಜ್ಯದಲ್ಲಿಯೇ ಲೋಕಸಾಮ್ರಾಜ್ಯಕ್ಕಿಂತ ಆತನಿಗೆ ಹೆಚ್ಚಿನ ಆಸಕ್ತಿ. ತನ್ನ ಸ್ವಂತದ ಸುಖಕ್ಕಿಂತ ಶರಣ ಸುಖ ಮಿಗಿಲೆಂದು ಭಾವಿಸುತ್ತಾನೆ. ಶಂಕರನ ತಾಯಿಯ ಗೋಳನ್ನು ಕೇಳಿ, ತನ್ನ ಮಗನಿಂದಾಗಿ ಶರಣರಿಗೆ ಎಂಥ ದುಃಖ ಬಂದೊದಗಿತೆಂದು ಪಶ್ಚಾತ್ತಾಪದಿಂದ ಬಳಲುತ್ತಾನೆ. ಶರಣರ ತಲೆತಗೆಯುವುದೇನು ಸಾಮಾನ್ಯವಾದ ಪಾಪವೆ? ಅಂಥ ಘೋರವಾದ ಪಾಪವು ಸ್ವತಃ ಶಿರವನ್ನು ನೀಡಿದರೂ ಸಹ ಹೋಗಲಾರದು, ಪರಿಹಾರವಾಗದು ಎಂದು ಪ್ರೀತಿಯ ಒಬ್ಬನೆ ಮಗನಿಗೆ ನ್ಯಾಯ ನಿಷ್ಠೂರನಾಗಿ ಮರಣ ದಂಡನೆಯನ್ನು ನೀಡುತ್ತಾನೆ. ಸಂತಾನವಿಲ್ಲೆಂದು ಹಂಬಲಿಸಿ ಕೊರಗಿ ಕಾಡಿಬೇಡಿ ದೇವರಿಂದ ವರವಾಗಿ ಪಡೆದ ಒಬ್ಬನೇ ಮಗನಾದ ವಂಶೋದ್ಧಾರಕ ಪುತ್ರನನ್ನು ಬಲಿಕೊಡುವ ಸಾಹಸವನ್ನು ಯಾವ ಪಾಲಕ ತಂದೆಯೂ ಮಾಡಲಾರನು. ಇಲ್ಲಿ ದೊರೆಯಲ್ಲಿ ನ್ಯಾಯದ ಅಮಾನುಷತ್ವವನ್ನು ಕಂಡರೆ ಆಶ್ಚರ್ಯ ಪಡಬೇಕಿಲ್ಲ. ಸತ್ಯೇಂದ್ರ ಚೋಳನಂತ ಪರಹಿತಾಸಕ್ತ ಪ್ರೀತಿಯ ಮಗನನ್ನು ಕೊಲ್ಗಂಬಕ್ಕೇರಿಸಲು ಆಜ್ಞಾಪಿಸಿದ್ದಲ್ಲಿ ಪರಮಾತ್ಮನ ಮೇಲಿನ ಆತನ ಅನನ್ಯ ಭಕ್ತಿಯ ದರ್ಶನವಾಗುತ್ತದೆ. ಆತನ ಘನತೆಗೂ ಈ ಸಂದರ್ಭ ಒಪ್ಪಿಕೊಡುವಂತಿದೆ. ತಂದೆಯ ಪಾತ್ರ ಪೋಷಣೆಯನ್ನು ಯತಾರ್ಥಗೊಳಿಸಿದಂತೆಯೆ ಮಗನ ಪಾತ್ರದಲ್ಲಿ ರಾಜಶೇಖರನೂ ಕವಿಯ ಕಾವ್ಯ ಸೃಷ್ಟಿಯಲ್ಲಿ ಮೆರೆದಿದ್ದಾನೆ.

ಕಾವ್ಯದ ನಾಯಕ ರಾಜಶೇಖರ:ಕವಿಯ ಮಾತಿನಲ್ಲಿಯೇ ಹೇಳುವುದಾದರೆ ರಾಜಶೇಖರನ ಜನನ ಕಾಲಕ್ಕೆ ಶಂಕರನೇ ನಲಿದನಂತೆ. ಭೂರಮೆ ಉತ್ಸಾಹವನ್ನು ಪಡೆದಳಂತೆ, ಇಂದ್ರಾದಿ ದೇವತೆಗಳು ಹರ್ಷಪಟ್ಟರಂತೆ. ಇದಕ್ಕೆಲ್ಲಾ ಕಾರಣ ರಾಜಶೇಖರನು ಶಿವಭಕ್ತ ಸತ್ಯೇಂದ್ರಚೋಳನಿಗೆ ಶಿವ ಪ್ರಸಾದವಾಗಿ ಜನಿಸಿದ್ದು. ರೂಪಶೇಖರನೂ, ಕಲಾಭಿಜ್ಞನೂ, ಶೃಂಗಾರ ಪ್ರಿಯನೂ, ಗಂಭೀರನೂ, ಪ್ರತಿಧರನೂ, ವೀರನೂ, ಸಮರ ಷಣ್ಮುಖನೂ ಆಗಿದ್ದ ರಾಜಶೇಖರನಿಗೆ ಸತ್ಯೇಂದ್ರನು ಪಟ್ಟಗಟ್ಟಿದಾಗಲೂ ಆ ಸಂದರ್ಭ ಸೌಂದರ್ಯವನ್ನು ಕವಿಯು ಮನೋಜ್ಞವಾಗಿ ವರ್ಣಿಸಿದ್ದಾನೆ. ಕರ್ತವ್ಯ ಶೀಲನಾದ ರಾಜಶೇಖರ, ಸಿಂಹಳೇಂದ್ರನು ರಾಜ್ಯಕ್ಕೆ ದಂಡೆತ್ತಿ ಬಂದ ವಾರ್ತೆ ಕೇಳಿ ಸಿಡಿಮಿಡಿಗೊಳ್ಳುತ್ತಾನೆ. ಅವನ ಶೌರ್ಯ ಗರಿಗೆದರುತ್ತದೆ. ಶೌರ್ಯೋತ್ಸಾಹಗಳಿಂದ ವೈರಿಯ ಮೇಲೇರಿ ವಿಜಯ ಪಡೆದು ಕೀರ್ತಿಯನ್ನು ಮೆರೆಸುತ್ತಾನೆ. ಸಿಂಹಳೇಂದ್ರನು ಸೋತು ಸಂಧಿಗೆ ಸಿದ್ಧನಾದಾಗ ತನ್ನ ಕ್ಷಮಾಗುಣವನ್ನು ತನ್ನ ಘನತೆಗೆ ತಕ್ಕಂತೆ ಪ್ರದರ್ಶಿಸಿ ಆತನನ್ನು ಕ್ಷಮಿಸುತ್ತಾನೆ. ಅಷ್ಟೇ ಅಲ್ಲ ಅತುಲ ಸೌಂದರ್ಯದಧಿ ದೇವತೆಯಂತಿದ್ದ ಅವನ ಪುತ್ರಿ ಸರ್ವಮಂಗಳೆಯನ್ನು ಮೆಚ್ಚಿ ವಿವಾಹವಾಗುತ್ತಾನೆ.

    ನಂತರದಲ್ಲಿ ಕವಿಯ ಮಾರ್ಗವೆ ಬದಲಾಗುವ ಘಟನೆ ನಡೆಯುತ್ತದೆ. ಅದಕ್ಕೆ ಕಾರಣವಾಗಿ ಸಿಂಧೂ ದೇಶದ ದೊರೆ ಕೊಡಲಾಗುವ ಎರಡು ದಿವ್ಯಾಶ್ವಗಳ ಕಾಣಿಕೆ ಗಮನ ಸೆಳೆಯುತ್ತದೆ. ಮಿತ್ರವೃಂದದ ಹಿತವಚನಗಳಿಗೆ ಕಿವಿಕೊಡದೆ ರಾಜಶೇಖರನು ಪಳಗದ ಅಶ್ವಗಳು ಎಂಬುದನ್ನು ಗಮನಿಸದೆ ಅವುಗಳನ್ನೇರಿ ವೈಹಾಳಿಗೆ ಹೋಗುತ್ತಾನೆ. ಇಲ್ಲಿ ವಿಧಿ ತನ್ನ ಬಲೆ ಬೀಸುತ್ತದೆ. ರಾಜಶೇಖರನ ವಿವೇಕ ಸೊರಗಿ ಕಾಲುಜಾರುವಂತೆ ಮಾಡುತ್ತದೆ. ಕುದುರೆ ಶಿಶುವಿನ ಮೇಲೆ ಹಾರಿ ಹತ್ಯಕ್ಕೆ ಕಾರಣವಾದಾಗ ತನ್ನ ಕೃತ್ಯಕ್ಕಾಗಿ ಪಶ್ಚಾತ್ತಾಪ ಪಡುವ ರಾಜಶೇಖರ ಎಂಥ ಶಿಕ್ಷೆಯನ್ನು ಅನುಭವಿಸುವುದಕ್ಕೂ ಸಿದ್ಧನಾಗುತ್ತಾನೆ. ಅವನ ಸೌಜನ್ಯತೆಯನ್ನು ಕವಿ ಈ ಸಂದರ್ಭದಲ್ಲಿ ಧಾರಾಳವಾಗಿ ಮೆರೆಸಿದ್ದಾನೆ. ತಂದೆ ವಿಧಿಸುವ ಮರಣ ದಂಡನೆಯನ್ನು ಸಂತೋಷದಿಂದ ಆತ ಸ್ವೀಕರಿಸಿದಾಗ ಓದುಗರಲ್ಲಿ ಆತನ ಬಗೆಗೆ ಮರುಕ ಉಂಟಾಗುತ್ತದೆ. ಕಣ್ಣಲ್ಲಿ ನೀರೂರುತ್ತದೆ.

 ಇತರೆ ಉಪ ಪಾತ್ರಗಳು: ಕವಿಯು ಉಪಪಾತ್ರಗಳ ಚಿತ್ರಣದಲ್ಲಿಯೂ ಚಾಕಚಕ್ಯತೆಯನ್ನು ತೋರುತ್ತಾನೆ. ರಾಜಶೇಖರನ ಮಿತ್ರನಾಗಿ ಮಿತವಚನನ ಪಾತ್ರ ಸೃಷ್ಟಿಯಲ್ಲಿಯೂ ಧಾರಾಳತನ ವ್ಯಕ್ತಪಡಿಸಿದ್ದಾನೆ. ಸಂದರ್ಭಾನುಸಾರವಾಗಿ ಮಿತ್ರನಿಗೆ ಹಿತವಚನಗಳನ್ನು ಹೇಳಿ ವಿವೇಕ ಹೇಳುವ ಸಂದರ್ಭವನ್ನು ಮಿತ್ರರ ಸುಖ ದುಃಖಗಳಲ್ಲಿಯು ಸಮಭಾಗಿಯಾಗಿ ಕಷ್ಟ ಸುಖಗಳೆರಡರಲ್ಲಿಯೂ ಮಿತ್ರನನ್ನು ಹಿಂಬಾಲಿಸುವಲ್ಲಿಯೂ ಕವಿಯು ಮಿತ್ರ ವಚನನ ಪಾತ್ರ ಪೋಷಣೆಗೆ ಅವಕಾಶವನ್ನು ಕಲಿಸಿದ್ದಾನೆ. ಕತೆಗೆ ಜೀವಂತ ಕಳೆ ತುಂಬಿದ್ದಾನೆ. ಸ್ತ್ರೀ ಪಾತ್ರ ಸೃಷ್ಟಿಯಲ್ಲಾದರೂ ಕವಿ ತನ್ನ ಪ್ರೌಢಿಮೆಯನ್ನು ಪ್ರದರ್ಶಿಸುತ್ತಾನೆ. ಅಮೃತಮತಿ ಸತ್ಯೇಂದ್ರ ಚೋಳನ ಸುಗುಣಗಳಿಗೆ ಸಿರಿಸಂಪದಗಳಿಗೆ, ಭಕ್ತಿ ಬುದ್ಧಗಳಿಗೆ ಅನುರೂಪಳಾದ ಅನುಗುಣವಾದ ರಾಣಿಯಾಗಿ ಮೆರೆದಿದ್ದಾಳೆ. ಸಂತಾನ ಶೂನ್ಯತೆಗಾಗಿ ಅತ್ತು ಅಳಲಿ, ಕಾಡಿಬೇಡಿ ಹೆತ್ತು ಹೊತ್ತ ಮಗನು ಶಿವಶರಣ ಹತನದ ಅಪರಾಧಕ್ಕೆ ಗುರಿಯಾಗಿ ಮರಣ ದಂಡನೆಗೆ ಪಾತ್ರನಾದಾಗ ಪತಿಯ ಆಜ್ಞೆಗೆ ಅನುಕೂಲಳಾಗಿಯೇ ನಡೆದು ಕೊಂಡ ಸಾಧ್ವಿಮಣಿಯಾಗಿದ್ದಾಳೆ. ಮಗನನ್ನು ಅಪ್ಪಿ ಎನ್ನಾಳ್ದನ ಸತ್ಯಂ ಗೆಲೆ ನಿನ್ನಿಸುವ ಭಕ್ತಶಿಶುಗೆ ಕುಡು ಚಿಂತೆಯೆದೇಕೆನ್ನಸುವೆ ಎಂದು ಬೀಳ್ಕೊಡುವ ಸಂದರ್ಭ ಮನನೀಯವಾದುದು. ವಿಧಿವಿಲಾಸವೆಂದು ವಿಧಿಯನ್ನು ಹಳಿದು ಸುಮ್ಮನ್ನಿರದೆ ತಾನೂ ಖಡ್ಗವನ್ನು ಸೆಳೆದು ಶಿರಚ್ಛೇದನಕ್ಕೆ ಸಿದ್ಧಳಾಗಿ ಶಿವಪಾರ್ವತಿಯರನ್ನು ಪ್ರತ್ಯಕ್ಷ ಪಡಿಸಿಕೊಂಡು ಭಕ್ತಿಯಿಂದ ಭೂಮಿಗೆಳೆತಂದ ಶಿವಶರಣೆಯಾಗಿದ್ದಾಳೆ.

 ಸ್ವಾಮಿನಿಷ್ಠೆಯನ್ನು ಮೆರೆಯುವುದಕ್ಕೆ ಕವಿ ಮಂತ್ರಿ ಪತಿಮೋಹಿಯ ಚಿತ್ರಣವನ್ನು ಮಾರ್ಮಿಕವಾಗಿ ಚಿತ್ರಿಸಿದ್ದಾನೆ. ಸದಾಕಾಲ ಪ್ರಭು ಹಿತವನ್ನೇ ತನ್ನ ಕಾಯಾ ವಾಚಾ ಮನಸಾ ಕಾಯಕವನ್ನಾಗಿಸಿಕೊಡು ಸ್ವಾಮಿ ನಿಷ್ಠ ಮಂತ್ರಿ ಸಮದರ್ಶಿಯಾಗಿ ರಾಜನೀತಿ ದರ್ಶಕನಾಗಿ ಹರಭಕ್ತನಾಗಿ ಶೋಭಿಸುತ್ತಾನೆ. ರಾಜಶೇಖರ ವಿಳಾಸದಲ್ಲಿ ಪಾತ್ರಗಳೆದುರು ಜೀವನದ ಸಮಸ್ಯೆಗಳು ಏಳುತ್ತವೆ. ಏಳುವಷ್ಟರಲ್ಲಿಯೇ ಅವು ಗುರು ಕೃಪೆಯಿಂದಲೋ, ಹರಕೃಪೆಯಿಂದಲೋ ಪರಿಹಾರವಾಗುತ್ತವೆ. ಶಿವ ಸಾಕ್ಷಾತ್ಕಾರದೊಂದಿಗೆ ಮುಕ್ತಾಯಗೊಳ್ಳುವ ಕಾವ್ಯದ ಪಾತ್ರಗಳೆಲ್ಲವೂ ಆದರ್ಶ ನಿಷ್ಠವಾದವು. ಒಂದು ನಿರ್ದಿಷ್ಟವಾದ ಉದ್ದೇಶದ ಚೌಕಟ್ಟಿನಲ್ಲಿಯೇ ಅವು ಚಲಿಸುವಂತಹವು. ಶಿವಭಕ್ತಿ, ನ್ಯಾಯ ನಿಷ್ಠೆಗಳ ಸಾಕಾರ ರೂಪವಾದ ಸತ್ಯೇಂದ್ರಚೋಳನ ಆದರ್ಶದಲ್ಲಿ ಉಳಿದವರೆಲ್ಲ ತಮ್ಮ ತಮ್ಮ ಸ್ಥಾನ-ಮಾನಗಳಿಗನುಗುಣವಾಗಿ ಹೆಜ್ಜೆ ಹಾಕುವ ಅನುಯಾಯಿಗಳು. ರಾಜಶೇಖರ ವಿಳಾಸದ ಕೊನೆಯ ದೃಶ್ಯ ಮೂಲಾನುಸಾರಿಯಾಗಿದ್ದರೂ ಪರಿಣಾಮದ ದೃಷ್ಟಿಯಿಂದ ಅತ್ಯುತ್ತಮವಾಗಿದೆ. ಬಾಲಕ ಶಂಕರನ ಕಡಿದು ಬಿದ್ದ ರುಂಡಕ್ಕೆ ಪ್ರತಿಯಾಗಿ ಆರು ತಲೆಗಳು ಅರ್ಪಿತವಾಗಿ ಏಳನೆಯ ತಲೆ ಬಲಿಗೊಳ್ಳುವಾಗ ಶಿವಸಾಕ್ಷಾತ್ಕಾರವಾಗಿ ಮಂಗಳಾನುಗ್ರಹವಾಗುವ ಆ ಸನ್ನಿವೇಶದಲ್ಲಿ ಪ್ರಕಟಗೊಂಡ ಶಿವಭಕ್ತರ ತೀವ್ರತರವಾದ ಭಕ್ತಿಯ ಆವೇಶ, ನಿಷ್ಠೆ ತತ್ವದ ಮುಂದೆ ದೇಹ ತೃಣವೆಂಬ ನಿಶ್ಚಲ ಮನೋಭಾವ ಓದುಗರನ್ನು ವಿಸ್ಮಯಗೊಳಿಸುತ್ತದೆ. ಸತ್ಯೇಂದ್ರಚೋಳನ ನ್ಯಾಯನಿಷ್ಠುರತೆಯನ್ನು, ರಾಜಶೇಖರನ ಸತ್ಯನಿಷ್ಠೆಯನ್ನು, ಪಂಚಾಕ್ಷರ ಮಂತ್ರಮಹಿಮೆಯನ್ನು, ಶಿವಭಕ್ತರೆಲ್ಲರ ಸರ್ವಸಮರ್ಪಣ ಭಾವವನ್ನೂ ಒಟ್ಟಾಗಿ ಚಿತ್ರಿಸುವ ಕಾವ್ಯದ ಕೊನೆಯ ಘಟ್ಟ ಒಂದು ಪುರಾಣ ಕಥೆಯಂತೆ ಇದ್ದರೂ ಭಾವಪೂರ್ಣ ಮತ್ತು ಗಂಭೀರವಾಗಿದೆ.

ಭಾವಚಿಂತಾರತ್ನ ರಾಜಶೇಖರ ವಿಳಾಸ :

 ಗುಬ್ಬಿಯ ಮಲ್ಲಣಾರ್ಯನು ಭಾವಚಿಂತಾರತ್ನದಲ್ಲಿ ವರ್ಣಕವಾಗಿ ಹೇಳಿದ ಕಥೆಯನ್ನೇ ಷಡಕ್ಷರಿಯು ರಾಜಶೇಖರ ವಿಳಾಸದಲ್ಲಿ ವಸ್ತುಕವಾಗಿ ಹೇಳಿರುವನು.

 ಮಲ್ಲಣಾರ್ಯನ ಕಾಲಕ್ಕೆ ಸತ್ಯೇಂದ್ರ ಚೋಳನ ಕಥೆ ಪ್ರಚಲಿತದಲ್ಲಿತ್ತು. ಪ್ರಚಾರದಲ್ಲಿದ್ದ ಆ ಕಥೆಯನ್ನು ಹೇಳುವಂತೆ ಮಲ್ಲಣಾರ್ಯನ ಗುರು ಶಿವಪೂಜೆಯಾರ್ಯನು ಆಜ್ಞೆ ಮಾಡಿದನು. ಆತ ಸತ್ಯೇಂದ್ರ ಚೋಳನ ಕಥೆಯನ್ನು ವಾರ್ಧಕ ಷಟ್ಪದಿಯಲ್ಲಿ ನಿರೂಪಿಸಿದ್ದಾನೆ. ಸತ್ಯೇಂದ್ರ ಚೋಳನ ಕಥೆ ತೀರ ಚಿಕ್ಕದು. ಕಥಾವಸ್ತು ಎಷ್ಟು ಚಿಕ್ಕದ್ದೆಂಬುವುದನ್ನು ಒಂದು ಪದ್ಯದಲ್ಲಿ ಹೇಳುತ್ತಾ “ಸಾಮಾನ್ಯ ಹೆಣ್ಣೋರ್ವಳು ಕಾಪಾಡಿಕೊಂಡಿದ್ದ ಮಗನು ಕುದುರೆಯ ಗೊರಸಿನಿಂದ ಸಾಯಲು ಅದನ್ನು ಕೇಳಿ ಪರೀಕ್ಷಿಸಿ ತನ್ನ ಮಗನ ತಲೆಯನ್ನು ಕತ್ತರಿಸುವಲ್ಲಿ ಭಕ್ತವಧೆಯೆಂದು ತನ್ನ ಶಿರದೊಡನೆ ಕತ್ತರಿಸಿದ ಎಂಟು ತಲೆಗಳನ್ನು ಪಡೆದು ಕೈಲಾಸಕ್ಕೆ ಹೋದ ಸತ್ಯೇಂದ್ರ ಚೋಳನ ಕಥೆಯನ್ನು ಬೆಳಸಿ ಕೃಪೆಮಾಡುವೆನು” ಎಂದಿರುವನು. ರಾಜಶೇಖರ ವಿಳಾಸವು 14 ಆಶ್ವಾಸಗಳನ್ನೊಳಗೊಂಡ ಮಹಾಕಾವ್ಯ. ಚಿಕ್ಕದಾಗಿರುವ ಸತ್ಯೇಂದ್ರ ಚೋಳನ ಕಥೆಯನ್ನು ಷಡಕ್ಷರಿ ಬೆಳಸಿ ಮಹಾಕಾವ್ಯವನ್ನಾಗಿ ಮಾಡಿರುವನು.

 ದ್ರಾವಿಡ ಭಾಷೆಯಲ್ಲಿದ್ದ ಆ ಕಥೆಯನ್ನು ಮಲ್ಲಣಾರ್ಯನು ‘ಉರ್ವೀಕವಿರಾಜ ರಾಜೀನುತಮಾಗಿರ್ದ’ ವರ್ಣಕದಲ್ಲಿ ಭಾವರತ್ನಾಕರವಾಗುವಂತೆ ಹೇಳಿದನು. ಅದನ್ನು ಆಲೋಕಿತ ಕಾವ್ಯ ಬೃಂದದೊಳಗಿಲ್ಲದ ಮಂಜುಳಯುಕ್ತಿ ಪುಂಜದಿಂದ ವಸ್ತುಕವಾಗಿ ನೀನು ಹೇಳು ಎಂದು ವಿದ್ವಜ್ಜನರು ಪ್ರಾರ್ಥಿಸಿದರು. ಅವರ ಕೋರಿಕೆಯ ಮೇರೆಗೆ ಹರಿಹರನ ಉದಿತ ಮಾರ್ಗದಿಂದ ಷಡಕ್ಷರ ಮಂತ್ರದಮಳ ಕಥನವನ್ನು ರಚಿಸಿದನು. ಮಲ್ಲಣಾರ್ಯನನ್ನು ಷಡಕ್ಷರಿ ಕಥಾ ದೃಷ್ಟಿಯಿಂದ ಅನುಸರಿಸಿದ್ದರೂ ವರ್ಣನಾ ಸಂದರ್ಭದಲ್ಲಿ ಷಡಕ್ಷರಿ ಮಲ್ಲಣಾರ್ಯನಿಗಿಂತ ಭಿನ್ನನಾಗಿ ನಿಲ್ಲುತ್ತಾನೆ. ಮಲ್ಲಣಾರ್ಯನು ಅಮೃತಮತಿಯ ವರ್ಣನೆಯನ್ನು ಕೇವಲ ಎರಡೇ ಪದ್ಯಗಳಲ್ಲಿ ಮನಮುಟ್ಟುವಂತೆ ಹೇಳಿದ್ದರೆ, ಷಡಕ್ಷರಿ ಅದನ್ನೇ ಹತ್ತು ಪದ್ಯಗಳಲ್ಲಿ (3-12.21) ಹೇಳಿರುವನು. ಹೀಗಾಗಿ ಈರ್ವರ ವರ್ಣನಾ ದೃಷ್ಟಿ ಬೇರೆಯಾಗಿದೆ.ಕವಿಯು ಮಲ್ಲಣಾರ್ಯನ ಭಾವಚಿಂತಾರತ್ನಕ್ಕೆ ಋಣಿಯಾಗಿದ್ದರೂ ಕಥಾಸಂವಿಧಾನದಲ್ಲಿ ಉಚಿತ ರೀತಿಯಲ್ಲಿ ಮಾರ್ಪಡಿಸಿಕೊಂಡು ತನ್ನತನವನ್ನು ಅಭಿವ್ಯಕ್ತಿಸಿದ್ದಾನೆ. ಸನ್ನಿವೇಶಗಳನ್ನು ಪಾತ್ರಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾನೆ.

 ಭಾವಚಿಂತಾರತ್ನದಲ್ಲಿ ಮೃತಮತಿಯ ಪುತ್ರದೊಹಳ ಕಂಡು ಬರದು. ಷಡಕ್ಷರಿಯಲ್ಲಿ ಈ ಭಾಗ ವಿಸ್ತಾರವಾಗಿ ಬಂದಿದೆ. ವಿರಕ್ತನೂ, ಮಠಾಧಿಪತಿಯೂ ಆದ ಷಡಕ್ಷರಿ ಮಕ್ಕಳಿಗಾಗಿ ಹಂಬಲಿಸುವ ಹೆಣ್ಣಿನ ಅಂತರಂಗವನ್ನು, ತಾಯ್ತನಕ್ಕಾಗಿ ತುಡಿಯುವ ಬಗೆಯನ್ನು ಅತ್ಯಂತ ಸಹಜವಾಗಿ ಚಿತ್ರಿಸಿರುವುದು ಆಶ್ಚರ್ಯದ ಸಂಗತಿ. ಕಥೆಗೆ ಎಷ್ಟು ಬೇಕೋ ಅಷ್ಟು ಮಾತ್ರ ತರುವ ಮಲ್ಲಣಾರ್ಯನಲ್ಲಿ ಕಥೆ ಮುಂದು, ವರ್ಣನೆ ಹಿಂದು. ಇದಕ್ಕೆ ತದ್ವಿರುದ್ಧ ಷಡಕ್ಷರಿ. ಮೊದಲೇ ಪುಟ್ಟದಾಗಿರುವ ಕಥೆಯ ಹಂದರದ ಮೇಲೆ ವರ್ಣನೆಯ ಬಳ್ಳಿಗಳನ್ನು ಯಥೇಚ್ಛವಾಗಿ ಹಬ್ಬಿಸಿದ್ದಾನೆ. ಕೆಲವೆಡೆ ವರ್ಣನೆಗಾಗಿ ವರ್ಣನೆ ಎಂಬಂತೆ ವರ್ಣನೆಗಳನ್ನು ತಂದಿದ್ದಾನೆ. ಭಾವಚಿಂತಾರತ್ನ ಹಾಗೂ ರಾಜಶೇಖರ ವಿಳಾಸ ಕಾವ್ಯಗಳಲ್ಲಿ ತಿರುಕೊಳವಿನಾಚಿಯ ಪ್ರಸಂಗ ಹಾಗೂ ಪಂಚಾಕ್ಷರಿ ಮಂತ್ರ ಮಹಿಮೆಯ ಪ್ರಸಂಗ ಹೆಚ್ಚಿನ ವ್ಯತ್ಯಾಗಳಿಲ್ಲದೆ ಬಂದಿವೆ. ತಿರುಕೊಳವಿನಾಚಿಯ ದಾರುಣ ಕಥೆ ಮಲ್ಲಣಾರ್ಯನ ಕಥನ ಕಾಲದಿಂದಾಗಿ ಓದುಗರ ಮನ ಕರಗಿಸುತ್ತದೆ. ಭಕ್ತಿರಸ ಪ್ರಧಾನವಾದ ಸತ್ಯೇಂದ್ರನ ಕಥೆಯಲ್ಲಿ ಕರುಣ ರಸವನ್ನು ಉಪಾಂಗವಾಗಿ ಮಲ್ಲಣಾರ್ಯ ತಂದಿರುವನು. ಶಿವನ ಭಕ್ತರ ನಿಷ್ಠಾಪೂರ್ಣ ಭಕ್ತಿ ಹಾಗೂ ಪಂಚಾಕ್ಷರಿ ಮಂತ್ರ ಮಹಿಮೆಯನ್ನು ಸಾರುವುದೇ ಮಲ್ಲಣಾರ್ಯನ ಕೃತಿ ರಚನೆಯ ಪ್ರಧಾನ ಗುರಿಯಾಗಿದೆ. ರಾಜಶೇಖರ ವಿಳಾಸದಲ್ಲಿ ತಿರುಕೊಳವಿನಾಚಿಯ ಪ್ರಲಾಪ ಹಾಗೂ ಶಿವಸಾಕ್ಷಾತ್ಕಾರದ ಭಾಗಗಳು ಭಾವಚಿಂತಾರತ್ನಾಕರವನ್ನು ಅನುಸರಿಸಿ ಬಂದಿದ್ದರೂ ಮೂಲಕ್ಕಿಂತ ಹೆಚ್ಚಿಗೆ ಹೃದಯ ಸ್ಪರ್ಶಿಯಾಗಿಯೂ, ಕಲ್ಪನಾಂಶ, ಭಾವನಾಂಶಗಳಲ್ಲಿ ಶ್ರೀಮಂತವಾಗಿಯೂ, ಜೀವಂತವಾಗಿಯೂ ಬಂದಿವೆ. ತಿರುಕೊಳವಿನಾಚಿಯ ಪ್ರಲಾಪದಲ್ಲಿ ಕವಿಯ ನೈಸರ್ಗಿಕವಾದ ಪ್ರತಿಭೆಯು ಸಹಜತೆಯ ಸಂಸರ್ಗದಿಂದ ಹಾಗೂ ಸಂಸ್ಪರ್ಶದಿಂದ ದಿವ್ಯವಾಗಿ ಮೂಡಿಬಂದಿದೆ. ಷಡಕ್ಷರಿಯು ಮಲ್ಲಣಾರ್ಯನನ್ನು ಕಥೆಯಲ್ಲಿ ಮಾತ್ರ ಅನುಸರಿಸಿದ್ದಾನೆ. ಅಂದರೆ ಕಾವ್ಯವಸ್ತುವನ್ನು ಆಶ್ರಯಿಸಿದ್ದಾನೆಯೇ ಹೊರತು ರೀತಿ, ವರ್ಣನೆ, ಶೈಲಿಗಳನ್ನಲ್ಲ. ಮೂಲ ಕಥೆಯನ್ನು ರಸವತ್ತಾದ ಕಾವ್ಯವಾಗಿಸಿದ ಅಪೂರ್ವ ಪ್ರತಿಭೆ ಷಡಕ್ಷರಿಯದಾಗಿದೆ.

ಕೃತಿ ರಚನೆಯಲ್ಲಿ ಕವಿ ಎರಡು ದೃಷ್ಟಿಗಳನ್ನಿರಿಸಿಕೊಂಡುದಾಗಿ ತಿಳಿದು ಬರುತ್ತದೆ. ಕಾವ್ಯಾರ್ಥವನ್ನು ಸಾಧಿಸುವುದರ ಜೊತೆಗೆ ಆತನು ಪರಮಾರ್ಥವನ್ನು ಸಾಧಿಸುವ ಧ್ಯೇಯೋದ್ದೇಶಗಳನ್ನಿರಿಸಿಕೊಂಡಿದ್ದನು. ಅದನ್ನು ಕಾವ್ಯದಲ್ಲಿ ಕಂಡುಬರುವ ಪಂಚಾಕ್ಷರಿ ಮಂತ್ರದ ಮಹಿಮೆ, ಶಿವಶರಣರ ಕಥಾಲಾಪ, ಶಿವಪಂಚವಿಶಂತಿ ಲೀಲಾ ಮೊದಲಾವುಗಳಲ್ಲಿ ಕಾಣಬಹುದಾಗಿದೆ.

 `ದೇಶಿ’ ಪ್ರಕಾರದಲ್ಲಿ ಕಾವ್ಯ ರಚನೆ ಮಾಡಬಲ್ಲ ಸಾಮಾರ್ಥ್ಯ ಆತನಿಗಿದ್ದರೂ ಮಾರ್ಗದ ಕಡೆಗೆ ಹೆಚ್ಚಿನ ಒಲವು. ವರ್ಣಕದ ಸರಳ ರೀತಿ ಹಿಡಿಸದೆ ವಸ್ತುಕದ ಓಜೋನ್ವಿತ ಶೈಲಿಗೆ ಮಾರು ಹೋಗಿದ್ದಾನೆ. ಕಾವ್ಯದ ಶೋಭೆಗೆ ನವರಸ ನಿರೂಪಣೆ, ಶ್ಲೇಷಾರ್ಥ, ಅಲಂಕಾರ ಜೋಡಣೆ, ಅಷ್ಟಾದಶ ವರ್ಣನೆ ಮೊದಲಾದ ಪುರಾತನ ಲಾಕ್ಷಣಿಕರ ಸಂಪ್ರದಾಯದ ಸೂತ್ರಗಳು ಅವಶ್ಯವೆಂದುಗೊಂಡು ಕೆಲವೆಡೆ ಔಚಿತ್ಯ ಮೀರಿದ ವರ್ಣನೆಗಳಿಗೆ ಅವಕಾಶ ಕಲ್ಪಿಸಿದೆ. ಇದರಿಂದಾಗಿ ಕಥಾತಂತ್ರಕ್ಕೆ ತಡೆ ಬಂದಂತಾಯಿತು ಎನಿಸಿದರೂ, ಪಾತ್ರ ಪೋಷಣೆಗೆ, ಸನ್ನಿವೇಶದ ರಚನೆಗೆ ಅನುಕೂಲವಾಗಿ ಕಾಣದಿದ್ದರೂ ಅಂಥಹ ವರ್ಣನೆಗಳಲ್ಲಿ ಕಂಡು ಬರುವ ಕಲ್ಪನಾ ವಿಲಾಸ, ವಸ್ತು ನಿಷ್ಠವಾದ ಗುಣಜ್ಞತೆ, ಪ್ರಕೃತಿ ವ್ಯಾಪಾರಗಳ ಸಹಜವಾದ ಮತ್ತು ಸುಂದರವಾದ ನಿರೂಪಣೆಗಳೆಲ್ಲ ಕವಿಯ ಪ್ರತಿಭೆಗೆ ಸಾಕ್ಷಿಯಾಗಿವೆ.

 ಕಥೆ, ಪಾತ್ರ ಪೋಷಣೆ, ರೀತಿ, ಪ್ರತಿಮೆ, ಶೈಲಿ ಮುಂತಾದ ಕಾವ್ಯಾಂಶಗಳು ಕಾವ್ಯದ ಹೊರ ಮೈ ಮಾತ್ರ. ಕವಿಯ ನಿಜವಾದ ಸತ್ವವನ್ನು ಆತನ ದರ್ಶನದಲ್ಲಿ ಪ್ರಕಟವಾಗುತ್ತದೆ. ನಿದರ್ಶನಕ್ಕೆ ಕೆಲವನ್ನು ಇಲ್ಲಿ ಕೊಡಲಾಗಿದೆ.

 ಬಾಲಾಬ್ಜಿನೀಕಾಂತ ಸದ್ಯುತಿಯಂ ಪಾರ್ವತಿಯಂ

 ಧರೆಯೋಳ್ಮೇಣ್ಬುಟ್ಟಿ ಪುಟ್ಟುತ್ತುರುಳ್ವ ನರರ ಮೇಲೆ

 ಆ ಕಥೆಯಂ ಕೃತಾರ್ಥ ಸುಮನೋಲತೆಯಂ

 ತೂಗೂತೆ ತೊನೆಯುತೆ ಬಾಗುತೆ ಬಳ್ಕುತೆ

 ಲತಾತನ್ವಂಗಿ ಕಲ್ಪದ್ರುಮ ಸಮನೃಪನೊಳ್ಕೂಡಿ ಬಾಳುತ್ತಮಿರ್ದಳ್

 ಗಡಿಗೆಟ್ಟುದು ಕಣ್ಬೇಟಂ ನಡೆಗೆಟ್ಟುದು ಚಿತ್ತವೃತ್ತಿ

 ಧೃತಿವಲ್ಲಿ ಕುಡಿಗೆಟ್ಟುದು ಸವಿಯ ಸಾರಿಡುವಮರ್ದುನಗೆ

ಮಾತಾನಾಡುವ ನಾಲಗೆ ಮುರುಂಟಿದುದು

ಇತ್ಯಾದಿಯಾಗಿ ಪದ ವಿಶೇಷಗಳು, ವಾಕ್ಯ ವಿಶೇಷಣಗಳು ಈ ಕಾವ್ಯದುದ್ದಕ್ಕೂ ಕಾಣಿಸಿಕೊಂಡಿವೆ. ಅಲಂಕಾರವೇ ಅವನ ಶೈಲಿಯ ಹೆಗ್ಗುರುತಾಗಿದೆ. ಒಳಗೆ ದರ್ಶನ ಸೌಂದರ್ಯ. ಹೊರಗೆ ಶೈಲಿಯ ಸೌಂದರ್ಯ, ಭಾವ-ಭಾಷೆಗಳ ಅನ್ಯೋನ್ಯ ಮೈತ್ರಿ ಹೀಗೆ ಹಿತಮಿತವಾದ ಜೋಡಣೆಯಿಂದ ಅವನ ಕಾವ್ಯವು ಹೆಗ್ಗಳಿಕೆಯನ್ನು ಪಡೆದಿದೆ. ಕವಿಯು ಸಂಸ್ಕೃತ ಮತ್ತು ಕನ್ನಡ ಉಭಯ ಭಾಷೆಗಳೆರಡರಲ್ಲಿಯೂ ಪಾಂಡಿತ್ಯ ಪಡೆದವನಾಗಿದ್ದಾನೆ. ವಿಪುಲವಾದ ಶಬ್ದ ಸಂಪತ್ತನ್ನು ಕಾವ್ಯದಲ್ಲಿ ಕಾಣಬಹುದಾಗಿದೆ. ತನ್ನ ಭಾವಾಭಿವ್ಯಕ್ತಿಗೆ ಉಭಯ ಭಾಷೆಗಳನ್ನು ಪದಗಳನ್ನು ಬಳಸಿಕೊಂಡಿದ್ದಾನೆ. ಕವಿಯ ಕೆಲ ಪದ್ಯಗಳು ಪ್ರಾಚೀನರ ಉದ್ಧಾಮ ಗ್ರಂಥಗಳ ಪದ್ಯಗಳಿಗೆ ಸಮಾನವಾದ ಶೈಲಿಯುಳ್ಳವಾಗಿಯೂ ಕೆಲವು ಪದ್ಯಗಳು ಪೂರ್ವ ಗ್ರಂಥಗಳ ಶೈಲಿಗಿಂತ ರಮಣೀಯ ಶೈಲಿಯುಳ್ಳವಾಗಿವೆ. ಲಾಲಿತ್ಯ, ಮಾಧುರ್ಯ, ಮಾರ್ದವ, ಅರ್ಥವ್ಯಕ್ತಿತ್ವ ಈ ಗುಣಗಳಿಗೆ ಶೈಲಿಯು ಅಭಿವ್ಯಕ್ತಗೊಂಡಿದೆ. ವಿಪುಲವಾದ ಶಬ್ದಸಂಪತ್ತಿಗೂ ಭಾವ ಸಂಪತ್ತಿಗೂ ಇರಬೇಕಾದ ಅನೋನ್ಯ ಮೈತ್ರಿ ಈತನ ಶೈಲಿಯಲ್ಲಿವೆ.

 

ಕನ್ನಡ ಸಾಹಿತ್ಯದಲ್ಲಿ ಷಡಕ್ಷರಿಯ ಸ್ಥಾನ :

   ಷಡಕ್ಷರ ದೇವನು ಬಹುಶ್ರುತನಾದ ಕವಿ. ಕನ್ನಡ ಸಂಸ್ಕೃತ ಉಭಯ ಭಾಷೆಗಳ ಮೇಲೆ ಅಪಾರವಾದ ಪ್ರಭುತ್ವವನ್ನು ಪಡೆದವನು. ಕಾವ್ಯ ನಿರ್ಮಿತಿಯ ಶಕ್ತಿಯನ್ನು ವರವಾಗಿ ಪಡೆದು ಕೊಂಡವನು. ತನ್ನ ಪ್ರತಿಭೆಯ ಪ್ರಭೆಯಿಂದ ಕಾವ್ಯಲೋಕದ ಕಳೆಯನ್ನು ಪ್ರಖರಗೊಳಿಸಿದವನು. ಷಡಕ್ಷರಿಯಲ್ಲಿ ಕವಿತಾಶಕ್ತಿಗಿಂತಲೂ ಕವಿತಾ ಚಾತುರ್ಯವೇ ಹೆಚ್ಚಾಗಿದೆ ಎಂಬ ವಿದ್ವಾಂಸರ ಅಭಿಪ್ರಾಯ ಒಪ್ಪತಕ್ಕುದ್ದಾಗಿದೆ. ಈ ಕವಿಯನ್ನು ಕೆಲವರು ಮಹಾಕವಿ ಎಂದು ಭಾವಿಸುತ್ತಾರೆ. ಆದರೆ ಈ ಮಾತನ್ನು ಎಲ್ಲರೂ ಒಪ್ಪಿಲ್ಲ. ರಂ.ಶ್ರೀ.ಮುಗುಳಿಯವರು ಅವನು ಮಹಾಕವಿಯೆಂದು ಭಾವಿಸುತ್ತಾರೆ, ನಮ್ಮ ನಮ್ರವಾದ ತಿಳುವಳಿಕೆಗೆ ಅವನು ಮಹಾಕವಿಯ ತೇಜೋಂಶವುಳ್ಳವನೇ ಹೊರತು ಮಹಾಕವಿಯ ಸಿದ್ಧಿ ಪಡೆದವನಲ್ಲ. ಅವನ ಯಾವ ಕೃತಿಗಳೂ ಭವ್ಯ ಸೌಂದರ್ಯದ, ಜೀವನ ಸಂಸ್ಪರ್ಶದ ಎತ್ತರವನ್ನು ಪಡೆಯಲಿಲ್ಲ ಎಂದಿದ್ದಾರೆ. ಷಡಕ್ಷರ ಕವಿಯ ರಾಜಶೇಖರ ವಿಳಾಸ ಕಾವ್ಯವು ಕನ್ನಡದ ಶ್ರೇಷ್ಠಕಾವ್ಯವಾಗಿದೆ. ಮೂಲತಃ ಸಣ್ಣದಾಗಿರುವ ಕಥಾವಸ್ತುವನ್ನು ಹದಿನಾಲ್ಕು ಆಶ್ವಾಸಗಳ ಮಹಾಕಾವ್ಯದ ವ್ಯಾಪ್ತಿಗೆ ಅಳವಡಿಸಿಕೊಂಡ ಕವಿಯ ಪ್ರಯತ್ನ ಗಮನಾರ್ಹವಾದುದು. ಕಾವ್ಯದ ವಸ್ತು ಸಣ್ಣದಿದ್ದಾಗ ಅಲ್ಲಿಯ ಪಾತ್ರಗಳ ಜೀವನ ವ್ಯಾಪಾರದಲ್ಲಿ ವೈವಿಧ್ಯತೆ,ವ್ಯಾಪಕತೆಗಳ ಕೊರತೆಯಿದ್ದಾಗ ಮಹಾಕಾವ್ಯವನ್ನು ಬರೆಯ ಹೊರಟ ಕವಿ ಸಹಜವಾಗಿ ವರ್ಣನೆಗಳನ್ನು ಆಶ್ರಯಿಸುವ ಅನಿವಾರ್ಯತೆ ಇದೆ. ಕಾವ್ಯದಲ್ಲಿ ಕವಿಗೂ ಈ ಅನಿವಾರ್ಯತೆ ಒದಗಿದೆ. ಷಡಕ್ಷರ ಕವಿಯ ವರ್ಣನೆಗಳು ಪಾಂಡಿತ್ಯಪೂರ್ಣವಾದ ಭಾಷಾಪ್ರೌಢಿಮೆಯಿಂದ ಕೂಡಿದವುಗಳು.ಸಹಜವಾಗಿ ಅವು ಓದುಗರ ಪರಿಶ್ರಮವನ್ನು ಬೇಡುತ್ತವೆ. ಆದಾಗ್ಯೂ ಕೆಲವು ಪದ್ಯಗಳು ಸುಲಭ ಗ್ರಾಹ್ಯವಾಗಿವೆ.

 ನಿದರ್ಶನಕ್ಕೆ, ತೂಗುತೆ ತೊನೆಯುತೆ ಬಳ್ಕುತೆ

 ಬಾಗುತೆ ಕಂಪಿಸುತೆ ಕನಕರುಚಿದಾಳುತ್ತಂ

 ರಾಗಿಸುತೆ ರಂಜಿಸುತೆ ಸೊಂ

 ಪಾಗಿರ್ದುವು ಕಣ್ಗೆ ಗಂಧಶಾಲಿವನಂಗಳ್ ( ರಾ.ವಿ.2-11) ಈಪದ್ಯದಲ್ಲಿ ಕನ್ನಡದ ಸೊಗಡನ್ನು ಕಾಣಬಹುದು. ಕವಿಯು ರಾಜಶೇಖರ ವಿಳಾಸದಲ್ಲಿ ಕಂದ ವೃತ್ತ ಗದ್ಯಗಳಲ್ಲಿ ಪರಿಪಕ್ವವಾದ ಆಶ್ಚರ್ಯಕಾರಕವಾದ ರಚನಾ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾನೆ. ಭಾವ ಭಾಷೆ ಪಾಂಡಿತ್ಯಗಳೆಲ್ಲದರಲ್ಲಿ ಶ್ರೀಮಂತನಾದ ಕವಿಗೆ ಕೊರತೆಯೆಂಬುದಿಲ್ಲ. ಪ್ರತಿಯೊಂದು ವರ್ಣನೆಯೂ ವಿಸ್ತೃತವಾಗಿಯೇ ಮೈವೆತ್ತಿದೆ. ಕಲೆಯ ಗತಿ ಕಡಿಮೆಯಾದರೂ ವರ್ಣನೆಯ ವಿವರ ಹೆಚ್ಚು ಎಂದು ಕೃತಿಯ ಸಂಪಾದಕರು ಪಟ್ಟಿರುವ ಅಭಿಪ್ರಾಯ ಸೂಕ್ತವಾದುದಾಗಿದೆ. ಕಥಾ ವಿಷಯಕ್ಕಿಂತ ವರ್ಣನೆಯೇ ಹೆಚ್ಚಾದರೂ ಷಡಕ್ಷರನ ಈ ಕೃತಿಯಲ್ಲಿ ಪ್ರಸನ್ನತೆ, ಗಾಂಭಿರ್ಯ, ಬೌದ್ಧಿಕ ನೀತಿಯ ಮಹತಿಗಳು ಧಾರಾಳವಾಗಿ ವ್ಯಕ್ತವಾಗಿ ಕಳೆದುಂಬಿದೆ. ಸತ್ಯ ಸಂಧತೆ, ನ್ಯಾಯನಿಷ್ಠುರತೆ, ಪರಾನುಕಂಪೆ, ನಿಷ್ಕಲ್ಮಷ ಪ್ರೇಮ, ನಿರ್ವಾಜ್ಯ ಸ್ನೇಹ, ಶಿವಭಕ್ತಿ ಮತ್ತು ಪಂಚಾಕ್ಷರಿ ಮಹಿಮೆ ಮೊದಲಾದವುಗಳು ಹಾಸುಹೊಕ್ಕಾಗಿವೆ, ಹೆಣೆದುಕೊಂಡಿವೆ. ಶೃಂಗಾರ ರಸ ಪ್ರಧಾನವಾದ ರಾಜಶೇಖರ ವಿಳಾಸದ ಸಂಪೂರ್ಣ ಕಥೆ ಅಂತಿಮಘಟ್ಟದ ವರೆಗೆ ಭೂ ಸ್ಪರ್ಶಿಯೇ ಆಗಿ ಮಾನವತೆಯ ಅಂಚಿನಲ್ಲಿಯೇ ನಡೆಯುತ್ತದೆ. ಶೃಂಗಾರ ಪ್ರಧಾನವಾಗಿರುವ ಈ ಕೃತಿಯಲ್ಲಿ ತಿರುಕೊಳವಿನಾಚಿಯ ಪ್ರಸಂಗದಲ್ಲಿ ಕರುಣ ರಸವು ಉಕ್ಕಿ ಹರಿದಿರುವುದನ್ನು ಮರೆಯುವಂತಿಲ್ಲ. ರಾಜಶೇಖರನು ಸಿಂಹಳ ರಾಜನೊಂದಿಗೆ ಮಾಡಿದ ಯುದ್ಧದ ಸನ್ನವೇಶದಲ್ಲಿ ವೀರರಸ, ಶಿವಭಕ್ತಿ, ಮಂತ್ರಾನುಷ್ಠಾನ, ಮಂತ್ರ ಮಹಿಮೆಗಳನ್ನು ವ್ಯಕ್ತಪಡಿಸುವಲ್ಲಿ ಭಕ್ತಿರಸ ಚೆನ್ನಾಗಿ ಅಭಿವ್ಯಕ್ತಗೊಂಡಿದೆ.

ಕವಿವಿಬುಧರ ಕಿವಿಯೊಳ್ ಸೂ

ಸುವ ನವರಸಮಿಳಿದು ತೀವಿ ತನುವಂ ಮನವಂ

ಕವಿದು ಪೊಸೂಸಿತೆನೆ ಪೊ

ಣ್ಮುವ ಸುಖಭಾಷ್ಪಂ ತುಳುಂಕೆ ಪೇಳ್ವುದು ಕೃತಿಯಂ ( 1-52) ಎಂಬ ಕಾವ್ಯಧೋರಣೆಯುಳ್ಳ ಕವಿಯುಸುಖಬಾಷ್ಪ ತುಳುಕುವ ರೀತಿಯಲ್ಲಿಯೇ ಕಾವ್ಯವನ್ನು ರಚಿಸಿದ್ದಾನೆ. ಪುರಾಣ ಪರಂಪರೆಗೆ ಸೇರಿಲ್ಲದೆ ಇರುವುದು ಈ ಕೃತಿಯ ಜನಪ್ರಿಯತೆಗೆ ಕಾರಣವಾಗಿದೆ. ಅವಾಸ್ತವ ಘಟನೆಗಳ ಉಲ್ಲೇಖ ಅತಿ ಕಡಿಮೆಯಾಗಿದ್ದು ಕೃತಿ ಪರಿಪೂರ್ಣವಾಗಿದೆ. ಕಥೆಯ ಪ್ರತಿಯೊಂದು ಸಂದರ್ಭ ಹಾಗೂ ಪಾತ್ರ ಸೃಷ್ಟಿಯನ್ನು ನೋಡಿದಾಗ ಉತ್ತಮವಾದೊಂದು ಸಂಸ್ಕೃತಿಯನ್ನು ನಾವು ಗಮನಿಸಬಹುದು. ಹರಿಹರ ಕವಿಯ ಮಾರ್ಗಾನುಸಾರಿಯಾದ ಷಡಕ್ಷರ ಕವಿಯು ಯಾವುದೇ ರಾಜನನ್ನಾಗಲಿ ಸ್ತುತಿಸದೇ ಶಿವ ಹಾಗೂ ಆತನ ಶರಣರನ್ನು ಸ್ತುತಿಸುವುದೇ ಮುಖ್ಯ ಗುರಿಯನ್ನು ಹೊಂದಿದ್ದಾನೆ. ಆದಾಗ್ಯೂ ಹರಿಹರನದ್ದು ಭಕ್ತವಾಣಿಯಾದರೆ ಷಡಕ್ಷರನದು ಪಂಡಿತ ವಾಣಿಯಾಗಿದೆ. ಕಾವ್ಯದಲ್ಲಿ ಶೃಂಗಾರ ತುಂಬಿದ್ದರೂ ಭಕ್ತಿ ಮುಕ್ತಿಗಳ ಕಡೆಗೆ ಅವನ ಉದ್ದೇಶ ಹರಿದಿದೆ.

  ಷಡಕ್ಷರ ಕವಿಯು 13ನೇ ಶತಮಾನದಿಂದ 19ನೇ ಶತಮಾನದ ವರೆಗೂ ಚಂಪೂಕವಿಗಳಲ್ಲಿ ಮಹಾಕವಿ ಎನಿಸಿಕೊಳ್ಳುವ ಯೋಗ್ಯತೆಯನ್ನು ಪಡೆದ ಏಕಮಾತ್ರ ಕವಿಯಾಗಿದ್ದಾನೆ. ತನ್ನ ಅಸಾಮಾನ್ಯ ಪ್ರತಿಭೆ ಪಾಂಡಿತ್ಯಗಳಿಂದ ಚಂಪೂ ಕಾವ್ಯಕ್ಕೆ ಅತ್ಯುನ್ನತ ಹಿರಿಮೆಯನ್ನು ತಂದುಕೊಟ್ಟವನು. ವೀರಶೈವ ಚಂಪೂ ಕವಿಗಳಲ್ಲಿ ಷಡಕ್ಷರ ಕವಿಯೇ ಶ್ರೇಷ್ಠನಾಗಿದ್ದಾನೆ. ಷಡಕ್ಷರನ ಕಾವ್ಯದ ಹೊರಮೈ ಚಂಪೂ ಆಕಾರವನ್ನು ತಳೆದರೂ ಅದರ ಒಳಗಿನ ಆತ್ಮ ಹರಿಹರ, ರಾಘವಾಂಕ, ಚಾಮರಸಾದಿಗಳು ಬೆಳಸಿಕೊಂಡು ಬಂದ ಅವಿನಾಶಿಯಾದ ತತ್ವದರ್ಶದಿಂದ ಪ್ರೇರಿತವಾಗಿದೆ ಎನ್ನುವ ಎಚ್.ತಿಪ್ಪೇರುದ್ರಸ್ವಾಮಿಗಳ ಮಾತು ಸ್ವೀಕಾರಾರ್ಹವಾಗಿದೆ. ಒಟ್ಟಾರೆ ಷಡಕ್ಷರ ಕವಿಯು ನಮ್ಮ ನಾಡಿನ ಅಸಾಮಾನ್ಯ ಪ್ರತಿಭಾಶಾಲಿ ಎಂಬ ಮಾತಿಗೆ ಎರಡಿಲ್ಲ. ಕನ್ನಡ ಸಾಹಿತ್ಯದ ಸೀಮಾ ಪುರುಷರಲ್ಲಿ ಒಬ್ಬನಾಗಿದ್ದಾನೆ. 17ನೇ ಶತಮಾನದಲ್ಲಿ ಚಂಪೂ ಯುಗವು ಮತ್ತೆ ತಲೆ ಎತ್ತುವಂತೆ ಮಾಡಿದ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಕನ್ನಡದ ಚಂಪೂ ಸಂಪ್ರದಾಯದ ಮಹಾಕವಿಗಳಲ್ಲಿ ಪಂಪನು ಮೊದಲಿಗನಾದರೆ ಷಡಕ್ಷರ ಕವಿಯೇ ಕೊನೆಯವನಾಗಿದ್ದಾನೆ. ತನ್ನ ಅನಂತರ ಬಂದ ಎಲ್ಲಾ ಮತೀಯ ಕವಿಗಳ ಮೇಲೂ ಪ್ರಭಾವ ಬೀರಿದ್ದಾನೆ.ಮಾನವ ಜೀವನದ ಮೌಲ್ಯಗಳನ್ನೂ ಆದರ್ಶಗಳನ್ನೂ ಸಮರ್ಥವಾಗಿ ಅಭಿವ್ಯಕ್ತಗೊಳಿಸಿರುವ ಮನನೀಯ ಕೃತಿಯಾಗಿದ್ದು ಮುದ್ರಣ ಸೌಲಭ್ಯವಿಲ್ಲದ ಆಕಾಲದಲ್ಲಿ ನಾಡಿನ ಮೂಲೆ ಮೂಲೆಗಳಲ್ಲಿ ಕಾವ್ಯದ ಹಸ್ತಪ್ರತಿಗಳು ದೊರೆಯುವಂತಾಗಿರುವುದು ಆ ಕೃತಿಯ ಮಹತ್ತರತೆಯನ್ನು ಸಾಬೀತು ಪಡಿಸುತ್ತದೆ.

 ಪರಾಮರ್ಶನ ಗ್ರಂಥಗಳು:

1. ಷಡಕ್ಷರದೇವ ವಿರಚಿತ ರಾಜಶೇಖರ ವಿಳಾಸಂ

 ಸಂ:ಆರ್.ಸಿ.ಹಿರೇಮಠ,ಎಂ.ಎಸ್.ಸುಂಕಾಪುರ

 ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ. 1962

2. ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ (ಸಂ:ಜಿ.ಎಸ್.ಶಿವರುದ್ರಪ್ಪ)

ಸಂಪುಟ-5, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು

3. ಪಿ.ವಿ.ನಾರಾಯಣ : ಚಂಪೂ ಕವಿಗಳು

ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ ಮಾಲೆ, ಸಂ:4

ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು. 1875

4. ದೇಜಗೌ : ಷಡಕ್ಷರದೇವ

ಪ್ರಚಾರೋಪನ್ಯಾಸ ಮಾಲೆ

ಮೈಸೂರು ವಿಶ್ವವಿದ್ಯಾಲಯ, ಮೈಸೂರು

5. ರಾಜಶೇಖರ ವಿಳಾಸದಲ್ಲಿ ಕಾವ್ಯ ಸೌಂದರ್ಯ

ಪಂಡಿತ ಚೆನ್ನಪ್ಪ ರೇಸೀಮೆ (ಪು. 119-161)

ಕಾವ್ಯ ಸೌಂದರ್ಯ,

ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು. 1978

6. ಭಾವಚಿಂತಾರತ್ನ ಆಧಾರದ ಮೇಲೆ ರಾಜಶೇಖರ ವಿಳಾಸ

ಎಸ್.ವಿದ್ಯಾಶಂಕರ (ಪು. 503-518)

ನೆಲದ ಮರೆಯ ನಿಧಾನ

ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು. 1997

  ಪಠ್ಯಕೇಂದ್ರಿತ ತಾತ್ವಿಕ ನೆಲೆಗಟ್ಟಿನ ನೆಲೆಯಲ್ಲಿ ತೀ.ನಂ.ಶ್ರೀಕಂಠಯ್ಯ ಅವರ ಸಂಪಾದಿತ ಕೃತಿಗಳು                                           ಡಾ.ಸಿ.ನಾಗಭೂಷಣ ...